ಎಬಿವಿಪಿಯಿಂದ ‘ಒಂದು ಗ್ರಾಮ ಒಂದು ತಿರಂಗಾ’ ಕಾರ್ಯಕ್ರಮ

KannadaprabhaNewsNetwork | Published : Aug 17, 2024 12:55 AM

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ 78ನೇ ಸ್ವಾತಂತ್ರೋತ್ಸವದ ಅಂಗವಾಗಿ ‘ಒಂದು ಗ್ರಾಮ ಒಂದು ತಿರಂಗಾ’ ವಿಶೇಷ ಅಭಿಯಾನದ ಅನ್ವಯ ಹಲವೆಡೆ ಧ್ವಜಾರೋಹಣ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ 78ನೇ ಸ್ವಾತಂತ್ರೋತ್ಸವದ ಅಂಗವಾಗಿ ‘ಒಂದು ಗ್ರಾಮ ಒಂದು ತಿರಂಗಾ’ ವಿಶೇಷ ಅಭಿಯಾನದ ಅನ್ವಯ ಹಲವೆಡೆ ಧ್ವಜಾರೋಹಣ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಯಿತು. ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು.ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ‘ಸ್ವಾತಂತ್ರ್ಯ ಸಂಭ್ರಮ’, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ನನ್ನ ಕನಸಿನ ಭಾರತ’ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ‘ವಿಶ್ವಗುರು ಭಾರತ’ ವಿಷಯದ ಮೇಲೆ ಸ್ಪರ್ಧೆ ನಡೆಯಿತು.

ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ ಬ್ರಹ್ಮಾವರ, ಸರ್ಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡು ಅಲೆವೂರು, ಸರ್ಕಾರಿ ಪ್ರೌಢ ಶಾಲೆ ತೆಂಕನಿಡಿಯೂರು, ಸರ್ಕಾರಿ ಪದವಿ ಪೂರ್ವ ಕಾಲೇಜು ತೆಂಕನಿಡಿಯೂರು, ಸರ್ಕಾರಿ ಪ್ರಾಥಮಿಕ ಶಾಲೆ ಉದ್ಯಾವರ, ಸರ್ಕಾರಿ ಪ್ರೌಢಶಾಲೆ ಉದ್ಯಾವರ, ಸರ್ಕಾರಿ ಪದವಿ ಪೂರ್ವ ಕಾಲೇಜು ಉದ್ಯಾವರ ಸೇರಿದಂತೆ ಎಂಟು ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ನಡೆಯಿತು.ಮಾರ್ಪಳ್ಳಿಯಲ್ಲಿ ಗೆಳೆಯರ ಬಳಗ ವತಿಯಿಂದ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಎಬಿವಿಪಿ ಉಡುಪಿ ನಗರ ಕಾರ್ಯದರ್ಶಿ ಶ್ರೀವತ್ಸ ಡಿ. ಗಾಂವ್ಕರ್ ಮಾತನಾಡಿ, 1857ಕ್ಕೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದರೂ ನಂತರ ಬ್ರಿಟಿಷರಿಂದ ಅಧಿಕಾರ ಮರಳಿ ಪಡೆಯಲು 90 ವರ್ಷಗಳ ಕಾಯಬೇಕಾಯಿತು. ಇದನ್ನು ಅವಲೋಕಿಸಿದರೆ ನಮ್ಮ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣಿಸುತ್ತದೆ. 1947ಕ್ಕೆ ನಮಗೆ ಕೇವಲ ಆಡಳಿತಾತ್ಮಕವಾಗಿ ಸ್ವಾತಂತ್ರ್ಯ ದೊರಕಿದೆ, ಮಾನಸಿಕವಾಗಿ ಇಂದಿಗೂ ಅನೇಕ ವಿಚಾರಗಳಲ್ಲಿ ಪಾಶ್ಚಿಮಾತ್ಯರ ಚಿಂತನೆಯನ್ನು ಹೊಂದಿದ್ದೇವೆ. ಹಾಗಾಗಿ ಭಾರತವು ಸ್ವಾತಂತ್ರ್ಯದ ನೂರರ ಸಂಭ್ರಮ ಆಚರಿಸುವ ಸಂದರ್ಭ ನಾವು ನಮ್ಮ ಸಂಸ್ಕೃತಿಯನ್ನು ಸ್ವಯಂಪ್ರೇರಿತರಾಗಿ ಗೌರವಿಸಿ ಆಚರಿಸಿ ಬೆಳೆಸಬೇಕು ಎಂದು ಹೇಳಿದರು.ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಎಬಿವಿಪಿ ವಿಭಾಗ ಸಂಚಾಲಕ ಗಣೇಶ್ ಪೂಜಾರಿ, ವಿಭಾಗ ಸಾಮಾಜಿಕ ಜಾಲತಾಣ ಪ್ರಮುಖ್ ನವೀನ್, ವಿಭಾಗ ಖೇಲೋ ಭಾರತ್ ಪ್ರಮುಖ್ ಸ್ವಸ್ತಿಕ್ ಪೂಜಾರಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಂಹಿತಾ ಕೆ., ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಭಾವನಾ, ಜಿಲ್ಲಾ ಎಸ್.ಎಫ್.ಡಿ. ಪ್ರಮುಖ್ ಕಿಶೋರ್, ತಾಲೂಕು ಸಹ ಸಂಚಾಲಕರಾದ ಅನಂತಕೃಷ್ಣ ಹಾಗೂ ಪ್ರಮುಖರಾದ ಮಾಣಿಕ್ಯ ಭಟ್, ರಕ್ಷಿತಾ, ಭೂಷಣ್ ಉಪಸ್ಥಿತರಿದ್ದರು.