ಯಾದಗಿರಿ ಪಿಎಸ್ಐ ಸಾವು ಪ್ರಕರಣ
ಬಡತನದಲ್ಲೇ ಬೆಳೆದಿದ್ದ ಅಪ್ಪಟ ಗ್ರಾಮೀಣ ಪ್ರತಿಭೆಹಗಲು ವೇಳೆಯಲ್ಲಿ ಕರ್ತವ್ಯ, ರಾತ್ರಿ ಪೂರ್ತಿ ಓದು
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಪಿಎಸ್ಐ ಆಗಲೇಬೇಕು ಎಂದು ಹಠ ತೊಟ್ಟಿದ್ದ ಪರಶುರಾಮ ಅರಸಿ ಬಂದಿದ್ದ 10 ಸರ್ಕಾರಿ ನೌಕರಿಗಳನ್ನು ತ್ಯಜಿಸಿ, ಹಠಕ್ಕೆ ಬಿದ್ದು, ಹಗಲಿರುಳು ಓದಿ, ಪಿಎಸ್ಐ ಆಗಿದ್ದ, ವರ್ಗಾವಣೆ ದಂಧೆಯ ಒತ್ತಡದಿಂದಾಗಿ ಈಗ ಉಸಿರು ಚೆಲ್ಲಿದ್ದಾರೆ ಎನ್ನಲಾಗುತ್ತಿದೆ.
ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ನಿವಾಸಿ, ಜನಕಮುನಿ ಹಾಗೂ ಗಂಗಮ್ಮ ದಂಪತಿಯ ಐದನೇ ಪುತ್ರ ಪರಶುರಾಮ ಅಪ್ಪಟ ಗ್ರಾಮೀಣ ಪ್ರತಿಭೆ. ಇಬ್ಬರು ಅಕ್ಕಂದಿರು, ಇಬ್ಬರು ಅಣ್ಣಂದಿರ ಹಾಗೂ ತಂದೆ-ತಾಯಿಗಳ ಮುದ್ದಿನ ಮಗ ಪರಶುರಾಮ ಬೆಳದಿದ್ದೇ ರೊಚಕ. ಸೋಮನಾಳ ಗ್ರಾಮದ ಮೊದಲ ಪಿಎಸ್ಐ ಎನ್ನುವ ಹೆಗ್ಗಳಿಕೆಯೂ ಇವರಿಗಿದೆ.ಗ್ರಾಮದಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ, ನಂತರ ತಾಲೂಕು ವ್ಯಾಪ್ತಿಯಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣ ಪೂರ್ಣಗೊಳಿಸಿ, ಧಾರವಾಡ ಕೆಸಿಡಿ ಕಾಲೇಜಿನಲ್ಲಿ ಪದವಿ ಅಭ್ಯಾಸ ಮಾಡಿದ್ದಾರೆ.
ಪಿಯುಸಿ ಫೇಲಾಗಿ, ಕೂಲಿ ಮಾಡಿದ್ದ:ಪಿಎಸ್ಐ ಪರಶುರಾಮ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿಯಲ್ಲಿ ನಾಲ್ಕು ವಿಷಯಗಳಲ್ಲಿ ಫೇಲಾಗಿದ್ದ. ಇದರಿಂದ ಮಾನಸಿಕವಾಗಿ ನೊಂದು ಕೂಲಿ ಮಾಡಲು ಬೆಂಗಳೂರಿಗೆ ಹೋಗಿದ್ದ. ಗಾಲ್ಫ್ ಮೈದಾನದಲ್ಲಿ ನೀರು ಬೀಡುವ ಕೆಲಸ ಮಾಡುತ್ತಿದ್ದನಂತೆ. ಕೊನೆಗೆ ಮತ್ತೆ ಗ್ರಾಮಕ್ಕೆ ಬಂದು, ಪಿಯುಸಿ ಪಾಸಾಗಿ, ನಂತರ ಮನೆಯವರನ್ನು ಒಪ್ಪಿಸಿ, ಕಲಾ ವಿಭಾಗಕ್ಕೆ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪದವಿ ಪ್ರವೇಶ ಪಡೆದ, ಅಲ್ಲಿಂದ ಈತನ ದಿಕ್ಕೆ ಬದಲಾಯಿತು, ಮುಂದಿನದೆಲ್ಲ ಯಶಸ್ಸು.
10 ಸರ್ಕಾರಿ ಹುದ್ದೆಗಳು:ಸಾಮಾನ್ಯವಾಗಿ ಒಂದು ಸರ್ಕಾರಿ ನೌಕರಿ ಪಡೆಯುವುದು ಈ ಕಾಲದಲ್ಲಿ ದುಸ್ತರ. ಅದೆಷ್ಟೋ ಜನರು ಜೀವನಪೂರ್ತಿ ಓದಿದರೂ ಒಂದು ಹುದ್ದೆಯನ್ನು ಧಕ್ಕಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಆದರೆ, ಪರಶುರಾಮ ಮಾತ್ರ ಪ್ರಯತ್ನ ಮಾಡಿದ ಬಹುತೇಕ ಹುದ್ದೆಗಳು ಒಲಿದು ಬಂದಿವೆ.ಪರಪ್ಪನ ಅಗ್ರಹಾರದ ಜೈಲರ್:ಇದಕ್ಕೂ ಮೊದಲು ಎಫ್ಡಿಎ ಆಗಿ ನೇಮಕವಾಗುತ್ತಾರೆ. ಅದಾದ ಮೇಲೆ ಪಿಡಿಒ ಆಗಿ ಆಯ್ಕೆಯಾಗುತ್ತಾರೆ. ಪಿಡಿಒ ಗ್ರೇಡ್-2 ಹುದ್ದೆಗೂ ಆಯ್ಕೆಯಾಗುತ್ತಾರೆ. ಕೆಎಸ್ ಆರ್ ಟಿಸಿ ಟ್ರಾಫಿಕ್ ಇನ್ಸ್ಪೆಕ್ಟರ್ ಆಗಿಯೂ ಆಯ್ಕೆಯಾಗುತ್ತಾರೆ. ಹೀಗೆ, ವಿವಿಧ ಸುಮಾರು 10 ಹುದ್ದೆಗಳಲ್ಲಿ ನೇಮಕವಾಗುತ್ತಾರೆ. ಆದರೆ, ಇವರು ಕೇವಲ ಎಫ್ಡಿಎ ಮತ್ತು ಜೈಲರ್ ಆಗಿ ಮಾತ್ರ ನೌಕರಿಗೆ ಸೇರಿಕೊಂಡು, ಕೆಲಕಾಲ ಸೇವೆ ಮಾಡಿದ್ದಾರೆ. ಉಳಿದ ಹುದ್ದೆಗೆ ಸೇರಿಕೊಳ್ಳುವುದಿಲ್ಲ. ಜೈಲರ್ ಆಗಿ, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸೇವೆ ಮಾಡುತ್ತಿರುವಾಗಲೇ 2018ರಲ್ಲಿ ಪಿಎಸ್ಐ ಆಗಿಆಯ್ಕೆಯಾಗುತ್ತಾರೆ.ಪಿಎಸ್ಐ ಆಗಲೇಬೇಕು ಎಂದು ಹಠ ಹಿಡಿದು ಹಗಲು ಇರುಳು ಓದಿದ್ದಾನೆ ಎನ್ನುತ್ತಾರೆ ಆತನ ಸ್ನೇಹಿತರು. ಓದಿನಲ್ಲಿ ಪ್ರತಿಭಾವಂತರಾಗಿದ್ದ ಪರಶುರಾಮ, ಗುಣ ಸಂಪನ್ನ, ಕಷ್ಟದಿಂದ ಓದಿ ಮೇಲೆ ಬಂದಿದ್ದು, ಕಷ್ಟದಲ್ಲಿದ್ದವರಿಗೆ ನೆರವಾಗುವ ಮನೋಭಾವ ಇತ್ತೆಂದು ಅವರ ಸ್ನೇಹಿತರು ಸ್ಮರಿಸುತ್ತಾರೆ.ಪರಿಪರಿಯಾಗಿ ಬೇಡಿಕೊಂಡಿದ್ದ:
ಪಿಎಸ್ಐ ಆಗಿ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಕೇವಲ ಏಳು ತಿಂಗಳಿಗೆ ವರ್ಗಾವಣೆಯಾಗುತ್ತದೆ. ಇದರಿಂದ ತೀವ್ರ ಮನನೊಂದಿದ್ದ ಪರಶುರಾಮ ತಮ್ಮ ಹಿತೈಷಿಗಳನ್ನು ಸಂಪರ್ಕ ಮಾಡಿ, ನನಗೆ ಇಲ್ಲಿಯೇ ಮುಂದುವರೆಯಲು ಅವಕಾಶ ಕೊಡಿಸಿ ಎಂದು ಕೇಳಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶಿಫಾರಸ್ಸು ಮಾಡಿದರೆ ನಾನು ಮುಂದುವರೆಯಬಹುದು. ದಯಮಾಡಿ ಯಾರಿಗಾದರೂ ಹೇಳಿ ಎಂದೆಲ್ಲ ಬೇಡಿಕೊಂಡಿದ್ದಾನೆ. ಆದರೆ, ಸಿಗಬೇಕಾದ ಸ್ಪಂದನೆ ಸಿಕ್ಕಿಲ್ಲ. ಈಗ ಸಾವನ್ನಪ್ಪಿದ್ದು, ಅವರ ಸಂಬಂಧಿಕರು ಸ್ನೇಹಿತರಿಗೆ ದೊಡ್ಡ ಶಾಕ್ ಆಗಿದೆ.ಪಿಎಸ್ಐ ಪರಶುರಾಮ ಅವರ ಸಾವಿಗೆ ಅವರ ಸ್ನೇಹಿತರ ವಲಯ ಭಾರಿ ಕಂಬನಿ ಮಿಡಿದಿದೆ. ದೇವರ ನಿರ್ಣಯಕ್ಕೆ ಧಿಕ್ಕಾರ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಪೋಸ್ ಮಾಡಿದ್ದಾರೆ.
ಎಲ್ಲರ ಒಡನಾಡಿ:ಪರಶುರಾಮ ಎಲ್ಲರ ಒಡನಾಡಿಯಾಗಿದ್ದ, ಮನೆಯವರು, ಸಂಬಂಧಿಕರು, ಸ್ನೇಹಿತರು ಎಂದರೆ ಪಂಚಪ್ರಾಣ ಆತನಿಗೆ ಎನ್ನುತ್ತಾರೆ ಸಹೋದರ ಹನುಮಂತಪ್ಪ.ನಮ್ಮ ಮನೆಯಲ್ಲಿ ಆತನೊಬ್ಬನೇ ನೌಕರನಾಗಿದ್ದ. ಬಹಳ ಕಷ್ಟಪಟ್ಟು ನೌಕರಿ ಸೇರಿಕೊಂಡಿದ್ದ, ಒಂದಲ್ಲ, ಹತ್ತು ಹುದ್ದೆಗಳು ಬಂದಿದ್ದರೂ ತ್ಯಜಿಸಿ, ಪಿಎಸ್ಐ ಆಗಲೇಬೇಕು ಎಂದು ಹಠ ತೊಟ್ಟು ಕೊನೆಗೂ ಪಿಎಸ್ಐ ಆಗಿದ್ದ, ಆದರೆ ಏನು ಮಾಡುವುದು ಈಗ ನಮ್ಮಿಂದ ದೂರವಾಗಿದ್ದಾನೆ. ಪಿಎಸ್ಐ ಆಗಿದ್ದ 6 ವರ್ಷದಲ್ಲಿಯೇ ಸಾವನ್ನಪ್ಪಿದ್ದಾನೆ. ನಮಗೆ ದಿಕ್ಕು ತಿಳಿಯದಾಗಿದೆ ಎಂದು ಸಹೋದರ ಹನುಮಂತಪ್ಪ ಬಿಕ್ಕಿ ಬಿಕ್ಕಿ ಅಳುತ್ತಾರೆ.