29ರಂದು ತೀರ್ಥಹಳ್ಳಿಯಲ್ಲಿ 10ನೇ ಕನ್ನಡ ಸಾಹಿತ್ಯ ಸಮ್ಮೇಳನ: ರಮೇಶ್‌ ಶೆಟ್ಟಿ

KannadaprabhaNewsNetwork | Published : Nov 23, 2023 1:45 AM

ಸಾರಾಂಶ

ಬಾಳೇಬೈಲಿನ ಕನ್ನಡ ಭವನದಿಂದ ವಿವಿಧ ಕಲಾತಂಡಗಳ ಮೆರವಣಿಗೆ ನಡೆಯಲಿದೆ. ಮಾಜಿ ಶಾಸಕ ಕಡಿದಾಳು ದಿವಾಕರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9.30 ಗಂಟೆಗೆ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ ಎಂದರು. ವಿಮರ್ಶಕ ರಾಜೇಂದ್ರ ಚೆನ್ನಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ.

- ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜನೆ

- - - - ಎಂ.ನವೀನ್‌ಕುಮಾರ್ ಸಮ್ಮೇಳನಾಧ್ಯಕ್ಷತೆ, ವಿಮರ್ಶಕ ರಾಜೇಂದ್ರ ಚೆನ್ನಿ ಅವರಿಂದ ಸಮ್ಮೇಳನ ಉದ್ಘಾಟನೆ

- ಬಾಳೇಬೈಲಿನ ಕನ್ನಡ ಭವನದಿಂದ ಕಲಾತಂಡಗಳ ಮೆರವಣಿಗೆಗೆ ಕಡಿದಾಳು ದಿವಾಕರ್ ಚಾಲನೆ

- ವಿವಿಧ ವಿಷಯಗಳ ಮೇಲೆ ಮೂರು ಗೋಷ್ಠಿಗಳ ಆಯೋಜನೆ - - - ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನ.29ರಂದು ಎಂ.ನವೀನ್‌ಕುಮಾರ್ ಸಮ್ಮೇಳನಾಧ್ಯಕ್ಷತೆಯಲ್ಲಿ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಕ.ಸಾ.ಪ. ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಹೇಳಿದರು.

ಮಂಗಳವಾರ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ತಾಲೂಕಿಗೆ ಸಾಹಿತ್ಯ, ರಾಜಕೀಯ, ಸಾಂಸ್ಕೃತಿಕ ಹಿನ್ನೆಲೆಯಿದೆ. ಎಲ್ಲ ಗೋಷ್ಟಿಗಳು ಮಲೆನಾಡನ್ನು ಮಾತ್ರ ಕೇಂದ್ರೀಕರಿಸಿವೆ. ಅಧ್ಯಕ್ಷರ ಆಯ್ಕೆ ವಿಚಾರದಲ್ಲಿಯೂ ಪ್ರಜಾಸತ್ತಾತ್ಮಕ ನಿಲುವನ್ನು ಕಾಯ್ದುಕೊಂಡಿದ್ದೇವೆ ಎಂದು ಹೇಳಿದರು.

ಬಾಳೇಬೈಲಿನ ಕನ್ನಡ ಭವನದಿಂದ ವಿವಿಧ ಕಲಾತಂಡಗಳ ಮೆರವಣಿಗೆ ನಡೆಯಲಿದೆ. ಮಾಜಿ ಶಾಸಕ ಕಡಿದಾಳು ದಿವಾಕರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9.30 ಗಂಟೆಗೆ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ ಎಂದರು.

ವಿಮರ್ಶಕ ರಾಜೇಂದ್ರ ಚೆನ್ನಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಿವಮೊಗ್ಗದ ಕಮಲಾ ನೆಹರು ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಎಸ್. ನಾಗಭೂಷಣ್ ಸಮಾರೋಪ ನುಡಿಗಳನ್ನು ಆಡಲಿದ್ದಾರೆ ಎಂದರು.

ಪ್ರಸಕ್ತ ಕಾಲಘಟ್ಟದ ಆತಂಕಗಳು, ಮಳೆಕಾಡು ಸಂಸ್ಕೃತಿ, ಸಮ್ಮೇಳನಾಧ್ಯಕ್ಷರ ಬದುಕು ಬರಹ ಎಂಬ ಮೂರು ಗೋಷ್ಠಿಗಳು ನಡೆಯಲಿದೆ. ʼಮಾನವೀಯ ಮೌಲ್ಯಗಳುʼ ಬಗ್ಗೆ ಲೇಖಕ ಎಚ್.ಕೆ. ವಿವೇಕಾನಂದ, ʼಪರಿಸರ ಸ್ನೇಹಿ ಪ್ರವಾಸೋದ್ಯಮʼ ಕುರಿತು ಪ್ರಗತಿಪರ ಕೃಷಿಕ ಕಡಿದಾಳು ದಯಾನಂದ್, ʼಪ್ರಕೃತಿಯ ಸಕಾಲಿಕ ಮತ್ತು ಅಕಾಲಿಕʼ ವಿಷಯದ ಬಗ್ಗೆ ಚಿಂತಕ ನೆಂಪೆ ದೇವರಾಜ್, ʼಸಾಹಿತ್ಯದಲ್ಲಿ ಮಲೆನಾಡಿನ ಮಹಿಳೆಯರುʼ ಕುರಿತು ಕೆ.ಟಿ. ಪಾರ್ವತಮ್ಮ, ʼಮಲೆನಾಡಿನ ಜಾನಪದʼ ಬಗ್ಗೆ ಜಾನಪದ ವಿದ್ವಾಂಸ ಶಿವಾನಂದ ಕರ್ಕಿ, ʼಕನ್ನಡ ಸಾಹಿತ್ಯಕ್ಕೆ ಮಲೆನಾಡಿನ ಕೊಡುಗೆʼ ಕುರಿತು ಲೇಖಕ ಸರ್ಜಾಶಂಕರ್ ಹರಳೀಮಠ, ʼಸಮ್ಮೇಳನಾಧ್ಯಕ್ಷ ನವೀನ್ ಕುಮಾರ್ ಕಾವ್ಯಗಳುʼ ಕುರಿತು ಉಪನ್ಯಾಸಕ ನವೀನ್ ಮಂಡಗದ್ದೆ, ʼಸಮ್ಮೇಳನಾಧ್ಯಕ್ಷರ ಕಥೆಗಳುʼ ಬಗ್ಗೆ ಉಪನ್ಯಾಸಕಿ ಅನಿತಾ ಹೆಗ್ಗೋಡು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿಗಳಾದ ಗಾಯತ್ರಿ ಶೇಷಗಿರಿ, ಸೌಳಿ ನಾಗರಾಜ್, ಸದಸ್ಯರಾದ ಆರ್.ಎಂ. ಧರ್ಮಕುಮಾರ್, ಕೆ.ಜಿ. ಮಹಮದ್, ನಿಶ್ಚಲ್ ಜಾದೂಗಾರ್, ಎಚ್.ಸಿ. ಪ್ರಸನ್ನಕುಮಾರ್ ಇದ್ದರು.

- - - (-ಫೋಟೋ: ಸಾಂದರ್ಭಿಕ ಚಿತ್ರ)

Share this article