ಜಿಲ್ಲೆಯಲ್ಲಿ 1119 ಬಿಪಿಎಲ್ ಕಾರ್ಡ್ ರದ್ದು !

KannadaprabhaNewsNetwork |  
Published : Nov 20, 2024, 12:35 AM IST
ಬಿಪಿಎಲ್ ಕಾರ್ಡ ಪೋಟೋ (ಸಾಂಧರ್ಬಿಕ ಚಿತ್ರ)  | Kannada Prabha

ಸಾರಾಂಶ

ಸರ್ಕಾರದ ಆಹಾರ ಇಲಾಖೆಯ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 253458 ಬಿಪಿಎಲ್ ಕಾರ್ಡ್‌ಗಳಿವೆ

ಶಿವಕುಮಾರ ಕುಷ್ಟಗಿ ಗದಗ

ಅನರ್ಹ ಬಿಪಿಎಲ್ ಕಾರ್ಡ್‌ದಾರರನ್ನು ರದ್ದು ಗೊಳಿಸಿ, ಅರ್ಹರ ಬಿಪಿಎಲ್ ಕಾರ್ಡ್‌ ಉಳಿಸುವುದಕ್ಕಾಗಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮದ ಭಾಗವಾಗಿ ಗದಗ ಜಿಲ್ಲೆಯಲ್ಲಿ ಒಟ್ಟು 1119 ಬಿಪಿಎಲ್ ಕಾರ್ಡ್‌ಗಳು ರದ್ದಾಗಿದೆ.

ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಇನ್ನೂ ಸಾವಿರಾರು ಸಂಖ್ಯೆಯ ಅನರ್ಹರಿದ್ದು, ಅವರ ಕಾರ್ಡ್‌ಗಳು ಕೂಡಾ ಸಧ್ಯದಲ್ಲಿಯೇ ರದ್ದಾಗಲಿವೆ ಎನ್ನುವ ಚರ್ಚೆ ಕೇಳಿಬರುತ್ತಿದೆ.

253458 ಬಿಪಿಎಲ್ ಕಾರ್ಡ್‌: ಸರ್ಕಾರದ ಆಹಾರ ಇಲಾಖೆಯ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 253458 ಬಿಪಿಎಲ್ ಕಾರ್ಡ್‌ಗಳಿವೆ. ಅವುಗಳಲ್ಲಿ ಸಧ್ಯ (ಮೊದಲ ಹಂತ) 1119 ಕಾರ್ಡ್‌ಗಳು ರದ್ದಾಗಿವೆ. ಇವುಗಳಲ್ಲಿ ಕೆಲ ಕಾರ್ಡ್‌ಗಳು ಎಪಿಎಲ್ ಆಗಿ ಬದಲಾವಣೆಯಾಗಿದ್ದು, ಯಾರ ಕಾರ್ಡ್‌ ಬದಲಾವಣೆಯಾಗಿದೆ. ಯಾವ ಕಾರಣಕ್ಕಾಗಿ ಬದಲಾವಣೆ ಮಾಡಿದ್ದಾರೆ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು ಇದಕ್ಕೆ ಇಲಾಖೆ ಕೂಡಲೇ ಸ್ಪಷ್ಟನೆ ನೀಡಬೇಕಿದೆ.

200ಕ್ಕೂ ಅಧಿಕ ಸರ್ಕಾರಿ ನೌಕರರು: ಸದ್ಯ ರದ್ದಾಗಿರುವ 1119 ಕಾರ್ಡ್‌ಗಳಲ್ಲಿ 200 ಕ್ಕೂ ಅಧಿಕ ಜನ ಸರ್ಕಾರಿ ನೌಕರರೇ ಇದ್ದಾರೆ ಎನ್ನುವುದು ವಿಶೇಷ, ಇವರೊಟ್ಟಿಗೆ ಆದಾಯ ತೆರಿಗೆ ಪಾವತಿಸುತ್ತಿರುವವರು, ನಿಗಮ ಮಂಡಳಿಗಳಲ್ಲಿ ಕಾಯಂ ನೌಕರಿ ಹೊಂದಿರುವವರ ಕುಟುಂಬಸ್ಥರು, ಮನೆಗಳನ್ನು ಬಾಡಿಗೆ ಕೊಟ್ಟು ಉತ್ತಮ ಆದಾಯ ಗಳಿಸುತ್ತಿರುವವರು, ಕಾರು ಸೇರಿದಂತೆ ಇತರೇ ವಾಹನ ಹೊಂದಿರುವವರು ಹೀಗೆ ಸರ್ಕಾರದ 8 ಕ್ಕೂ ಅಧಿಕ ನಿಯಮಗಳ ವ್ಯಾಪ್ತಿ ಮೀರಿದವರ ಕಾರ್ಡ್‌ ಸದ್ಯ ರದ್ದಾಗಿವೆ.

ಕುಟುಂಬಗಳಿಗಿಂತ ಕಾರ್ಡ್‌ಗಳೇ ಹೆಚ್ಚು: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ 253458 ಬಿಪಿಎಲ್ ಹಾಗೂ 39058 ಎಪಿಎಲ್ ಸೇರಿದಂತೆ ಒಟ್ಟು 292516 ಕಾರ್ಡ್‌ಗಳಿವೆ. ಜಿಲ್ಲೆಯಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆಗಿಂತಲೂ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗಿವೆ ಎನ್ನುವ ವಾದ ಅಧಿಕಾರಿಗಳು ಮಂಡಿಸುತ್ತಾರೆ. ಆದರೆ ಸಧ್ಯ ಲಭ್ಯವಿರುವ ಕುಟುಂಬಗಳ ಸಂಖ್ಯೆ 2011 ರ ಜನಗಣತಿ ಆಧಾರದಲ್ಲಿವೆ, 2021ರಲ್ಲಿ ಆಗಬೇಕಾಗಿದ್ದ ಜನಗಣತಿ ಕಾರ್ಯ ಕೋವಿಡ್ ಹಿನ್ನೆಲೆಯಲ್ಲಿ ಆಗದೇ ಇರುವುದರಿಂದ ಕಳೆದ 14 ವರ್ಷಗಳಲ್ಲಿ ಕುಟುಂಬಗಳ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳವಾಗಿದ್ದು, ಸಹಜವಾಗಿಯೇ ಕಾರ್ಡ್‌ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿವೆ. ಹಳೆ ಕುಟುಂಬಗಳ ದಾಖಲೆ ಆಧಾರದಲ್ಲಿ ಕಾರ್ಡ್‌ ರದ್ದು ಮಾಡಬಾರದು ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಹಾಗೆಯೇ ಉಳಿದಿವೆ:ಸಧ್ಯ ರದ್ದಾಗಿರುವ ಬಿಪಿಎಲ್ ಕಾರ್ಡ್‌ಗಳಲ್ಲಿ 200 ಜನ ಸರ್ಕಾರಿ ನೌಕರರು ಇದ್ದಾರೆ. ಅವರು ಸರ್ಕಾರಿ ನೌಕರಿ ಪಡೆಯುವ ಸಂದರ್ಭದಲ್ಲಿ ಆ ಕುಟುಂಬ ಬಡತನ ರೇಖೆಗಿಂತ ಕೆಳಗೆ ಇರುತ್ತದೆ. ಹಾಗಾಗಿ ಬಿಪಿಎಲ್ ಕಾರ್ಡ್‌ ಹೊಂದಿರುತ್ತಾರೆ. ಆದರೆ ಸರ್ಕಾರಿ ನೌಕರಿ ಪಡೆದ ನಂತರ ಆ ಕುಟುಂಬಗಳು ಅದನ್ನು ರದ್ದು ಪಡಿಸಬೇಕು, ಆದರೆ ರದ್ದು ಪಡಿಸದೇ ಇರುವುದೇ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್‌ ಹೊಂದಲು ಪ್ರಮುಖ ಕಾರಣವಾಗಿದೆ. ಇನ್ನು ತುಂಬು ಕುಟುಂಬದಲ್ಲಿನ ಒರ್ವರಿಗೆ ಸರ್ಕಾರಿ ನೌಕರಿ ಬಂದ ನಂತರ ಬಿಪಿಎಲ್ ಕಾರ್ಡ್‌ ರದ್ದಾದರೆ, ಇನ್ನುಳಿದ ಸಹೋದರರ ಗತಿ ಏನು ? ಹಾಗಾಗಿಯೇ ಹಲವಾರು ಸರ್ಕಾರಿ ನೌಕರರ ಕುಟುಂಬಗಳು (ಸರ್ಕಾರಿ ದಾಖಲೆಗಳ ಪ್ರಕಾರ) ಬಿಪಿಎಲ್ ಕಾರ್ಡ್‌ ಉಳಿಸಿಕೊಂಡಿದ್ದಾರೆ ಎನ್ನುವುದು ವಾಸ್ತವ.

ಜಿಲ್ಲಾ ಮತ್ತು ತಾಲೂಕು ಮಟ್ಟದ ಆಹಾರ ಇಲಾಖೆ ಅಧಿಕಾರಿಗಳ ಸರ್ಕಾರದ ಸೂಚನೆಯ ಮೇರೆಗೆ ನಡೆಸಿದ ಸಮೀಕ್ಷೆಯಲ್ಲಿ ಮೊದಲ ಹಂತದಲ್ಲಿ 1119 ಅನರ್ಹ ಬಿಪಿಎಲ್ ಕಾರ್ಡ್‌ದಾರರು ಪತ್ತೆಯಾಗಿದ್ದಾರೆ. ಇನ್ನು ಸಾವಿರಾರು ಸಂಖ್ಯೆಯ ಅನರ್ಹ ಬಿಪಿಎಲ್ ಕಾರ್ಡದಾರರಿದ್ದು, ಅವುಗಳ ಪರಿಶೀಲನೆಯೂ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಕಾರ್ಡ್‌ ಗಳು ರದ್ದಾಗಲಿವೆ. ಬಿಪಿಎಲ್‌ ಕಾರ್ಡು ರದ್ದು ಮಾಡುವ ಭರದಲ್ಲಿ ಅರ್ಹರಿಗೆ ತೊಂದರೆಯಾದರೆ ಯಾರು ಹೊಣೆ ಎನ್ನುವ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಅದಕ್ಕಾಗಿ ತಮ್ಮ ಕಾರ್ಡ್‌ನ ಬಗ್ಗೆ ಮಾಹಿತಿ ಪಡೆಯಲು ತಹಸೀಲ್ದಾರ ಕಚೇರಿ ಸೇರಿದಂತೆ ವಿವಿಧೆಡೆ ಓಡಾಡುತ್ತಿದ್ದಾರೆ.

ಸರ್ಕಾರದ ನಿಯಮ ಮತ್ತು ಮಾರ್ಗಸೂಚಿಯ ಅನ್ವಯ ಅನರ್ಹ ಬಿಪಿಎಲ್ ಕಾರ್ಡ್‌ದಾರರ ಪಟ್ಟಿ ಮಾಡಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಯಾವುದೇ ಕುಟುಂಬಗಳಿಗೂ ತೊಂದರೆಯಾಗುವುದಿಲ್ಲ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ ಎಚ್. ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ