136 ಕೋಟಿಯಲ್ಲಿ ತರೀಕೆರೆ-ಅಜ್ಜಂಪುರ ಪಟ್ಟಣಗಳಿಗೆ ಒಳಚರಂಡಿ ಯೋಜನೆ: ಸಚಿವ
ಕನ್ನಡಪ್ರಭ ವಾರ್ತೆ, ತರೀಕೆರೆ 136 ಕೋಟಿ ರು.ಗಳಲ್ಲಿ ತರೀಕೆರೆ ಮತ್ತು ಅಜ್ಜಂಪುರ ಪಟ್ಟಣಗಳಲ್ಲಿ ಒಳಚರಂಡಿ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ. ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಾಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಚರಂಡಿ ಯೋಜನೆಯಲ್ಲಿ ತರೀಕೆರೆ ಪಟ್ಟಣಕ್ಕೆ 50 ಕೋಟಿ ಮತ್ತು ಅಜ್ಜಂಪುರ ಪಟ್ಟಣಕ್ಕೆ 25 ಕೋಟಿ ರು. ಮಂಜೂರು ಮಾಡಲಾಗುವುದು, ಈ ಯೋಜನೆಯನ್ನು ಹಂತ ಹಂತವಾಗಿ ಶೀಘ್ರದಲ್ಲೇ ಕೈಗೊಳ್ಳಲಾಗುವುದು. ಅಜ್ಜಂಪುರದಲ್ಲಿ ಅ.28 ರಂದು ಶನಿವಾರ 25 ಕೋಟಿ ರು.ಗಳಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಗುದ್ದಲಿಪೂಜೆ ನೆರವೇರಿಸಲಿದ್ದಾರೆ.ಇದಕ್ಕಾಗಿ ಈಗಾಗಲೇ 25ರ ಕೋಟಿ.ರು.ಮಂಜೂರು ಮಾಡಲಾಗಿದ್ದು, ಅತಿ ಶೀಘ್ರದಲ್ಲೇ ಕಾಮಗಾರಿ ಮುಗಿಸಿ ಅಜ್ಜಂಪುರ ಪಟ್ಟಣಕ್ಕೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು. ಆಧುನೀಕರಣಃ ತರೀಕೆರೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ಅಧುನೀಕರಣಗೊಳಿಸಿ 2 ಅಂತಸ್ಥಿನ ನೂತನ ಕಟ್ಟಡ ನಿರ್ಮಿಸಿ ಎರಡನೆ ಅಂತಸ್ಥಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು, ತರೀಕೆರೆಯ ಬಿ.ಹೆಚ್.ರಸ್ತೆ ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಫುಟ್ ಪಾಥ್ ನಿರ್ಮಿಸಲು ನಗರಾಭಿವೃದ್ದಿ ಇಲಾಖೆಯಿಂದ10 ಕೋಟಿ ರು. ಅರ್ಥಿಕ ನೆರವುನೀಡಲಾಗುವುದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸಿ ಒಂದುವರೆ ತಿಂಗಳಿನಲ್ಲೇ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮೂಲಕವೇ ಪ್ರಾರಂಭಿಸಲಾಗುವುದು. ಕೆಎಸ್ಆರ್ಟಿಸಿ ಬಸ್ ಡಿಪೋವನ್ನು ಸ್ಥಾಪಿಸಲಾಗುವುದು ಎಂದು ವಿವರಿಸಿದರು. ಸರ್ಕಾರದ ನಿರ್ಧಾರ: ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸ್ಥಳೀಯ ಸಂಸ್ಥೆಗಳಾದ ಪುರಸಭೆ ವ್ಯಾಪ್ತಿಯ ಪಟ್ಟಣದ ಸರ್ವತೋಮುಖ ಅಭವೃದ್ದಿಗೆ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಇದಕ್ಕೆ ಹೆಚ್ಚು ಅನುದಾನ ಮಂಜೂರು ಮಾಡುತ್ತಿದೆ. ಆದರಂತೆ ತರೀಕೆರೆ ಮತ್ತು ಅಜ್ಜಂಪುರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು 250 ಕೋಟಿ ರು.ಅನುದಾನ ದೊರೆಯಲಿದೆ ಎಂದರು. ಪುರಸಭೆ ವತಿಯಿಂದ ಪುರಸಭೆ ಅಧ್ಯಕ್ಷರು ಪರಮೇಶ್ ಮತ್ತು ಸದಸ್ಯರು ಹಾಗೂ ಸಿಬ್ಬಂದಿ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಜಿ.ಎಚ್.ಶ್ರೀನಿವಾಸ್, ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಕಡೂರು ಶಾಸಕ ಆನಂದ್, ತರೀಕೆರೆ ಪುರಸಭೆ ಅಧ್ಯಕ್ಷ ಪರಮೇಶ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್, ಮುಖಂಡರಾದ ಟಿ.ಜಿ.ಮಂಜುನಾಥ್, ಮಾಜಿ ಪುರಸಭಾಧ್ಯಕ್ಷ ಬಸವರಾಜ್ ಮತ್ತಿತರರು ಭಾಗವಹಿಸಿದ್ದರು. 27ಕೆಟಿಆರ್.ಕೆ.10ಃ ತರೀಕೆರೆ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಮಾತನಾಡಿದರು. ಶಾಸಕರಾದ ಜಿ.ಎಚ್.ಶ್ರೀನಿವಾಸ್, ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಕಡೂರು ಶಾಸಕ ಆನಂದ್ ಮತ್ತಿತರರು ಇದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.