ಭದ್ರಾವತಿ ಪೊಲೀಸರ ಕಾರ್ಯಾಚರಣೆಯಲ್ಲಿ 14 ಬೈಕ್‌ಗಳ ವಶ

KannadaprabhaNewsNetwork |  
Published : Dec 19, 2023, 01:45 AM IST
ಚಿತ್ರ: ಡಿ೧೮-ಬಿಡಿವಿಟಿಭದ್ರಾವತಿ ಉಪವಿಭಾಗದ ಪೊಲೀಸರು ವಿವಿಧೆಡೆ ಕಳವು ಮಾಡಲಾಗಿದ್ದ ೧೪ ಹಾಗು ಕಳವು ಕೃತ್ಯಕ್ಕೆ ಬಳಸಿಕೊಳ್ಳಲಾಗಿದ್ದ ೨ ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ೫.೮೦ ಲಕ್ಷ ರು. ಮೌಲ್ಯದ ಒಟ್ಟು ೧೬ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. | Kannada Prabha

ಸಾರಾಂಶ

ಬೈಕ್‌ ಕಳ್ಳರಿಗೆ ಭದ್ರಾವತಿ ನಗರದ ಉಪವಿಭಾಗ ಪೊಲೀಸರು ಖೆಡ್ಡಾಕ್ಕೆ ಕೆಡವಿ, 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್‌ ತಂಡದ ಕಾರ್ಯಾಚರಣೆಗೆ ಜಿಲ್ಲಾ ಎಸ್‌ಪಿ ಅವರಿಂದ ಅಭಿನಂದನೆಯನ್ನೂ ಗಿಟ್ಟಿಸಿದ್ದಾರೆ. ಹೀಗೆಂದು ಎಎಸ್‌ಪಿ ಅನಿಲ್ ಕುಮಾರ್ ಭೂಮಾರೆಡ್ಡಿ ಹೇಳಿದ್ದಾರೆ.

- ಮೂವರ ಬಂಧನ । ಭದ್ರಾವತಿ ಪೊಲೀಸರ ಕಾರ್ಯಾಚರಣೆಗೆ ಎಸ್‌ಪಿ ಅಭಿನಂದನೆ

- - - ಕನ್ನಡಪ್ರಭ ವಾರ್ತೆ, ಭದ್ರಾವತಿ

ನಗರದ ಉಪವಿಭಾಗ ಪೊಲೀಸರು ಕಾರ್ಯಚರಣೆ ನಡೆಸಿ, ವಿವಿಧೆಡೆ ಕಳವು ಮಾಡಲಾಗಿದ್ದ 14 ಹಾಗೂ ಕಳವು ಕೃತ್ಯಕ್ಕೆ ಬಳಸಿಕೊಳ್ಳಲಾಗಿದ್ದ 2 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ₹5.80 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮಾರೆಡ್ಡಿ ಹೇಳಿದರು.

ಸೋಮವಾರ ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ತಾಲೂಕಿನ ಸಿದ್ದಾಪುರ ಹೊಸೂರು ಉರ್ದು ಶಾಲೆ ಹಿಂಭಾಗ ನಿವಾಸಿಗಳಾದ ಅಬ್ದುಲ್ ಕರೀಂ ಅಲಿಯಾಸ್ ಮನ್ನಾ (27) ಮತ್ತು ಅರ್ಷೀಲ್ ಪಾಷಾ ಅಲಿಯಾಸ್ ಹರ್ಷೀಲ್ (34) ಹಾಗೂ ಶಿವಮೊಗ್ಗ ರಾಗಿಗುಡ್ಡ ಮೊರಾರ್ಜಿ ದೇಸಾಯಿ ಶಾಲೆ ಬಳಿಯ ನಿವಾಸಿ ಪ್ರಭು ಅಲಿಯಾಸ್ ಕೋಳಿ (27) ಎಂಬವರನ್ನು ಬಲೆಗೆ ಕೆಡವಿದ್ದಾರೆ.

ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ 7, ತರೀಕೆರೆ ಪೊಲೀಸ್ ಠಾಣೆಗೆ 1, ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ಸೇರಿದ 1, ಪೇಪರ್‌ಟೌನ್ ಪೊಲೀಸ್ ಠಾಣೆಗೆ ಸೇರಿದ 1, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ಸೇರಿದ 2, ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಸೇರಿದ 1 ಮತ್ತು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ 1 ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ಪತ್ತೆ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ, ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್. ನಾಗರಾಜ್ ಮೇಲ್ವಿಚಾರಣೆಯಲ್ಲಿ ವೃತ್ತ ನಿರೀಕ್ಷಕರಾದ ಶ್ರೀಶೈಲ್‌ಕುಮಾರ್ ಮತ್ತು ಜಗದೀಶ ಸೋಮನಾಳ, ಪೇಪರ್‌ ಟೌನ್ ಪೊಲೀಸ್ ಠಾಣೆಯ ನಿರೀಕ್ಷಕಿ ನಾಗಮ್ಮ ಮತ್ತು ಹೊಳೆಹೊನ್ನೂರು ಪೊಲೀಸ್ ಠಾಣೆ ನಿರೀಕ್ಷಕ ಲಕ್ಷ್ಮೀಪತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಠಾಣಾಧಿಕಾರಿಗಳಾದ ಸುರೇಶ್ ಮತ್ತು ರಮೇಶ್, ಉಪ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಪೊಲೀಸ್ ಸಿಬ್ಬಂದಿ ನವೀನ್, ಚನ್ನಕೇಶವ, ನಾಗರಾಜ ಹಾಗೂ ಆದರ್ಶ ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಡಿ.16ರಂದು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಂಡದ ಯಶಸ್ಸಿಗೆ ಜಿಲ್ಲಾ ರಕ್ಷಣಾಧಿಕಾರಿ ಅವರು ಪ್ರಶಂಸಿಸಿ, ಅಭಿನಂದಿಸಿದ್ದಾರೆ ಎಂದರು.

- - - -ಡಿ18ಬಿಡಿವಿಟಿ:

ಜಿಲ್ಲೆ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳವು ಮಾಡಲಾಗಿದ್ದ 14 ಹಾಗೂ ಕಳವು ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳು ಸೇರಿದಂತೆ ₹5.80 ಲಕ್ಷ ಮೌಲ್ಯದ 16 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ ಗ್ಯಾಸ್‌ಗೆ ರಾತ್ರಿಯಿಡೀ ಜಾಗರಣೆ
ಕಾಲಿಂದ ಪತ್ನಿ ಕುತ್ತಿಗೆ ತುಳಿದು ಕೊಂದ ಪತಿ