ಈಶ್ವರ ಶೆಟ್ಟರ
ಕನ್ನಡಪ್ರಭ ವಾರ್ತೆ ಬಾಗಲಕೋಟೆ1996ರಲ್ಲಿ ನಡೆದ 11ನೇ ಲೋಕಸಭೆ ಚುನಾವಣೆ ರಾಜ್ಯ ರಾಜಕಾರಣದ ಚಿತ್ರಣವನ್ನೇ ಬದಲಿಸಿತು. ಜೊತೆಗೆ ಕರ್ನಾಟಕದಿಂದ ಒಬ್ಬ ನಾಯಕ ಪ್ರಧಾನಿ ಪಟ್ಟ ಏರುವಂತೆ ಮಾಡಿತು. 1994ರಲ್ಲಿ ಜನತಾ ಪರಿವಾರ ಒಗ್ಗೂಡಿ ಸರ್ಕಾರ ರಚಿಸಿದ್ದವು. ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಗಳಾಗಿದ್ದರು. ಈ ಸರ್ಕಾರ ರಚನೆಯಾದ ಕೆಲವೆ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಿತು. ಇದರಲ್ಲಿ ರಾಜ್ಯದಿಂದ 16 ಜನ ಜನತಾ ದಳದಿಂದ ಆಯ್ಕೆಯಾದರು. ಇದು ದೇವೇಗೌಡರು ಪ್ರಧಾನಿ ಪಟ್ಟಕ್ಕೇರಲು ಕಾರಣಗಳಲ್ಲಿ ಒಂದಾಗಿತ್ತು.
ಅಂದು ನಡೆದ ಚುನಾವಣೆಯಲ್ಲಿ ಅರಣ್ಯ ಸಚಿವರಾಗಿದ್ದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮತಕ್ಷೇತ್ರದ ಶಾಸಕ ಎಚ್.ವೈ. ಮೇಟಿ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಕೇಂದ್ರದ ಸಚಿವರಾಗಿದ್ದ ಸಿದ್ದು ನ್ಯಾಮಗೌಡರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಭದ್ರಕೋಟೆ ಛಿದ್ರ ಮಾಡಿದ್ದರು.ಸ್ವಾತಂತ್ರ್ಯ ನಂತರದ ಎಲ್ಲ 10 ಲೋಕಸಭಾ ಚುನಾವಣೆಗಳಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಿರಾಯಾಸವಾಗಿ ಗೆಲ್ಲುತ್ತ ಬಂದಿತ್ತು. ಆದರೆ, ಕೈಪಡೆಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದ್ದು ಜನತಾದಳ ಪಕ್ಷ. ಬಾಗಲಕೋಟೆ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದರು ಹುಲ್ಲಪ್ಪ ಮೇಟಿ.
ಜನತಾದಳದ ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಜಿ.ಎಚ್.ಪಟೇಲರಂತಹ ನಾಯಕರು ಒಂದಾಗಿ ನಡೆಸಿದ ಸಂಘಟಿತ ಪ್ರಯತ್ನದ ಫಲವಾಗಿ ಬಾಗಲಕೋಟೆಯ ರಾಜಕೀಯ ಇತಿಹಾಸದಲ್ಲಿಯೇ ಕಾಂಗ್ರೆಸ್ ಮೊದಲ ಸೋಲಿಗೆ ಕಾರಣವಾದ ಚುನಾವಣೆಯಿದು.ಸಚಿವ ಸ್ಥಾನಕ್ಕೆ ರಾಜೀನಾಮೆ:ಅಂದು ಪ್ರಭಾವಿ ಅರಣ್ಯ ಖಾತೆ ಹೊಂದಿದ್ದ ಹುಲ್ಲಪ್ಪ ಮೇಟಿ ಅವರನ್ನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಬಾಗಲಕೋಟೆ ಲೋಕಸಭೆಗೆ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾಗ ಒಲ್ಲದ ಮನಸ್ಸು ಮೇಟಿಯವರದ್ದಾಗಿತ್ತು. ಕಾರಣ ರಾಜ್ಯ ರಾಜಕಾರಣದಲ್ಲಿ ಸಮಾಧಾನವಿತ್ತು. ಲೋಕಸಭೆಯಲ್ಲಿ ಭಾಷಾ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಸ್ಪರ್ಧೆಗೆ ಹಿಂದೇಟು ಹಾಕಿದಾಗ ಅಂದಿನ ಎಲ್ಲ ನಾಯಕರು ಮನವೊಲಿಸಿ ಮೇಟಿ ಅವರನ್ನು ಸ್ಪರ್ಧೆ ಮಾಡಲು ಹಚ್ಚಿದ್ದರು.
ಅಂದು ಹೇಗಾದರೂ ಮಾಡಿ ಕಾಂಗ್ರೆಸ್ ಸೋಲಿಸಲೆಬೇಕೆಂಬ ಹಠಕ್ಕೆ ಬಿದ್ದಿದ್ದರು ಜನತಾದಳದವರು. ಅದಕ್ಕಾಗಿ ಪ್ರಬಲ ಅಭ್ಯರ್ಥಿ ಹುಡುಕಾಟ ನಡೆಸಿತು. ಅಭ್ಯರ್ಥಿಯ ಜಾತಿ ಹಾಗೂ ಎಲ್ಲರ ಜೊತೆಗಿನ ಉತ್ತಮ ಬಾಂಧವ್ಯ ಸಹ ಅವಶ್ಯ ಎಂದು ಪರಿಗಣಿಸಿ ಜಿಲ್ಲೆಯಲ್ಲಿರುವ ಪ್ರಬಲ ಕುರುಬ ಸಮಾಜದ ಹುಲ್ಲಪ್ಪ ಮೇಟಿ ಅವರನ್ನು ಕಣಕ್ಕಿಳಿಸಲಾಗಿತ್ತು.ರಾಜ್ಯ ಜನತಾದಳದ ನಾಯಕರ ನಿರೀಕ್ಷೆ ಹುಸಿಯಾಯಿತು. ಪ್ರಬಲ ಸ್ಪರ್ಧೆ ನೀಡಿ ಕಾಂಗ್ರೆಸ್ನ ಸಿದ್ದು ನ್ಯಾಮಗೌಡರನ್ನು ಸೋಲಿಸುವ ಮೂಲಕ ಬಾಗಲಕೋಟೆ ಲೋಕಸಭೆ ಸ್ಥಾನ ಪಡೆಯುವಲ್ಲಿ ಹುಲ್ಲಪ್ಪ ಮೇಟಿ ಯಶಸ್ವಿಯಾಗಿದ್ದು ಈಗ ಇತಿಹಾಸ.
ಬಿಜೆಪಿಗೆ ಭದ್ರ ನೆಲೆ:1996ರ ಲೋಕಸಭೆ ಚುನಾವಣೆ ಬಾಗಲಕೋಟೆಯ ಮಟ್ಟಿಗೆ ಕೇವಲ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿಲ್ಲ. ಬಿಜೆಪಿ ಕೂಡ ಭದ್ರ ನೆಲೆಯೂರಲು ಕಾರಣವಾಯಿತು. ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಈ ಲೋಕಸಭೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಷಯದಲ್ಲಿ ಚಾಣಾಕ್ಷ ನಡೆ ಅನುಸರಿತು. ಬಿವಿವಿ ಸಂಘದ ಕಾರ್ಯಧ್ಯಕ್ಷರಾಗಿದ್ದ, ಇಂದಿನ ಬಾಗಲಕೋಟೆಯ ಮಾಜಿ ಶಾಸಕರು ಆಗಿರುವ ವೀರಣ್ಣ ಚರಂತಿಮಠ ಅವರನ್ನು ಅಂದು ಲೋಕಸಭೆಗೆ ನಿಲ್ಲಿಸಲಾಯಿತು. ಇದರ ಪರಿಣಾಮ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ತಳಮಟ್ಟದಲ್ಲಿ ಗುರುತಿಸಲು ಕಾರಣವಾಯಿತು.
ಬಹುಸಂಖ್ಯಾತ ಲಿಂಗಾಯತ ಸಮುದಾಯದ ವೀರಣ್ಣ ಚರಂತಿಮಠ ಸ್ಪರ್ಧೆ ಫಲ ನೀಡಿತ್ತು. ಈ ಹಿಂದಿನ ಚುನಾವಣೆಯಲ್ಲಿ ಮತ ಗಳಿಕೆಯಲ್ಲಿ ಎರಡಂಕಿಯನ್ನೂ ದಾಖಲಿಸದ ಬಿಜೆಪಿ, ಅಂದು 1,54,161 ಮತಗಳನ್ನು ಪಡೆದು ಅಚ್ಚರಿ ಮೂಡಿಸಿತ್ತು. ಅಂದಿನ ಜಾತಿ ಸಮೀಕರಣದ ಮುಂದಾಲೋಚನೆ ಇಂದು ಇಡೀ ಬಾಗಲಕೋಟೆ ಜಿಲ್ಲೆಯಲ್ಲಿ ಪಕ್ಷದ ಶಾಸಕರು, ಸಂಸದರು ಇರಲು ಸಾಧ್ಯವಾಯಿತು.ಜನತಾದಳ ಗೆಲವು:
ಅಂದು ನಡೆದ ಚುನಾವಣೆಯಲ್ಲಿ ರೈತ ಸಂಘ, ತಿವಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮಾಜಿ ಸಂಸದ ಎಸ್.ಟಿ.ಪಾಟೀಲ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರು. 6,75,719ರಷ್ಟು ಒಟ್ಟು ಮತದಾನವಾಗಿತ್ತು. ಜನತಾದಳದಿಂದ ಸ್ಪರ್ಧಿಸಿದ್ದ ಹುಲ್ಲಪ್ಪ ಮೇಟಿಯವರು 2,50,683 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಅವರ ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸಿದ್ದು ನ್ಯಾಮಗೌಡ 2,29,351ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಗೆಲವಿನ ಅಂತರ 21332 ಇತ್ತು.---------
ಬಾಕ್ಸ್ನಾನು ಲಿಂಗಾಯತರ ವಿರೋಧಿಯಲ್ಲ
ಅಂದಿನ ಮುಖ್ಯಮಂತ್ರಿ ದೇವೇಗೌಡರು ಈ ಚುನಾವಣೆಯನ್ನು ಬಹಳ ಗಂಭಿರವಾಗಿ ಪರಿಣಿಸಿದ್ದರು. ಬಾಗಲಕೋಟೆಯ ವಲ್ಲಭ್ಭಾಯಿ ಚೌಖದಲ್ಲಿ ನಡೆದ ಬಹಿರಂಗ ಪ್ರಚಾರದಲ್ಲಿ ಮಾತನಾಡುವ ಸಂದರ್ಭದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. ಪ್ರಮುಖವಾಗಿ ನಾನು ಲಿಂಗಾಯತರ ವಿರೋಧಿಯಲ್ಲ, ನನ್ನನ್ನು ಲಿಂಗಾಯತ ವಿರೋಧಿಯೆಂದು ಕೆಲವರು ಸದಾಕಾಲ ಬಿಂಬಿಸುತ್ತಾರೆ. ಆದರೆ, ನಾನು ಲಿಂಗಾಯತ ವಿರೋಧಿಯಾಗಿದ್ದರೆ ಬಾಗಲಕೋಟೆ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಲಿಂಗಾಯತರಾದ ಡಾ.ಎಸ್.ಎಂ.ಜಾಮದಾರ ಅವರನ್ನು ಏಕೆ ಹಾಕುತ್ತಿದ್ದೆ ಎಂದು ಹೇಳಿದ್ದರು. ದೇವೇಗೌಡರ ಈ ಹೇಳಿಕೆ ಆ ಚುನಾವಣೆಯಲ್ಲಿ ಲಿಂಗಾಯತ ಮತ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.