-ಯೋಜನೆಗೆ ಶ್ರಮಿಸಿದ ನೀರಾವರಿ ಇಲಾಖೆ ಅಧಿಕಾರಿಗಳ ಸನ್ಮಾನ
--------ಕನ್ನಡಪ್ರಭ ವಾರ್ತೆ ಸಿಂಧನೂರು
ತಿಮ್ಮಾಪುರ ಏತ ನೀರಾವರಿ ಯೋಜನೆ 97ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಕೆಳಭಾಗದ 24 ಗ್ರಾಮಗಳ 34 ಸಾವಿರ ಎಕರೆ ಜಮೀನು ನೀರಾವರಿ ಸೌಲಭ್ಯ ಪಡೆಯಲಿವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.ಜವಳಗೇರಾ ಗ್ರಾಮದ ಸಮೀಪದಲ್ಲಿರುವ ಆರ್.ಎನ್.ನಗರ ಕ್ಯಾಂಪಿನಲ್ಲಿ ರಾಗಲಪರ್ವಿ, ಗೋನವಾರ, ಹೆಡಗಿನಾಳ, ಬಾದರ್ಲಿ, ರಾಮತ್ನಾಳ ಹಾಗೂ ವಳಬಳ್ಳಾರಿ ಗ್ರಾಪಂ ವ್ಯಾಪ್ತಿಯ ರೈತ ಬಾಂಧವರಿಂದ ಆಯೋಜಿಸಿದ್ದ ತಿಮ್ಮಾಪುರ ಏತ ನೀರಾವರಿ ಯೋಜನೆ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ವರ್ಷಗಳ ಬಹುನಿರೀಕ್ಷಿತ ಈ ಯೋಜನೆಯನ್ನು ಸಾಕಾರಗೊಳಿಸಿದ ತೃಪ್ತಿ ತಮಗಿದೆ. ಇನ್ನೂ ಸಿದ್ರಾಪುರ, ಚೆನ್ನಳ್ಳಿ, ಗೋಮರ್ಸಿಯ ಸಿದ್ದಲಿಂಗೇಶ್ವರ ಏತ ನೀರಾವರಿ ಯೋಜನೆ ಹಾಗೂ ಅಲಬನೂರು ಬಳಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್ ತಯಾರಿಸಲಾಗಿದ್ದು, ತಾಂತ್ರಿಕ ಸಲಹಾ ಸಮಿತಿಯು ಪರಿಶೀಲಿಸಿದೆ. ನೀರಾವರಿ ನಿಗಮ ಮತ್ತು ಸಚಿವ ಸಂಪುಟದ ಒಪ್ಪಿಗೆ ಸೂಚಿಸಿದರೆ ಮುಂದಿನ ದಿನಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮಾತನಾಡಿದರು.ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿ, ಯದ್ದಲದೊಡ್ಡಿಯ ಮಹಾಲಿಂಗ ಮಹಾಸ್ವಾಮಿ, ಅಬ್ಬಾಸಲಿ ದೇವಸ್ಥಾನದ ಗಫುರ್ಸಾಬ ತಾತನವರು, ರಾಗಲಪರ್ವಿಯ ಬಾಬುಸಾಬ ತಾತನವರು, ಗೋನವಾರ ತ್ರೀಶಕ್ತಿ ಪೀಠದ ಮಲ್ಲಯ್ಯ ತಾತನವರು, ಚಿತ್ರಾಲಿಯ ವಿನಾಯಕ ಮಹಾಸ್ವಾಮಿ, ಯಾಪಲಪರ್ವಿಯ ಬಸವರಾಜ ತಾತನವರು, ವಳ್ಳಬಳ್ಳಾರಿ ಶಿವಯೋಗಿ ಸ್ವಾಮೀಜಿ, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜನಿಯರ್ ವೆಂಕಟೇಶ ಪ್ರಸಾದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ಬಾಬುಗೌಡ ಬಾದರ್ಲಿ, ಮುಖಂಡರು ರೈತರು, ಗ್ರಾಮಸ್ಥರು ಭಾಗವಹಿಸಿದ್ದರು.
-----ಫೋಟೋ:10ಕೆಪಿಎಸ್ಎನ್ಡಿ1ಬಿ: ಸಿಂಧನೂರು ಆರ್.ಎನ್.ನಗರ ಕ್ಯಾಂಪಿನಲ್ಲಿ ಆಯೋಜಿಸಿದ್ದ ತಿಮ್ಮಾಪುರ ಏತನೀರಾವರಿ ಯೋಜನೆ ಅನುಷ್ಠಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಯೋಜನೆಗೆ ಶ್ರಮಿಸಿದ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸನ್ಮಾನಿಸಲಾಯಿತು