ಕನ್ನಡಪ್ರಭ ವಾರ್ತೆ ಕೋಟಇಲ್ಲಿನ ಕೋಟ ಮೂರ್ತೆದಾರರ ಸಹಕಾರಿ ಸಂಘದ ೩೪ನೇ ವರ್ಷಾಚರಣೆ ಹಾಗೂ ಸಂಘದ ಕೇಂದ್ರ ಕಚೇರಿಯ ಕಟ್ಟಡ ಲೋಕಾರ್ಪಣೆ, ದಿ.ಬಂಗಾರಪ್ಪ ಸಭಾಭವನ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು.ಬಳಿಕ ಮಾತನಾಡಿದ ಸಚಿವ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆಗೆ ಮೊದಲ ಪ್ರಾಶಸ್ತ್ಯ ಇದ್ದು, ಕುಲಕಸುಬನ್ನು ಬದಿಗೊತ್ತಿ ಮಕ್ಕಳನ್ನು ವಿದ್ಯೆಯ ಮೂಲಕ ಈ ಸಮಾಜದ ಉನ್ನತ ಹುದ್ದೆಗೇರಲು ಅವಕಾಶ ಕಲ್ಪಿಸಿ ಎಂದವರು ಮೂರ್ತೆದಾರರಿಗೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ, ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕೋಟ ಮೂರ್ತೆದಾರರ ಸಂಘದ ಅಧ್ಯಕ್ಷ ಕೆ.ಕೊರಗ ಪೂಜಾರಿ ವಹಿಸಿ ಪ್ರಾಸ್ತಾವನೆ ಸಲ್ಲಿಸಿದರು.ಸಭೆಗೆ ಮೊದಲು ಕೋಟ ಅಮೃತೇಶ್ವರಿ ದೇಗುಲದಿಂದ ವೈಭವದ ಮೆರವಣಿಗೆಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ.ಎಸ್. ಕಾರಂತ್ ಹಾಗೂ ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಅನಂದ್ ಸಿ. ಕುಂದರ್ ಚಾಲನೆ ನೀಡಿದರು.ಕೇಂದ್ರ ಕಚೇರಿಯ ನೂತನ ಕಟ್ಟಡ ಹಾಗೂ ದಿ. ಎಸ್.ಬಂಗಾರಪ್ಪ ಸಭಾಭವನವನ್ನು ಸಹಕಾರ ಸಚಿವರು, ಕೇಂದ್ರ ಕಚೇರಿಯನ್ನು ಎಂ.ಎನ್. ರಾಜೇಂದ್ರ ಕುಮಾರ್, ಶಾಖಾ ಕಚೇರಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಗ್ರಾಹಕರ ಭದ್ರತಾ ಕೋಶವನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ, ವಾಣಿಜ್ಯ ಸಂಕೀರ್ಣವನ್ನು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಸಂಭ್ರಮದ ನಗದು ಪತ್ರವನ್ನು ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಉದ್ಘಾಟಿಸಿದರು. ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಆಡಳಿತ ಮಂಡಳಿಯ ಸಭಾಂಗಣ, ಭದ್ರತಾ ಕೊಠಡಿಯನ್ನು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.