371(ಜೆ) ಸಮರ್ಪಕವಾಗಿ ಜಾರಿಗೊಳಿಸಿ: ಗೌತಮ ಪಾಟೀಲ

KannadaprabhaNewsNetwork | Published : Aug 15, 2024 1:52 AM

ಸಾರಾಂಶ

ಚಿಂಚೋಳಿಯಲ್ಲಿ ಕಲ್ಯಾಣ ಕರ್ನಾಟಕ ೩೭೧(ಜೆ) ಕಲಂ ಕಾನೂನು ತಿದ್ದುಪಡಿ ಹೋರಾಟ ಸಮಿತಿ ವತಿಯಿಂದ ದಿ.ವೈಜನಾಥ ಪಾಟೀಲರ ಸಮಾಧಿ ಹತ್ತಿರ ಹೈದ್ರಾಬಾದ್‌ ಕರ್ನಾಟಕ ವಿರೋಧಿ ಸರ್ಕಾರದ ಧೋರಣೆ ಖಂಡಿಸಿ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ರಾಜ್ಯದಲ್ಲಿಯೇ ಕಲ್ಯಾಣ ಕರ್ನಾಟಕ ಪ್ರದೇಶವು ಎಲ್ಲ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದ್ದು, ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು. ೩೭೧ನೇ ಕಲಂ ಜಾರಿಗೊಳಿಸಬೇಕೆಂದು ಹೋರಾಟ ನಡೆಸಿದ ದಿ.ವೈಜನಾಥ ಪಾಟೀಲರು ಕಂಡಿದ್ದ ಕನಸು ಇದುವರೆಗೆ ಸರ್ಕಾರ ಈಡೇರಿಸುತ್ತಿಲ್ಲವೆಂದು ಜಿಪಂ ಮಾಜಿ ಸದಸ್ಯರು ಗೌತಮ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ೩೭೧(ಜೆ) ಕಲಂ ಕಾನೂನು ತಿದ್ದುಪಡಿ ಹೋರಾಟ ಸಮಿತಿ ವತಿಯಿಂದ ದಿ.ವೈಜನಾಥ ಪಾಟೀಲರ ಸಮಾಧಿ ಹತ್ತಿರ ಹೈದ್ರಾಬಾದ್‌ ಕರ್ನಾಟಕ ವಿರೋಧಿ ಸರ್ಕಾರದ ಧೋರಣೆ ಖಂಡಿಸಿ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ತಂದೆಯವರಾದ ದಿ.ವೈಜನಾಥ ಪಾಟೀಲರು ೩೭೧(ಜೆ)ಕಲಂ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಹೈದ್ರಾಬಾದ್‌ ಕರ್ನಾಟಕ ಹೊರತುಪಡಿಸಿ ೨೪ ಜಿಲ್ಲೆಯಲ್ಲಿ ಶೇ.೮ರಷ್ಟು ನೇಮಕಾತಿ ಮತ್ತು ಮುಂಬಡ್ತಿ ಮೀಸಲಾತಿ ಒದಗಿಸಬೇಕು. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳು ಭರ್ತಿಗೊಳಿಸಬೇಕು. ಅಲ್ಲದೇ ಖಾಸಗಿ ಕಂಪನಿಗಳಲ್ಲಿ ನಮ್ಮ ಭಾಗದ ನಿರುದ್ಯೋಗಿ ಯುವಕರಿಗೆ ನೇಮಕಾತಿ ಆಗಬೇಕೆಂಬ ಬಯಕೆ ಆಗಿತ್ತು. ಆದರೆ ನಮ್ಮ ತಂದೆಯವರು ನಡೆಸಿದ ಹೋರಾಟದ ಪ್ರತಿಫಲವಾಗಿ ಸರ್ಕಾರ ೩೭೧(ಜೆ) ಕಲಂ ಜಾರಿಗೊಳಿಸಿದ್ದರು ಸಹ ಸರ್ಕಾರ ನಮ್ಮ ಪಾಲು ನಮಗೆ ಕೊಡುವಲ್ಲಿ ಮೀನಮೇಷ ಹಾಕುತ್ತಿದೆ ಎಂದು ದೂರಿದರು.

ಕಲ್ಯಾಣ ಕರ್ನಾಟಕ ೩೭೧(ಜೆ) ಕಲಂಕಾನೂನು ತಿದ್ದುಪಡಿ ಹೋರಾಟ ಸಮಿತಿ ಅಧ್ಯಕ್ಷ ಸೈಬಣ್ಣ ಜಮಾದಾರ ಯಾತ್ರೆಯನ್ನು ಹಮ್ಮಿಕೊಂಡಿರುವ ಉದ್ದೇಶವನ್ನು ಮಾರ್ಮಿಕವಾಗಿ ತಿಳಿಸಿದರು.

ಹೋರಾಟ ಸಮಿತಿ ಮುಖಂಡರಾದ ಸಂತೋಷ ಗಡಂತಿ, ಶರಣು ಪಾಟೀಲ ಮೋತಕಪಳ್ಳಿ, ಚಿತ್ರಶೇಖರ ಪಾಟೀಲ, ಕೆ.ಎಂ. ಬಾರಿ, ನ್ಯಾಯವಾದಿ ಶ್ರೀಮಂತ ಕಟ್ಟಿಮನಿ, ಉಮಾ ಪಾಟೀಲ, ಭೀಮಶೆಟ್ಟಿ ಮುರುಡಾ, ಡಾ.ಬಸವೇಶ ಪಾಟೀಲ ಮಾತನಾಡಿದರು.

ಯಾತ್ರೆಯಲ್ಲಿ ಜಗನ್ನಾಥ ಗುತ್ತೆದಾರ, ಗುಂಡಯ್ಯಸ್ವಾಮಿ, ಪ್ರಕಾಶ ಪಟ್ಟೆದಾರ, ಅಮರೇಶಣ್ಣ, ಶಿವಕುಮಾರ, ದಿಲೀಪ ಶರ್ಮಾ, ಶೀನಿವಾಸ, ಘಾಳೆಪ್ಪಅಂತಿ, ಧನರಾಜ ಬೇಮಳಖೇಡ, ಗೋಪಾಲರೆಡ್ಡಿ ಕೊಳ್ಳುರ, ಭವಾನಿ ಫತ್ತೆಪೂರ, ಸತೀಶ ಇಟಗಿ, ರಾಜೂ ನೂಲ್ಕರ, ಸಂಜು, ಅಮರನಾಥ ಲೊಡನೋರ ಇನ್ನಿತರಿದ್ದರು.

Share this article