ಧಾರವಾಡ: ಸೈಬರ್ ಭಯೋತ್ಪಾದನೆ, ಮಾನವ ಕಳ್ಳ ಸಾಗಾಣಿಕೆ, ಉದ್ಯಮ, ಆಸ್ಪತ್ರೆ, ಸಾಹಿತ್ಯ, ಸಂಗೀತ, ಕಲೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸೈಬರ್ ಅಪರಾಧ ನಡೆಯುತ್ತಲಿವೆ. ವಿಜ್ಞಾನದ ಸದ್ಬಳಕೆಗಿಂತ ದುರ್ಬಳಕೆ ಅಧಿಕವಾಗುತ್ತಿದೆ. ಸೈಬರ್ ಸುರಕ್ಷಿತವಾಗಿ ಬಳಸಬೇಕು. ಜಗತ್ತಿನಾದ್ಯಂತ ಒಂದು ಗಂಟೆಯಲ್ಲಿ 450 ಕೋಟಿ ಸೈಬರ್ ಅಪರಾಧ ನಡೆಯುತ್ತಿವೆ ಎಂದು ಡೈನಾಮಿಕ್ಸ್ (ಎಂಜಿಐ) ಯು.ಎಸ್.ಎ ಎ.ಐ ಮತ್ತು ಸೈಬರ್ ಸೆಕ್ಯುರಿಟಿ ನಿರ್ದೇಶಕ ಡಾ. ಉದಯಶಂಕರ ಪುರಾಣಿಕ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ, ದಿ. ಪ್ರೊ. ಎಂ.ಐ. ಸವದತ್ತಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಮತ್ತು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ‘ಸೈಬರ್ ಸುರಕ್ಷತೆ: ವರ್ತಮಾನ ಮತ್ತು ಭವಿಷ್ಯ’ ವಿಷಯ ಕುರಿತು ಮಾತನಾಡಿದರು.45 ದಿನಗಳ ಕುಂಭ ಮೇಳದಲ್ಲಿ ಬಳಸಿದ ತಾವು ತಯಾರಿಸಿದ ಹೊಸ ಸಾಫ್ಟ್ವೇವೇರ್ನಿಂದಾಗಿ ನಡೆಯಬಹುದಾಗಿದ್ದ ದುರಂತ ತಡೆದು ಭಯೋತ್ಪಾದಕರನ್ನು ಪತ್ತೆ ಹಚ್ಚಿದ್ದು ಕುಂಭಮೇಳದ ಯಶಸ್ಸಿಗೆ ಕಾರಣವಾಯಿತು. ಸೈಬರ್ ಅಪರಾಧಗಳ ಸಾಫ್ಟ್ವೇರ್ ನಮ್ಮ ಮೊಬೈಲ್ಗಳಲ್ಲಿ ಸೇರಿ ಮೋಸ ನಡೆಯುತ್ತಿವೆ ಎಂದು ತಿಳಿಸಿದರು.ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದು. ಹೀಗೆ ಚಾರ್ಜ್ ಹಾಕಿದರೆ ಅವರು ಚಾರ್ಜರ್ ಕೇಬಲ್ ಬದಲಾಗಿ ಡಾಟಾ ಕೇಬಲ್ ಹಾಕಿರುತ್ತಾರೆ. ಇದರಿಂದ ಮೊಬೈಲ್ಗಳಲ್ಲಿನ ಎಲ್ಲ ವಿಷಯಗಳು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಆರ್ಥಿಕವಾಗಿ ಮುಂದುವರಿದ ದೇಶಗಳಿಗಿಂತ ಹೆಚ್ಚಿನ ಹಣವನ್ನು ಸೈಬರ್ ಅಪರಾಧಿಗಳು ಗಳಿಸುತ್ತಿದ್ದಾರೆ. ಕಂಪನಿ ಅರೆಸ್ಟ್, ಡಿಜಿಟಲ್ ಅರೆಸ್ಟ್ಗಳಿಗೆ ಅಂಜಬೇಕಾದ ಅಗತ್ಯವಿಲ್ಲ. ಬ್ಲಾಕ್ಮೇಲ್ ಮಾಡುವ ತಂತ್ರ ಕಂಡು ಬಂದರೆ 1930 ಸಂಖ್ಯೆಗೆ ಕರೆ ಮಾಡಿದರೆ, ವಂಚಕರಿಂದ ಪಾರಾಗಬಹುದು. ನಮ್ಮ ಮೊಬೈಲ್ ಬ್ಯಾಟರಿ ಚಾರ್ಜ್ ಕಡಿಮೆಯಾಗುತ್ತಿದ್ದರೆ, ಇಂಟರನೆಟ್ ಬಳಕೆ ನಿರಂತರವಾಗಿದ್ದರೆ ಅಲ್ಲಿ ನಮ್ಮ ಮೊಬೈಲ್ನ ಬಳಕೆಯನ್ನು ಇನ್ನಾರೋ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗಾ ವಿವಿ ವಿಶ್ರಾಂತ ಉಪಕುಲಪತಿ ಪ್ರೊ. ಬಿ.ಜಿ. ಮೂಲಿಮನಿ ಮಾತನಾಡಿ, ಸೈಬರ್ ಅಪರಾಧದ ಬಗ್ಗೆ ಸಾರ್ವಜನಿಕರಿಗೆ ಭಯ ಇದೆ. ಆದರೆ, ತಿಳಿವಳಿಕೆ ಇಲ್ಲ. ಜನರಿಗಾಗಿ ವಿಜ್ಞಾನವಿದ್ದು, ದೇಶದ ಸುಸ್ಥಿರ ಅಭಿವೃದ್ಧಿಗಾಗಿ ಅದು ಬಳಕೆಯಾಗಬೇಕು. ಆತ್ಮವಿಶ್ವಾಸ, ಆತ್ಮನಿರ್ಭರತೆ ಮುಖ್ಯವಾಗಿದ್ದು, ಸೃಜನಶೀಲತೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು. ಡಾ. ಧನವಂತ ಹಾಜವಗೋಳ, ಪ್ರೊ. ಎಸ್.ಎಲ್. ಸಂಗಮ, ಸುರೇಶ ಸಾವಳಗಿ, ರಾಜೇಂದ್ರ ಸಾವಳಗಿ, ಗಿರಿಜಾ ಸಾವಳಗಿ, ಪ್ರಕಾಶ ಧರಣೆಪ್ಪಗೌಡ, ಡಾ. ಎಸ್.ವಿ. ಅಯ್ಯನಗೌಡರ, ಡಾ. ಡಿ.ಎಂ. ಹಿರೇಮಠ, ಡಾ. ಲಿಂಗರಾಜ ಅಂಗಡಿ, ಕೆ.ಜಿ. ದೇವರಮನಿ, ಶಾಂತವೀರ ಬೆಟಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.