₹ 7863 ಕೋಟಿ ಸಂಭವನೀಯ ಸಾಲ ಅವಕಾಶ: ಕರಿಗೌಡ

KannadaprabhaNewsNetwork |  
Published : Jan 05, 2024, 01:45 AM IST
ಚಿಕ್ಕಮಗಳೂರಿನ ಲೀಡ್‌ ಬ್ಯಾಂಕ್‌ನಲ್ಲಿ ನಡೆದ ಅಧಿಕಾರಿಗಳ ತ್ರೈಮಾಸಿಕ ಸಮಾಲೋಚನಾ ಸಭೆಯಲ್ಲಿ ಕರಿಗೌಡ ಅವರು ನಬಾರ್ಡ್‌ ಪಿಎಲ್‌ಪಿ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯ ಬ್ಯಾಂಕರ್‌ಗಳು ಹಾಗೂ ಅಭಿವೃದ್ಧಿ ಇಲಾಖೆ-ಸಂಸ್ಥೆ ಪ್ರತಿನಿಧಿಗಳ 3ನೆಯ ತ್ರೈಮಾಸಿಕ ಸಮಾಲೋಚನಾ ಸಭೆಯಲ್ಲಿ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕ್‌ಗಳ ಪಾತ್ರ ಪ್ರಮುಖವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಸಹಿತ ಸಾಲ ನೀಡುವ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಸಕಾರಾತ್ಮಕವಾಗಿ ವರ್ತಿಸಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಕರಿಗೌಡ ತಿಳಿಸಿದರು.

- ನಬಾರ್ಡ್ ಪಿಎಲ್‌ಪಿ ಕೈಪಿಡಿ ಲೋಕಾರ್ಪಣೆ । ಬ್ಯಾಂಕ್‌ ಅಧಿಕಾರಿಗಳ ತ್ರೈಮಾಸಿಕ ಸಮಾಲೋಚನಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಬಾರ್ಡ್ ಸ್ಥಳೀಯ ಕಚೇರಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿ ಸಿದ್ಧಪಡಿಸಿರುವ 7863.58 ಕೋಟಿ ರು.ಗಳ ಪಿಎಲ್‌ಪಿ ಕೈಪಿಡಿಯನ್ನು ಜಿಪಂ ಮುಖ್ಯ ಯೋಜನಾಧಿಕಾರಿ ಕರಿಗೌಡ ಲೋಕಾರ್ಪಣೆಗೊಳಿಸಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯ ಬ್ಯಾಂಕರ್‌ಗಳು ಹಾಗೂ ಅಭಿವೃದ್ಧಿ ಇಲಾಖೆ-ಸಂಸ್ಥೆ ಪ್ರತಿನಿಧಿಗಳ 3ನೆಯ ತ್ರೈಮಾಸಿಕ ಸಮಾಲೋಚನಾ ಸಭೆಯಲ್ಲಿ ಕೈಪಿಡಿ ಬಿಡುಗಡೆ ಮಾಡಿ ಜಿಲ್ಲೆಯ ಹಣಕಾಸು ಸಂಸ್ಥೆಗಳಿಗೆ ಇದೊಂದು ಅತ್ಯುತ್ತಮ ಮಾರ್ಗದರ್ಶಿ ಎಂದರು.

ಆರ್ಥಿಕಾಭಿವೃದ್ಧಿಗೆ ಬ್ಯಾಂಕರ್‌ಗಳ ಕೊಡುಗೆ ಗಣನೀಯವಾಗಿದೆ. ಸರ್ಕಾರದ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕ್‌ಗಳ ಪಾತ್ರ ಪ್ರಮುಖವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಸಹಿತ ಸಾಲ ನೀಡುವ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಸಕಾರಾತ್ಮಕವಾಗಿ ವರ್ತಿಸಬೇಕು. ಸಂಬಂಧಪಟ್ಟ ಇಲಾಖೆಗಳ ಮೂಲಕ ಬಂದ ಅರ್ಜಿಯನ್ನು ವಿಳಂಬ ಮಾಡದೇ ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಸಹಕಾರ ನೀಡುವುದರೊಂದಿಗೆ ಜಿಲ್ಲೆಯ ಆರ್ಥಿಕ ಏಳಿಗೆಗೆ ನೆರವಾಗಬೇಕೆಂದು ಕರಿಗೌಡ ಮನವಿ ಮಾಡಿದರು.

ಮುಂದಿನ ಸಾಲಿನಲ್ಲಿ ಜಿಲ್ಲೆಯ ವಿವಿಧೆಡೆ ಕೈಗೊಳ್ಳಬಹುದಾದ ಆರ್ಥಿಕ ಚಟುವಟಿಕೆಗಳನ್ನು ಗಮನಿಸಿ ಸಾಲ ವಿತರಿಸಲು ವಿಶೇಷವಾಗಿ ಬ್ಯಾಂಕ್‌ಗಳಿಗೆ ಹಾಗೂ ಸರ್ಕಾರದ ವಿವಿಧ ಅಭಿವೃದ್ಧಿ ಇಲಾಖೆಗಳಿಗೆ ಪಿಎಲ್‌ಪಿ ಕೈಪಿಡಿ ಉಪಯುಕ್ತವಾಗಿ ಪ್ರತಾಪ್ ತಂಡ ಸಿದ್ಧಪಡಿಸಿದೆ ಎಂದು ಕರಿಗೌಡ ಶ್ಲಾಘಿಸಿದರು.

ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಈ. ಪ್ರತಾಪ್ ಮಾತನಾಡಿ, ಮುಂದಿನ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ನಡೆಸಬಹುದಾದ ಆರ್ಥಿಕ ಚಟುವಟಿಕೆಗಳನ್ನು ಗಮನಿಸಿ ಕೈಪಿಡಿಯನ್ನು ಪ್ರತಿವರ್ಷವೂ ನಬಾರ್ಡ್ ನಿಂದ ಸಿದ್ಧಪಡಿಸುವ ಪರಿಪಾಠವಿದೆ. ಇದನ್ನು ಆಧರಿಸಿ ವಿವಿಧ ಕ್ಷೇತ್ರಗಳ ಆದ್ಯತಾ ವಲಯ ಗಳನ್ನು ಗುರುತಿಸಬಹುದಾಗಿದೆ ಎಂದರು.

ಜಿಲ್ಲೆಯಾದ್ಯಂತ ಹವಾಮಾನ, ಮಳೆ, ನೈಸರ್ಗಿಕ ಪರಿಸ್ಥಿತಿ ಅಧ್ಯಯನ ಮಾಡಿ ರೈತಾಪಿ ವರ್ಗ ಸೇರಿ ದಂತೆ ವಿವಿಧ ಸ್ಥರದ ಜನರನ್ನು ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ಸಮಾಲೋಚನೆ ನಂತರ ಮುಂಬರುವ ದಿನದ ಆರ್ಥಿಕ ವ್ಯವಹಾರಗಳನ್ನು ಗುರುತಿಸಲಾಗಿದೆ. ಕೃಷಿ ಪ್ರಧಾನ ದೇಶ ನಮ್ಮದ್ದಾಗಿದ್ದು ಈ ಬಾರಿಯೂ ಬೆಳೆ ಸಾಲ, ದೀರ್ಘಾವಧಿ ಸಾಲ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಿಂಹಪಾಲು ಮೀಸಲಿಡ ಬಹುದಾಗಿದೆ. ಕೃಷಿ ಕೈಗಾರಿಕೆಗೆ ಸೇರಿದ ಆರ್ಥಿಕ ಕ್ಷೇತ್ರಕ್ಕೆ ಒಟ್ಟಾರೆ 6,7892 ಕೋಟಿ.ರು. ಒಳಗೊಂಡ ಶೇ.83 ರ ಪಾಲನ್ನು ನಿಗದಿಸಲಾಗಿದೆ ಎಂದರು.

ಶಿಕ್ಷಣ ವಲಯದಲ್ಲಿ ಶೇ. 2.17, ಎಂಎಸ್‌ಎಂಇನಲ್ಲಿ ಶೇ.5, ಗೃಹ ನಿರ್ಮಾಣಕ್ಕಾಗಿ ಶೇ. 2.54, ನಿರಂತರ ಶಕ್ತಿ ಉತ್ಪಾದನೆಗೆ ಶೇ. 0.4, ಸಾಮಾಜಿಕ ಮೂಲಭೂತ ಸೌಕರ್‍ಯಕ್ಕಾಗಿ 53 ಕೋಟಿ ರು. ವಿನಿಯೋಗಿ ಸುವ ಅವಕಾಶವಿದೆ ಎಂದು ಕೈಪಿಡಿಯ ಪ್ರಮುಖಾಂಶಗಳನ್ನು ವಿವರಿಸಿದ ಪ್ರತಾಪ್, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಮರ್ಪಣಾ ಭಾವದಿಂದ ಕಾರ್‍ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.

ಭಾರತೀಯ ರಿಜರ್ವ್ ಬ್ಯಾಂಕ್ ಎಲ್‌ಡಿಒ ಜೀವಿತಾ ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ 9 ತಿಂಗಳ ಆರ್ಥಿಕ ಚಟುವಟಿಕೆಗಳ ಪರಿಶೀಲನೆ ನಡೆಸಿದರು. ಆರ್.ಎಸ್.ಬಿ.ಟಿ.ಐ ನಿರ್ದೇಶಕ ಯೋಗೇಂದ್ರ ಪ್ರತಾಪ್‌ಸಿಂಗ್ ಮಾತನಾಡಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕ ಮುರಳಿ ವಂದಿಸಿದರು. 4 ಕೆಸಿಕೆಎಂ 1

ಚಿಕ್ಕಮಗಳೂರಿನ ಲೀಡ್‌ ಬ್ಯಾಂಕ್‌ನಲ್ಲಿ ನಡೆದ ಅಧಿಕಾರಿಗಳ ತ್ರೈಮಾಸಿಕ ಸಮಾಲೋಚನಾ ಸಭೆಯಲ್ಲಿ ಕರಿಗೌಡ ನಬಾರ್ಡ್‌ ಪಿಎಲ್‌ಪಿ ಕೈಪಿಡಿ ಬಿಡುಗಡೆಗೊಳಿಸಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ