- ಕಲಾ ವಿಭಾಗದಲ್ಲಿ ಹರಿಹರದ ಹೀನಾಬಾನು, ವಾಣಿಜ್ಯ ವಿಭಾಗದಲ್ಲಿ ಗೋಪನಾಳು ರೇಷ್ಮಾಬಾನು ಪ್ರಥಮ - ವಿಜ್ಞಾನದಲ್ಲಿ ಮೊಹಮ್ಮದ್ ಸುಹೇಲ್, ಅಮೃತ್ ದೊಡ್ಡ ಬಸಪ್ಪನವರ್, ಅನನ್ಯ, ಆಕಾಶ್ ಪಾಟೀಲ್ ಅಗ್ರ
- ಕಳೆದ ವರ್ಷಕ್ಕಿಂತ ಶೇ.5.24 ಫಲಿತಾಂಶ ಹೆಚ್ಚಳ । ಗ್ರಾಮೀಣ ವಿದ್ಯಾರ್ಥಿಗಳು ಶೇ.1.1ರಷ್ಟು ಮೇಲುಗೈ- - - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜ್ಯದಲ್ಲಿ ಮಾರ್ಚ್ 2024ರಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಶೇ.80.96 ಫಲಿತಾಂಶ ಲಭ್ಯವಾಗಿದ್ದು, ಕಳೆದ ವರ್ಷಕ್ಕಿಂತ ಶೇ.5.24 ಫಲಿತಾಂಶ ಹೆಚ್ಚಳವಾಗಿದೆ.
ಜಿಲ್ಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ ಒಟ್ಟು 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಈ ಪೈಕಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಜಿಲ್ಲೆಗೆ ಶೇ.80.96 ಫಲಿತಾಂಶ ಬಂದಿದೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಕಳೆದ ವರ್ಷ ಶೇ.75.72ರಷ್ಟು ಫಲಿತಾಂಶ ಬಂದಿತ್ತು. ಈ ಸಲ ಶೇ.80.96 ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕಿಂತಲೂ ಶೇ.5.24ರಷ್ಟು ಫಲಿತಾಂಶ ಹೆಚ್ಚಳವಾಗಿದೆ ಎಂದರು.
ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪಿಯು ಕಾಲೇಜಿನ ಪಿ.ಕೆ.ಹೀನಾಬಾನು ಶೇ.98.5ರಂತೆ ಒಟ್ಟು 591 ಅಂಕ, ವಾಣಿಜ್ಯ ವಿಭಾಗದಲ್ಲಿ ದಾವಣಗೆರೆ ತಾಲೂಕು ಗೋಪನಾಳು ಸರ್ಕಾರಿ ಪಿಯು ಕಾಲೇಜಿನ ರೇಷ್ಮಾ ಬಾನು ಶೇ.98.16ರಂತೆ 589 ಅಂಕ ಹಾಗೂ ವಿಭಾಗ ವಿಭಾಗದಲ್ಲಿ ಸರ್ ಎಂವಿ ಸಂಯುಕ್ತ ಪಿಯು ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ್ ದೊಡ್ಡ ಬಸಪ್ಪನವರ್, ಎಚ್.ಎಸ್.ಅನನ್ಯ, ಆಕಾಶ್ ಸಿ. ಪಾಟೀಲ್ ಶೇ.98.83 ರಂತೆ ತಲಾ 593 ಸಮನಾತ ಅಂಕ ಪಡೆದು, ಮೂರೂ ವಿಭಾಗದಲ್ಲಿ ಜಿಲ್ಲೆಗೆ ಅಗ್ರಸ್ಥಾನ ಪಡೆದಿದ್ದಾರೆ ಎಂದು ಅವರು ತಿಳಿಸಿದರು.ಕಲಾ ವಿಭಾಗದಲ್ಲಿ ಜಿಲ್ಲೆಗೆ ಶೇ.57.82 ಫಲಿತಾಂಶ ಲಭಿಸಿದೆ. ಶೇ.45 ಬಾಲಕರು, ಶೇ.66.46 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ.76.22ರಷ್ಟು ಫಲಿತಾಂಶ ಬಂದಿದ್ದು, ಶೇ.65.5 ಬಾಲಕರು, ಶೇ.80.8ರಷ್ಟು ಬಾಲಕಿಯರು, ವಿಜ್ಞಾನ ವಿಭಾಗದಲ್ಲಿ ಶೇ.91.13ರಷ್ಟು ಫಲಿತಾಂಶ ಬಂದಿದ್ದು, ಬಾಲಕರು ಶೇ.91.39 ಹಾಗೂ ಶೇ.88.69 ಬಾಲಕಿಯರು ಉತ್ತೀರ್ಣರಾಗಿದ್ದಾರೆ ಎಂದು ಅವರು ಹೇಳಿದರು.
ನಗರ ಪ್ರದೇಶಕ್ಕಿಂತಲೂ ಈ ಸಲ ಗ್ರಾಮೀಣ ವಿದ್ಯಾರ್ಥಿಗಳು ಶೇ.1.1ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ.73.65 ಗಂಡು, ಶೇ.84.6 ಹೆಣ್ಣು ಮಕ್ಕಳು ಉತ್ತೀರ್ಣರಾದರೆ, ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ.80.75ರಲ್ಲಿ ಶೇ.74.41 ಬಾಲಕರು, ಶೇ.81.37ರಷ್ಟು ಬಾಲಕಿಯರು ಫಲಿತಾಂಶ ಪಡೆದಿದ್ದಾರೆ. ದಾವಣಗೆರೆ ಅಂಜುಂ ಪದವಿಪೂರ್ವ ಕಾಲೇಜು, ಲೇಬರ್ ಕಾಲನಿ, ಜೈನ್ ಟ್ರಿನಿಟಿ ಪಿಯು ಕಾಲೇಜು, ಅನ್ಮೋಲ್ ಪಿಯು ಕಾಲೇಜು, ಶ್ರೀ ಗೀತಂ ಪಿಯು ಕಾಲೇಜು ಶೇ.100 ಫಲಿತಾಂಶ ಪಡೆದ ಕಾಲೇಜುಗಳಾಗಿವೆ ಎಂದು ಡಿಸಿ ಡಾ.ವೆಂಕಟೇಶ ಮಾಹಿತಿ ನೀಡಿದರು.ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ , ಶಾಲಾ ಶಿಕ್ಷಣ, ಪಿಯು ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಇತರರು ಇದ್ದರು.
- - - (-ಫೋಟೋ: ಸಾಂದರ್ಭಿಕ ಚಿತ್ರ)