ಕನ್ನಡಪ್ರಭ ವಾರ್ತೆ ವಿಜಯಪುರ
ಜಗತ್ತಿನ ಶೇ.80ರಷ್ಟು ಜನರು ದೃಷ್ಟಿದೋಷದಿಂದ ಬಳಲುತ್ತಿದ್ದಾರೆ. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ನರಗಳ ದೌರ್ಬಲ್ಯ ಕುರುಡುತನಕ್ಕೆ ಕಾರಣವಾಗಬಹುದು ಎಂದು ಆಸ್ಪತ್ರೆ ನೇತ್ರ ವಿಭಾಗದ ಮುಖ್ಯಸ್ಥೆ ಡಾ.ರೇಖಾ ಮುಧೋಳ ಹೇಳಿದರು.ನಗರದ ಬಿ.ಎಲ್.ಡಿ.ಇ ಡಿಮ್ಡ್ ವಿವಿಯ ಬಿ.ಎಂ.ಪಾಟೀಲ್ ವೈದ್ಯಕಿಯ ಕಾಲೆಜು, ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಗ್ಲೊಕೋಮಾ ಕಾಯಿಲೆ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ 4.50 ಮಿಲಿಯನ್ ಮತ್ತು ಜಗತ್ತಿನಲ್ಲಿ 80 ಮಿಲಿಯನ್ ಜನರು ಗ್ಲೊಕೋಮಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯನ್ನು ನಿರ್ಲಕ್ಷಿಸದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಕಣ್ಣಿನ ಪೊರೆ ನಂತರ ನರಗಳ ದೌರ್ಬಲ್ಯದಿಂದ ಕುರುಡರಾಗಬಹುದು. ಗ್ಲೊಕೋಮಾ ಕಾಯಿಲೆ ಹೊಂದಿರುವ ರೋಗಿಗಳಲ್ಲಿ ತಲೆನೋವು, ದೃಷ್ಟಿ ಕ್ಷೀಣಿಸುವುದು ಹಾಗೂ ಕೆಲವರಲ್ಲಿ ಲಕ್ಷಣಗಳು ಕಂಡು ಬರದಿರಬಹುದು. ಈ ಕಾಯಿಲೆಯು 40 ವರ್ಷಕ್ಕಿಂತ ಮೇಲ್ಪಟ್ಟ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ರೋಗಿಗಳಲ್ಲಿ ಹಾಗೂ ದಪ್ಪ ಕನ್ನಡಕವನ್ನು ಬಳಸುವವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂದು ಹೇಳಿದರು.ಕಣ್ಣಿನ ಸಮಸ್ಯೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ನೇತ್ರ ವಿಭಾಗ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಮಾ.16ರ ವರೆಗೆ ಉಚಿತ ಗ್ಲೊಕೋಮಾ ಉಚಿತ ಶಿಬಿರ ಆಯೋಜಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೆಕು ಎಂದರು.
ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಸಂಪತ ಎಂ. ಗುಣಾರಿ ಮಾತನಾಡಿ, ಜಿಲ್ಲೆಯಲ್ಲಿ ಕಣ್ಣಿನ ತೊಂದರೆಯಿಂದ ಬಳಲುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ಪ್ರತಿವಾರ 60 ರೋಗಿಗಳ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ಬಿ.ಎಲ್.ಡಿ.ಇ ಡಿಮ್ಡ್ ವಿವಿ ಶ್ರೀ ಬಿ. ಎಂ. ಪಾಟೀಲ್ ವೈದ್ಯಕೀಯ ಆಸ್ಪತ್ರೆ ಹೆಚ್ಚಿನ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ದೃಷ್ಠಿದೋಷ ಹೊಂದಿರುವ ರೋಗಿಗಳಿಗೆ ಸ್ಪಂದಿಸುತ್ತಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿವಿ ಕುಲಪತಿ ಡಾ. ಆರ್.ಎಸ್.ಮುಧೋಳ ಗ್ಲೊಕೋಮಾ ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಿದರು. ಆಸ್ಪತ್ರೆಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಡಾ. ಸುನೀಲ ಜಿ. ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.