ಮಕ್ಕಳ ಕಲ್ಪನಾಲೋಕದಲ್ಲಿ ಅರಳಿದ ವನಸಿರಿ

KannadaprabhaNewsNetwork |  
Published : Nov 24, 2025, 03:45 AM IST
ಚಿತ್ರಕಲೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ತಾಲೂಕಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕೈಯಲ್ಲಿ ಕುಂಚ ಮತ್ತು ಬಣ್ಣಗಳನ್ನು ಹಿಡಿದು ತಮ್ಮ ಕಲ್ಪನೆಯ ಪರಿಸರ, ವನಸಿರಿ, ಜಲಧಾರೆ, ಕಾಡಿನ ವಿವಿಧ ಪ್ರಾಣಿಗಳ ವಿವಿಧ ರೂಪಗಳಿಗೆ ಜೀವ ತುಂಬಿದರು. ಒಬ್ಬೊಬ್ಬರು ಒಂದೊಂದು ವನ್ಯಜೀವಿಗಳ ಚಿತ್ರಗಳಿಗೆ ತಮ್ಮದೇ ಆದ ಕಲ್ಪನೆಯ ದೃಶ್ಯಗಳನ್ನು ಚಿತ್ರಿಸಿ, ಕಾಡು ಬೆಳೆಸಿ ನಾಡು ಉಳಿಸಿ, ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸಂದೇಶದೊಂದಿಗೆ ಚಿತ್ರಪಟದಲ್ಲಿ ವ್ಯಕ್ತಪಡಿಸಿದರು. ಮಕ್ಕಳ ಈ ಪ್ರತಿಭೆಗೆ ಕಲಾ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕೈಯಲ್ಲಿ ಕುಂಚ ಮತ್ತು ಬಣ್ಣಗಳನ್ನು ಹಿಡಿದು ತಮ್ಮ ಕಲ್ಪನೆಯ ಪರಿಸರ, ವನಸಿರಿ, ಜಲಧಾರೆ, ಕಾಡಿನ ವಿವಿಧ ಪ್ರಾಣಿಗಳ ವಿವಿಧ ರೂಪಗಳಿಗೆ ಜೀವ ತುಂಬಿದರು. ಒಬ್ಬೊಬ್ಬರು ಒಂದೊಂದು ವನ್ಯಜೀವಿಗಳ ಚಿತ್ರಗಳಿಗೆ ತಮ್ಮದೇ ಆದ ಕಲ್ಪನೆಯ ದೃಶ್ಯಗಳನ್ನು ಚಿತ್ರಿಸಿ, ಕಾಡು ಬೆಳೆಸಿ ನಾಡು ಉಳಿಸಿ, ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸಂದೇಶದೊಂದಿಗೆ ಚಿತ್ರಪಟದಲ್ಲಿ ವ್ಯಕ್ತಪಡಿಸಿದರು. ಮಕ್ಕಳ ಈ ಪ್ರತಿಭೆಗೆ ಕಲಾ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ಪ್ರತಿಷ್ಠಿತ ರಾಯಲ್ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ಕಾವೇರಿ ಸಭಾಂಗಣದಲ್ಲಿ ರವಿವಾರ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್ ಮಕ್ಕಳ ದಿನಾಚರಣೆ ಪ್ರಯುಕ್ತ ಕರ್ನಾಟಕದ ಅರಣ್ಯ ಅಥವಾ ವನ್ಯಜೀವಿಗಳು ಎಂಬ ವಿಷಯದ ಮೇಲೆ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಯಲ್ಲಿ ಈ ಸನ್ನಿವೇಶಗಳು ಕಂಡುಬಂದವು.

ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ಇಲಾಖೆಯ ಕ್ಷೇತ್ರ ಸುಮನ್ವಯ ಅಧಿಕಾರಿ ಗೌಡಪ್ಪ ಖೋತ ಮಾತನಾಡಿ, ಕನ್ನಡ ನಾಡಿನ ಪ್ರಭಾವಿ ಮತ್ತು ಹೆಮ್ಮೆಯ ಮಾಧ್ಯಮ ಸಂಸ್ಥೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಮೂಲಕ ನಮ್ಮ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಯ ಕುರಿತು ಅರಿವು ಮೂಡಿಸುತ್ತಿರುವದು ಉತ್ತಮ ಕಾರ್ಯವಾಗಿದೆ. ಮಕ್ಕಳ ಕಲ್ಪನೆಯಲ್ಲಿ ಮೂಡಿ ಬರುವ ಚಿತ್ರಗಳನ್ನು ನೋಡುವುದು ಒಂದು ಚೆಂದ. ನಮ್ಮ ಮಕ್ಕಳಿಗೆ ಶಿಕ್ಷಣವನ್ನ ಚಿತ್ರಕಲೆಯ ಮೂಲಕವೇ ಆರಂಭಿಸುತ್ತೇವೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ತಮ್ಮ ಕಲ್ಪನೆಯ ಚಿತ್ರಗಳನ್ನು ಬಿಡಿಸುವ ಮೂಲಕ ರಾಜ್ಯಮಟ್ಟದ ಬಹುಮಾನವನ್ನ ಪಡೆಯಲು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಅಥಣಿ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿ ರಾಕೇಶ ಅರ್ಜುನವಾಡ ಮಾತನಾಡಿ, ಅರಿವು ಮೂಡಿಸುವ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿರುವುದು ಒಳ್ಳೆಯ ಬೆಳವಣಿಗೆ. ಅರಣ್ಯ ನಾಶದಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ನಮ್ಮೆಲ್ಲರಿಗೂ ಮುಂಬರುವ ದಿನಗಳಲ್ಲಿ ಆಮ್ಲಜನಕದ ಕೊರತೆಯಾಗುವ ಸಾಧ್ಯತೆಯಿದೆ. ಇದರಿಂದ ವನ್ಯಜೀವಿಗಳ ಸಂಕುಲಕ್ಕೂ ಬಹಳಷ್ಟು ತೊಂದರೆಯಿದೆ. ಆದ್ದರಿಂದ ಇನ್ನಾದರೂ ಪರಿಸರದ ರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕೆಂದು ಎಂದರು.ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಕನ್ನಡಪ್ರಭ ವರದಿಗಾರ ಅಣ್ಣಾಸಾಹೇಬ ತೆಲಸಂಗ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಕಲಾವಿದರಾದ ಗುಂಡು ಕೋರಿ, ವಿಜಯಕುಮಾರ ಅಡಹಳ್ಳಿ ತೀರ್ಪುಗಾರರಾಗಿದ್ದರು. ತಾಲೂಕಿನ ವಿವಿಧ ಶಾಲೆಗಳಿಂದ 185 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿಜೇತರಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಯಲ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಎ.ಎಚ್.ಮುಲ್ಲಾ, ಸಮಾಜ ಸೇವಕ ವಿಲಾಸ ಕುಲಕರ್ಣಿ, ಸಂಜೀವ ಕಾಳಗಿ, ಶಿವಾನಂದ ಪೂಜಾರಿ, ರಾಜು ವಾಘ ಮೋರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಈ ಚಿತ್ರಕಲಾ ಸ್ಪರ್ಧೆಯಲ್ಲಿ 8ನೇ ತರಗತಿ ವಿಭಾಗದಲ್ಲಿ ಕೆಎಲ್ಇ ಸಂಸ್ಥೆಯ ರಣಮೋಡೆ ಪ್ರೌಢ ಶಾಲೆಯ ಪ್ರತಿಕ್ಷಾ ಮೇತ್ರಿ-ಪ್ರಥಮ, ಬಣಜವಾಡ ಪ್ರೌಢಶಾಲೆಯ ಅನುಶ್ರೀ ದುಮಾಳೆ-ದ್ವಿತೀಯ, ಕಾಶಿಬಾಯಿ ಚಿಕ್ಕಟ್ಟಿ ಪ್ರೌಢಶಾಲೆಯ ಸೌಮ್ಯಾ ಭಂಡಾರಿ-ತೃತೀಯ ಬಹುಮಾನ ಪಡೆದರು.9ನೇ ತರಗತಿ ವಿಭಾಗದಲ್ಲಿ ರಾಯಲ್ ಶಿಕ್ಷಣ ಸಂಸ್ಥೆಯ ಮಲ್ಲಿಕಾರ್ಜುನ ಮಮದಾಪುರ-ಪ್ರಥಮ, ಜೆ.ಇ.ಪ್ರೌಢಶಾಲೆಯ ಅಕ್ಷತಾ ಗಡದೆ-ದ್ವಿತೀಯ, ಶ್ರೀ ಮರುಳ ಶಂಕರ ದೇವರ ಪ್ರೌಢಶಾಲೆಯ ಸೃಷ್ಟಿ ಸೌದಾಗರ-ತೃತೀಯ ಸ್ಥಾನ ಪಡೆದರು. 10ನೇ ತರಗತಿ ವಿಭಾಗದಲ್ಲಿ ಎಸ್.ಎಸ್.ಬಾಲಕಿಯರ ಪ್ರೌಢ ಶಾಲೆಯ ಸಮನ್ವಿತಾ.ವಿ.ಕೆ-ಪ್ರಥಮ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಸಂಕೋನಟ್ಟಿಯ ಪ್ರತಿಕ್ಷಾ ಕಾಂಬಳೆ-ದ್ವಿತೀಯ, ಎಸ್.ಎಸ್.ಬಾಲಕಿಯರ ಪ್ರೌಢಶಾಲೆಯ ಅಂಜಲಿ ಕೆಂಪವಾಡ-ತೃತೀಯ ಸ್ಥಾನ ಪಡೆದರು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರ ನೀಡಲಾಯಿತು.

ಬಾಕ್ಸ್

ಸ್ಪರ್ಧಾ ವಿದ್ಯಾರ್ಥಿಗಳು ಹರ್ಷ

ಕನ್ನಡಪ್ರಭ ಹಮ್ಮಿಕೊಂಡಿರುವ ಈ ಚಿತ್ರಕಲಾ ಸ್ಪರ್ಧೆ ನಮ್ಮೆಲ್ಲರಿಗೆ ಖುಷಿ ತಂದಿದೆ. ನಮ್ಮ ಸುತ್ತಮುತ್ತಲಿನ ಗಿಡಮರಗಳು, ಅರಣ್ಯ ಸಂಪತ್ತು ನಾಶವಾಗುತ್ತಿರುವ ಇಂದಿನ ದಿನಗಳಲ್ಲಿ ಕಾಡು ಪ್ರಾಣಿಗಳನ್ನ ನಾವು ಕೇವಲ ಚಿತ್ರಪಟಗಳಲ್ಲಿ, ಟಿವಿ ಮತ್ತು ಮೊಬೈಲ್ ದೃಶ್ಯಗಳಲ್ಲಿ ನೋಡುವಂತಾಗಿದೆ. ಪರಿಸರದ ಸಂರಕ್ಷಣೆಯಲ್ಲಿ ನಮ್ಮದು ಕೂಡ ಮಹತ್ವದ ಪಾತ್ರವಿದೆ ಎಂಬುದನ್ನು ಈ ಚಿತ್ರಕಲೆಯ ಮೂಲಕ ಮತ್ತಷ್ಟು ಮನವರಿಕೆ ಮಾಡಿಕೊಂಡಿದ್ದೇವೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕ ಮಟ್ಟದ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ನನಗೆ ಖುಷಿ ತಂದಿದೆ. ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಪ್ರತೀಕ್ಷಾ ಕಾಂಬಳೆ ಹರ್ಷ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಢೀರ್‌ ಪದತ್ಯಾಗ ರಹಸ್ಯದ ಬಗ್ಗೆ ಗೌರ್‍ನರ್‌ಗೆ ಹೊರಟ್ಟಿ ಪತ್ರ
ಕೋರ್ಟ್‌ ಆದೇಶ ಮೀರಿದ ಸಚಿವ ನಾಗೇಂದ್ರ ಕೈಬಿಡಿ- ದೆಹಲಿ ಭೇಟಿ ನ್ಯಾಯಾಂಗ ನಿಂದನೆ