ಕನ್ನಡಪ್ರಭ ವಾರ್ತೆ ಅಥಣಿ
ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ಇಲಾಖೆಯ ಕ್ಷೇತ್ರ ಸುಮನ್ವಯ ಅಧಿಕಾರಿ ಗೌಡಪ್ಪ ಖೋತ ಮಾತನಾಡಿ, ಕನ್ನಡ ನಾಡಿನ ಪ್ರಭಾವಿ ಮತ್ತು ಹೆಮ್ಮೆಯ ಮಾಧ್ಯಮ ಸಂಸ್ಥೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಮೂಲಕ ನಮ್ಮ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಯ ಕುರಿತು ಅರಿವು ಮೂಡಿಸುತ್ತಿರುವದು ಉತ್ತಮ ಕಾರ್ಯವಾಗಿದೆ. ಮಕ್ಕಳ ಕಲ್ಪನೆಯಲ್ಲಿ ಮೂಡಿ ಬರುವ ಚಿತ್ರಗಳನ್ನು ನೋಡುವುದು ಒಂದು ಚೆಂದ. ನಮ್ಮ ಮಕ್ಕಳಿಗೆ ಶಿಕ್ಷಣವನ್ನ ಚಿತ್ರಕಲೆಯ ಮೂಲಕವೇ ಆರಂಭಿಸುತ್ತೇವೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ತಮ್ಮ ಕಲ್ಪನೆಯ ಚಿತ್ರಗಳನ್ನು ಬಿಡಿಸುವ ಮೂಲಕ ರಾಜ್ಯಮಟ್ಟದ ಬಹುಮಾನವನ್ನ ಪಡೆಯಲು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಅಥಣಿ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿ ರಾಕೇಶ ಅರ್ಜುನವಾಡ ಮಾತನಾಡಿ, ಅರಿವು ಮೂಡಿಸುವ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿರುವುದು ಒಳ್ಳೆಯ ಬೆಳವಣಿಗೆ. ಅರಣ್ಯ ನಾಶದಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ನಮ್ಮೆಲ್ಲರಿಗೂ ಮುಂಬರುವ ದಿನಗಳಲ್ಲಿ ಆಮ್ಲಜನಕದ ಕೊರತೆಯಾಗುವ ಸಾಧ್ಯತೆಯಿದೆ. ಇದರಿಂದ ವನ್ಯಜೀವಿಗಳ ಸಂಕುಲಕ್ಕೂ ಬಹಳಷ್ಟು ತೊಂದರೆಯಿದೆ. ಆದ್ದರಿಂದ ಇನ್ನಾದರೂ ಪರಿಸರದ ರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕೆಂದು ಎಂದರು.ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಕನ್ನಡಪ್ರಭ ವರದಿಗಾರ ಅಣ್ಣಾಸಾಹೇಬ ತೆಲಸಂಗ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಕಲಾವಿದರಾದ ಗುಂಡು ಕೋರಿ, ವಿಜಯಕುಮಾರ ಅಡಹಳ್ಳಿ ತೀರ್ಪುಗಾರರಾಗಿದ್ದರು. ತಾಲೂಕಿನ ವಿವಿಧ ಶಾಲೆಗಳಿಂದ 185 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿಜೇತರಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಯಲ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಎ.ಎಚ್.ಮುಲ್ಲಾ, ಸಮಾಜ ಸೇವಕ ವಿಲಾಸ ಕುಲಕರ್ಣಿ, ಸಂಜೀವ ಕಾಳಗಿ, ಶಿವಾನಂದ ಪೂಜಾರಿ, ರಾಜು ವಾಘ ಮೋರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಈ ಚಿತ್ರಕಲಾ ಸ್ಪರ್ಧೆಯಲ್ಲಿ 8ನೇ ತರಗತಿ ವಿಭಾಗದಲ್ಲಿ ಕೆಎಲ್ಇ ಸಂಸ್ಥೆಯ ರಣಮೋಡೆ ಪ್ರೌಢ ಶಾಲೆಯ ಪ್ರತಿಕ್ಷಾ ಮೇತ್ರಿ-ಪ್ರಥಮ, ಬಣಜವಾಡ ಪ್ರೌಢಶಾಲೆಯ ಅನುಶ್ರೀ ದುಮಾಳೆ-ದ್ವಿತೀಯ, ಕಾಶಿಬಾಯಿ ಚಿಕ್ಕಟ್ಟಿ ಪ್ರೌಢಶಾಲೆಯ ಸೌಮ್ಯಾ ಭಂಡಾರಿ-ತೃತೀಯ ಬಹುಮಾನ ಪಡೆದರು.9ನೇ ತರಗತಿ ವಿಭಾಗದಲ್ಲಿ ರಾಯಲ್ ಶಿಕ್ಷಣ ಸಂಸ್ಥೆಯ ಮಲ್ಲಿಕಾರ್ಜುನ ಮಮದಾಪುರ-ಪ್ರಥಮ, ಜೆ.ಇ.ಪ್ರೌಢಶಾಲೆಯ ಅಕ್ಷತಾ ಗಡದೆ-ದ್ವಿತೀಯ, ಶ್ರೀ ಮರುಳ ಶಂಕರ ದೇವರ ಪ್ರೌಢಶಾಲೆಯ ಸೃಷ್ಟಿ ಸೌದಾಗರ-ತೃತೀಯ ಸ್ಥಾನ ಪಡೆದರು. 10ನೇ ತರಗತಿ ವಿಭಾಗದಲ್ಲಿ ಎಸ್.ಎಸ್.ಬಾಲಕಿಯರ ಪ್ರೌಢ ಶಾಲೆಯ ಸಮನ್ವಿತಾ.ವಿ.ಕೆ-ಪ್ರಥಮ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಸಂಕೋನಟ್ಟಿಯ ಪ್ರತಿಕ್ಷಾ ಕಾಂಬಳೆ-ದ್ವಿತೀಯ, ಎಸ್.ಎಸ್.ಬಾಲಕಿಯರ ಪ್ರೌಢಶಾಲೆಯ ಅಂಜಲಿ ಕೆಂಪವಾಡ-ತೃತೀಯ ಸ್ಥಾನ ಪಡೆದರು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರ ನೀಡಲಾಯಿತು.
ಸ್ಪರ್ಧಾ ವಿದ್ಯಾರ್ಥಿಗಳು ಹರ್ಷ