ಹೇಮಗುಡ್ಡದಲ್ಲಿ ಮೈಸೂರು ಮಾದರಿಯ ದಸರಾ ಮಹೋತ್ಸವ

KannadaprabhaNewsNetwork |  
Published : Oct 13, 2024, 01:05 AM IST
12ುಲು12, | Kannada Prabha

ಸಾರಾಂಶ

ಸಮೀಪದ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೈಸೂರು ಮಾದರಿಯ ದಸರಾ ಉತ್ಸವ ಅದ್ಧೂರಿಯಾಗಿ ಜರುಗಿತು.

ಅಂಬಾರಿಯಲ್ಲಿ ದುರ್ಗಾಪರಮೇಶ್ವರಿ ಮೆರವಣಿಗೆ, ಸಹಸ್ರಾರು ಭಕ್ತರಿಂದ ವಿಕ್ಷಣೆ

ಕನ್ನಡಪ್ರಭ ವಾರ್ತೆ ಗಂಗಾವತಿ

ಸಮೀಪದ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೈಸೂರು ಮಾದರಿಯ ದಸರಾ ಉತ್ಸವ ಅದ್ಧೂರಿಯಾಗಿ ಜರುಗಿತು. ಶನಿವಾರ ಸಂಜೆ ಅಂಬಾರಿಯಲ್ಲಿ ದುರ್ಗಾಪರಮೇಶ್ವರಿ ಮೂರ್ತಿಯನ್ನು ಸಿಂಗರಿಸಿ ಸುಮಾರು 3 ಕಿಮೀ ದೂರದವರೆಗೆ ಮೆರವಣಿಗೆ ಜರುಗಿತು.

ಕಳೆದ 40 ವರ್ಷಗಳಿಂದ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ನೇತೃತ್ವದಲ್ಲಿ ದಸರಾ ಮಹೋತ್ಸವ ಜರುಗುತ್ತಿದ್ದು, ಮೈಸೂರು ಮಾದರಿಯಲ್ಲಿ ಅಂಬಾರಿ ಮೆರವಣಿಗೆ ಜರುಗಿತು.

ಕಳೆದ 9 ದಿನಗಳಿಂದ ನವರಾತ್ರಿ ಉತ್ಸವದಲ್ಲಿ ಹೋಮ-ಹವನಗಳು ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಅಂಬಾರಿ ಮೆರವಣಿಗೆ:

ಹೇಮಗುಡ್ಡದ ದುರ್ಗಾಪರಮೇಶ್ವರಿ ದೇಗುಲದಿಂದ ಅಂಬಾರಿ ಮೆರವಣಿಗೆ ಪ್ರಾರಂಭಗೊಂಡಿತು. ಮಾಜಿ ಸಂಸದ ಎಚ್.ಜಿ. ರಾಮುಲು ದಂಪತಿ ಪುಷ್ಪಗುಚ್ಚ ಹಾಕುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಭಜನೆ, ಡೊಳ್ಳು ಕುಣಿತ ಗಮನ ಸೆಳೆದವು. ಮೆರವಣಿಗೆಯಲ್ಲಿ ಸಂಸದ ರಾಜಶೇಖರ್ ಹಿಟ್ನಾಳ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡರಾದ ಶೇಖರಗೌಡ ಗೌಡರ್, ರೆಡ್ಡಿ ಶ್ರೀನಿವಾಸ, ಜೋಗದ ಹನುಮಂತಪ್ಪನಾಯಕ ಸೇರಿದಂತೆ ಇತರರು ಭಾಗವಹಿಸಿದ್ದರು. ಜಂಬೂಸವಾರಿ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳು ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಸಹಸ್ರಾರು ಜನರು ಆಗಮಿಸಿ ವೀಕ್ಷಿಸಿದರು.

ಸಾಮೂಹಿಕ ವಿವಾಹ:

ದಸರಾ ಉತ್ಸವದ ಅಂಗವಾಗಿ ಹೇಮಗುಡ್ಡದಲ್ಲಿ 40 ಜೋಡಿಗಳ ಸಾಮೂಹಿಕ ವಿವಾಹ ಜರುಗಿತು. ವಧು-ವರರಿಗೆ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾಂಗಲ್ಯ, ವಸ್ತ್ರ ನೀಡಿ ಶುಭಕೋರಿದರು. ಬಂದಂತಹ ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆ ಕೈಗೊಂಡಿದ್ದರು. ಆನೆಗೊಂದಿಯಲ್ಲೂ ಜಂಬೂ ಸವಾರಿ:

ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಆನೆಗೊಂದಿಯ ದುರ್ಗಾಬೆಟ್ಟದಲ್ಲಿ ದಸರಾ ಉತ್ಸವ ಅದ್ಧೂರಿಯಾಗಿ ಜರುಗಿತು. ದುರ್ಗಾಬೆಟ್ಟದ ದುರ್ಗಾದೇವಿಯ ದೇಗುಲದಲ್ಲಿ ವಿಜಯ ದಶಮಿ ನಿಮಿತ್ತ ಆನೆಯ ಮೇಲೆ ಅಂಬಾರಿ ಸಿಂಗರಿಸಿ ದೇವಿಯ ಮೆರವಣಿಗೆ ಜರುಗಿತು. ಬೆಟ್ಟದಿಂದ ಪ್ರಾರಂಭಗೊಂಡ ಮೆರವಣಿಗೆ ಆನೆಗೊಂದಿಯ ಪ್ರಮುಖ ಬೀದಿಗಳಲ್ಲಿ ನಡೆಯಿತು. ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಅರ್ಚಕ ಬ್ರಹ್ಮಾನಂದಸ್ವಾಮೀಜಿ ಪೂಜೆ ಸಲ್ಲಿಸಿದ ನಂತರ ಜಂಬೂ ಸವಾರಿಗೆ ಚಾಲನೆ ನೀಡಲಾಯಿತು.

ಜಂಬು ಸವಾರಿಗೆ ರಾಜವಂಶಸ್ಥರಾದ ಲಲಿತರಾಣಿ ಶ್ರೀರಂಗದೇವರಾಯಲು, ಕೃಷ್ಣದೇವರಾಯಲು ಚಾಲನೆ ನೀಡಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪ್ರಮುಖರಾದ ಎಚ್.ಎಂ. ಸಿದ್ದರಾಮಸ್ವಾಮಿ, ರಾಜಣ್ಣ, ರಾಘವೇಂದ್ರ ಶ್ರೇಷ್ಠಿ, ವಿಷ್ಣುತೀರ್ಥ ಜೋಶಿ, ಎಚ್.ಎಂ. ವಿರುಪಾಕ್ಷಯ್ಯಸ್ವಾಮಿ ಸೇರಿದಂತೆ ಪ್ರಮುಖರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏ.1ರಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ
ತೈಲ ಕೊರತೆ ವದಂತಿ: ಖರೀದಿಗೆ ಮುಗಿಬಿದ್ದ ಜನ-ಬಂಕ್‌ಗಳಲ್ಲಿ ಭಾರೀ ರಷ್‌