ಸಾಗರ: ಅಚ್ಚುಕಟ್ಟು ವ್ಯವಸ್ಥೆ, ಅಪಾರ ಜನಸಾಗರ, ಸುಗಮ ಸಂಚಾರಕ್ಕೆ ತೊಂದರೆಯಾಗದ ವ್ಯವಸ್ಥೆ, ಶುಚಿ-ರುಚಿಯಾದ ಊಟ.. ಹೀಗೆ ಹತ್ತು ಹಲವು ಕಾರಣಗಳಿಂದ ಪಟ್ಟಣದಲ್ಲಿ ಮಂಗಳವಾರ ನಡೆದ ಶಕ್ತಿ ಸಾಗರ ಸಂಗಮ ಹೆಸರಿನ ಈಡಿಗ, ಬಿಲ್ಲವ, ನಾಮಧಾರಿ ದೀವರು ಸೇರಿದಂತೆ ೨೬ ಪಂಗಡಗಳ ರಾಜ್ಯಮಟ್ಟದ ಬೃಹತ್ ಸಮಾವೇಶ ಯಶಸ್ವಿಯಾಯಿತು.
ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇದ್ದಾಗ ಈಡಿಗ, ಬಿಲ್ಲವ, ನಾಮಧಾರಿ ದೀವರು ಸೇರಿದಂತೆ ೨೬ ಪಂಗಡಗಳ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಈ ಕಾರಣಕ್ಕಾಗಿ ಅವರಿಗೆ ಅಭಿಮಾನದ ಸನ್ಮಾನ ಸಲ್ಲಿಸಬೇಕು ಎನ್ನುವ ಉದ್ದೇಶದ ಸಮಾವೇಶ ಆ ದಿಸೆಯಲ್ಲಿ ಯಶಸ್ವಿಯಾಗಿದೆ. ಸಮಾವೇಶದ ಸಂಪೂರ್ಣ ನೇತೃತ್ವ ವಹಿಸಿಕೊಂಡಿದ್ದ ಮಾಜಿ ಸಚಿವ ಎಚ್.ಹಾಲಪ್ಪ ಅವರು ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹರಿದು ಬಂದ ಜನಸಾಗರ:ಸಮಾವೇಶಕ್ಕೆ ಉಡುಪಿ, ದಕ್ಷಿಣ ಕನ್ನಡ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಶಿವಮೊಗ್ಗದ ಎಲ್ಲ ತಾಲೂಕಿನಿಂದಲೂ ಈಡಿಗ, ಬಿಲ್ಲವ, ನಾಮಧಾರಿ, ದೀವರು ಹಾಗೂ ೨೬ ಸಮುದಾಯಗಳ ಜನರು ತಂಡೋಪತಂಡವಾಗಿ ಬಂದಿದ್ದರು. ಆಯೋಜಕರ ನಿರೀಕ್ಷೆ ಹುಸಿ ಆಗದಂತೆ ಸುಮಾರು ೨೦ ಸಾವಿರಕ್ಕೂ ಹೆಚ್ಚು ಜನ ಖಾಸಗಿ ಬಸ್ಗಳು, ಸ್ವಂತ ವಾಹನ, ಟೆಂಫೋ, ಮಿನಿ ಬಸ್ಗಳು ಸೇರಿದಂತೆ ಸಾವಿರಾರು ವಾಹನಗಳಲ್ಲಿ ಆಗಮಿಸಿ, ಸಮಾವೇಶಕ್ಕೆ ಸಾಕ್ಷಿಯಾದರು.
ಸುಗಮ ಸಂಚಾರಕ್ಕೆ ಆದ್ಯತೆ:ರಾಜಕೀಯ ಕಾರ್ಯಕ್ರಮವೆಂದರೆ ಜನಸಾಮಾನ್ಯರಿಗೆ ದಿನವಿಡೀ ಕಿರಿಕಿರಿ ತಪ್ಪದು. ಆದರೆ, ಇಲ್ಲಿನ ಸಮಾವೇಶದಲ್ಲಿ ೨೦ ಸಾವಿರಕ್ಕೂ ಹೆಚ್ಚು ಜನ, ಸಾವಿರಾರು ವಾಹನಗಳಲ್ಲಿ ಬಂದಿದ್ದರೂ, ಸ್ಥಳೀಯರಿಗೆ ಸಂಚಾರ ದಟ್ಟಣೆಯ ತೊಂದರೆ ಆಗಿರಲಿಲ್ಲ. ಬಸ್, ಮಿನಿ ಬಸ್ಗಳಿಗೆ ಒಂದು ಜಾಗ, ಕಾರ್ ಪಾರ್ಕಿಂಗ್ಗೆ ಮತ್ತೊಂದೆಡೆ, ಬೈಕ್ಗಳಿಗೆ ಬೇರೆ ಹೀಗೆ ಪ್ರತ್ಯಕೇವಾಗಿ ಸಮಾರಂಭ ನಡೆಯುವ ಸ್ಥಳದ ಸಮೀಪದಲ್ಲಿ ವಾಹನ ನಿಲುಗಡೆಗೆ ಜಾಗ ಗುರುತಿಸಲಾಗಿತ್ತು. ಜೊತೆಗೆ ಗಣ್ಯರ ಕಾರುಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿದ್ದೂ ವಿಶೇಷವಾಗಿತ್ತು.
ರುಚಿ-ಶುಚಿ ಊಟ:ಸಮಾವೇಶಕ್ಕೆ ಬಂದವರಿಗೆ ಬಿಸಿಲ ಬೇಗೆ ತಪ್ಪಿಸುವ ಉದ್ದೇಶದಿಂದ ಮಜ್ಜಿಗೆ, ನೀರಿನ ಪ್ಯಾಕೇಟ್ಗಳನ್ನು ಯತೇಚ್ಛವಾಗಿ ಸರಬರಾಜು ಮಾಡಲಾಗಿತ್ತು. ಜೊತೆಗೆ ಸೋಮವಾರ ರಾತ್ರಿ, ಮಂಗಳವಾರ ಬೆಳಗ್ಗೆ ಹಾಗೂ ಮಧ್ಯಾಹ್ನದ ಊಟೋಪಚಾರಕ್ಕೂ ಆದ್ಯತೆ ನೀಡಿ, ಯಾವುದೇ ಕೊರತೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿತ್ತು. ಸಮಾರಂಭಕ್ಕೆ ಬಂದ ಎಲ್ಲರಿಗೂ ಗುಣಮಟ್ಟದ ತಿಂಡಿ, ಭೋಜನದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.
- - - -೫ಕೆಎಸ್.ಎಜಿ.೨: ಸಮಾವೇಶಕ್ಕೆ ಬಂದ ಜನಸಾಗರ.