ಬಿಜೆಪಿಯವರು ತಮ್ಮ ಹುಳುಕು ಮುಚ್ಚಿಕೊಳ್ಳಲಿ

KannadaprabhaNewsNetwork | Published : Nov 23, 2023 1:45 AM

ಸಾರಾಂಶ

ಕಾಂಗ್ರೆಸ್‍ನವರು ಬಚ್ಚಾಗಳು ಎಂದು ಹೇಳಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ನಮ್ಮನ್ನ ಭಸ್ಮ ಮಾಡುವ ಶಿವಶಕ್ತಿ ಪಡೆದಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ

ಮಾತನಾಡಲು ವಿಷಯಗಳಿಲ್ಲದೆ ಮನಬಂದಂತೆ ಹೇಳಿಕೆ । ಚಿತ್ರದುರ್ಗದಲ್ಲಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಾಂಗ್ರೆಸ್‍ನವರು ಬಚ್ಚಾಗಳು ಎಂದು ಹೇಳಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ನಮ್ಮನ್ನ ಭಸ್ಮ ಮಾಡುವ ಶಿವಶಕ್ತಿ ಪಡೆದಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ.

ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಧ್ವನಿ ಎತ್ತಲು ಏನೂ ಸಿಗುತ್ತಿಲ್ಲ, ಹಾಗಾಗಿ ಏನೇನೋ ಹುಡುಕುತ್ತಾ, ಮನಬಂದಂತೆ ಮಾತನಾಡುತ್ತಿದ್ದಾರೆ. ಬೇರೆಯವರ ಬಗ್ಗೆ ಮಾತನಾಡುವ ಮೊದಲು ತಮ್ಮಲ್ಲಿರುವ ಹುಳಕುಗಳನ್ನು ಮುಚ್ಚಿಕೊಳ್ಳಬೇಕು. ವಿರೋಧ ಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಈಗಷ್ಟೇ ಆಗಿದ್ದು, ಯತ್ನಾಳ್ ಹೊಡೆತ ಯಡಿಯೂರಪ್ಪ, ಬೊಮ್ಮಾಯಿಗೆ ತಡೆಯಲು ಆಗುತ್ತಿಲ್ಲ. ಇವರಿಬ್ಬರು ಯಾವ ರೀತಿಯಲ್ಲಿ ತಡೆದು ಕೊಳ್ಳುತ್ತಾರೆ ನೋಡೋಣಾ ಎಂದರು.

ಬರ ಕುರಿತು ಸ್ಪಂದಿಸದ ಕೇಂದ್ರ ಸರ್ಕಾರ: ಬರ ಪರಿಹಾರದ ಎಲ್ಲಾ ಪ್ರಕ್ರಿಯೆ ಮುಗಿದು ಘೋಷಣೆ ಹಂತದಲ್ಲಿದೆ. ಪರಿಹಾರ ಘೋಷಣೆ ಮಾಡುವ ಬಗ್ಗೆ ಕೇಂದ್ರಕ್ಕೆ ಒತ್ತಡ ಹಾಕಿದ್ದೇವೆ. ನಾನು ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ದೆಹಲಿಗೆ ಮಂತ್ರಿಗಳ ಭೇಟಿಗೆ ಹೋಗಿದ್ದೆವು. ಆದರೆ ಮಂತ್ರಿಗಳ ಸಿಗಲಿಲ್ಲ. ನಮ್ಮ ಮನವಿಗಳನ್ನು ಕೇಂದ್ರಕ್ಕೆ ನೀಡಿದ್ದೇವೆ. ನಮ್ಮ ಮನವಿಗೆ ಕೇಂದ್ರ ಸರ್ಕಾರದ ಉತ್ತರ ಇನ್ನೂ ಸಿಕ್ಕಿಲ್ಲ ಎಂದು ಹೇಳಿದ ಅವರು, ಹಣಕಾಸು ಸಚಿವರು ನಾಳೆ ಭೇಟಿಗೆ ಅವಕಾಶ ನೀಡಿದ್ದಾರೆ. ನಾನು ಕೃಷ್ಣಬೈರೇಗೌಡ ದೆಹಲಿಗೆ ಹೋಗುತ್ತೇವೆ. 2-3 ದಿನಗಳ ಬಳಿಕ ಅಂತಿಮ ನಿರ್ಧಾರವಾಗುತ್ತದೆ ಎಂದರು.

ಕೇಂದ್ರದಿಂದ ದ್ವೇಷ ರಾಜಕೀಯ: ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ. 25 ಸಂಸದರನ್ನು ಗೆಲ್ಲಿಸಿರುವ ಆ ಪ್ರಜ್ಞೆ ಅವರಿಗಿಲ್ಲ. ಪ್ರಧಾನಿ ಮೋದಿಗೆ ರಾಜ್ಯ 2 ಬಾರಿ ಬೆಂಬಲ ಕೊಟ್ಟಿದೆ. ಆದರೆ ರಾಜ್ಯದ ಯಾವುದೇ ವಿಚಾರಗಳ ಬಗ್ಗೆ ಗಮನ ನೀಡುತ್ತಿಲ್ಲ ಎಂದು ಆರೋಪಿಸಿ ರಾಜ್ಯದ ವಿಚಾರಗಳಲೂ ಯಾವುದೇ ಗಮನ ನೀಡುತ್ತಿಲ್ಲ. 50 ಸಾವಿರ ಕೋಟಿ ರು.ಮಾತ್ರ ನಮಗೆ ತಲುಪುತ್ತಿದೆ. ಎಲೆಕ್ಷನ್ ಟೈಂ ಮಾತ್ರ ರಾಜಕಾರಣ ಇರುತ್ತದೆ. ರಾಜ್ಯದ ಜನರ ಬಗ್ಗೆ ಸೌಲಭ್ಯಗಳನ್ನು ಸ್ಪಂದಿಸುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದ ಹತಾಷೆಯಿಂದ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಕಲ್ಲಿದ್ದಲು ವಿಚಾರದಲ್ಲಿ ತಪ್ಪು ಮಾಡಿಲ್ಲ. ತಪ್ಪು ಮಾಡಿದರೆ ನಿರ್ಧಾಕ್ಷಿಣ್ಯ ಕ್ರಮವಾ ಗುತ್ತದೆ. ಜಾತಿ ಜನಗಣತಿ ವಿಚಾರದಲ್ಲಿ ಕೆಲವು ಮನೆಗಳಿಗೆ ಭೇಟಿ ನೀಡಿಲ್ಲ ಎಂಬ ಆತಂಕ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಕ್ಯಾಬಿನೆಟ್‍ನಲ್ಲಿ ಚರ್ಚೆ ಎಂದಿದ್ದಾರೆ. ನಿಗಮ ಮಂಡಳಿ ನೇಮಕಾತಿ ಯಾವುದೇ ಅಸಮಾಧಾನ ಇಲ್ಲ. ಬಸವರಾಜ ರಾಯರೆಡ್ಡಿ ನಮ್ಮ ಪಕ್ಷದಲ್ಲಿ ಹಿರಿಯರಿದ್ದಾರೆ. ಅವರು ಮಂತ್ರಿ ಆಗಬೇಕಾದವರು. ಅವರನ್ನ ಮುಂದೆ ನಮ್ಮ ಪಕ್ಷ ಪರಿಗಣಿಸಲಿದೆ ಎಂದು ಹೇಳಿದ ಅವರು, ಕಳೆದ ಆರು ತಿಂಗಳಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ಅಧಿವೇಶನದಲ್ಲಿ ಏನೂ ಮಾತನಾಡುತ್ತಾರೆ ಎಂಬುದನ್ನೂ ನೋಡೋಣ ಎಂದು ಅಪಹಾಸ್ಯ ಮಾಡಿದರು.ಈ ವೇಳೆ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಸೇರಿದಂತೆ ಇತರರು ಹಾಜರಿದ್ದರು.

ಆರ್‌ಎಸ್‌ಎಸ್ ಬ್ಯಾನ್ ಮಾಡುತ್ತೇವೆ ಎಂದಿಲ್ಲ

ಲೋಕಸಭೆ ಚುನಾವಣೆ ಇರುವುದರಿಂದ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡುವ ಕುರಿತು ನಾವು ಎಲ್ಲೂ ಕೂಡ ಹೇಳಿಲ್ಲ ಎಂದು ಚಲುವರಾಯ ಸ್ವಾಮಿ ಹೇಳಿದರು. ಸಾರ್ವಜನಿಕ ಹಾನಿ ಮಾಡುವ ಸಂಘಟನೆ ಕ್ರಮ ಎಂದಷ್ಟೇ ಹೇಳಿದ್ದೇವೆ. ಸಂಘ-ಸಂಸ್ಥೆಗಳು ಜನರ ಹಿತದೃಷ್ಟಿಯಿಂದ ಕೆಲಸ ಮಾಡಿದರೆ ಹಾನಿಯಿಲ್ಲ. ಆದರೆ ಸಾರ್ವಜನಿಕ ಸಮಸ್ಯೆಗಳು ಆಗಬಾರದು ಅಷ್ಟೇ ಎಂದು ಹೇಳಿದರು.

Share this article