ಕನ್ನಡಪ್ರಭ ವಾರ್ತೆ ಹಾನಗಲ್ಲ
ಸೋಮವಾರ ತಾಲೂಕಿನ ಬೈಚವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ₹೨೭ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಜಿ +೧ ಮಾದರಿಯ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ೧೦-೧೨ ವರ್ಷಗಳ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಶಿಕ್ಷಣ ಕ್ಷೇತ್ರಕ್ಕೆ ಕೊನೆಯ ಪ್ರಾಮುಖ್ಯತೆ ಸಿಗುತ್ತಿದೆ ಎನ್ನುವ ಕೊರಗು ಕಾಡುತ್ತಿದೆ. ಹೀಗಾಗಿ ಸೌಲಭ್ಯಗಳ ಕೊರತೆಯಿಂದ ಜಾಗತಿಕ ಸ್ಪರ್ಧೆಯಲ್ಲಿ ನಮ್ಮ ಮಕ್ಕಳು ಹಿಂದೆ ಉಳಿಯುವಂತಾಗಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ತಾಲೂಕಿನಲ್ಲಿ ಶೈಕ್ಷಣಿಕ ಸುಧಾರಣೆ ತರಲಾಗುತ್ತಿದೆ. ಹತ್ತು, ಹಲವು ಶಾಲೆಗಳಿಗೆ ಡೆಸ್ಕ್, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಸೇರಿದಂತೆ ಇತರ ಪೀಠೋಪಕರಣ ಒದಗಿಸಲಾಗಿದೆ. ಎಷ್ಟೇ ಕಷ್ಟ ಎದುರಾದರೂ, ಸವಾಲುಗಳಿದ್ದರೂ ಶಿಕ್ಷಣಕ್ಕೆ ಮೊದಲಾದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಹಿಂದಿನ ರಾಜ್ಯ ಸರ್ಕಾರದ ಕಾಮಗಾರಿಗಳಿಗೆ ಹಣ ಸಂದಾಯ ಮಾಡಬೇಕಿರುವ ಹಿನ್ನೆಲೆ ಹೊಸ ಕಾಮಗಾರಿಗಳು ವಿಳಂಬವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿಯಲ್ಲಿ ಬಜೆಟ್ ಮಂಡಿಸಲಿದ್ದು, ಎಪ್ರಿಲ್ ವೇಳೆಗೆ ಹೊಸ ಕಾಮಗಾರಿಗಳಿಗೆ ಹಣಕಾಸಿನ ನೆರವು ದೊರಕುವ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯೋಪಾಧ್ಯಾಯ ಮಹೇಶ ನಾಯ್ಕ ಮಾತನಾಡಿ, ಶಾಲೆಗೆ ಸುತ್ತಲಿನ ೧೦-೧೨ ಗ್ರಾಮಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಗಮನ ನೀಡಲಾಗಿದೆ. ಕಳೆದ ವರ್ಷ ಶಾಲೆಗೆ ೧ ಎಕೆರೆ ೩೭ ಗುಂಟೆ ಜಾಗ ಮಂಜೂರಾತಿಯಾಗಿದ್ದು, ಫಲಿತಾಂಶವೂ ಉತ್ತಮವಾಗಿದೆ. ಶಾಲೆಗೆ ಸಂಪರ್ಕ ರಸ್ತೆ, ಆವರಣ ಗೋಡೆ ನಿರ್ಮಾಣ ಹಾಗೂ ಮೈದಾನ ಸಮತಟ್ಟುಗೊಳಿಸಬೇಕಿದೆ ಎಂದರು.ಗ್ರಾಪಂ ಅಧ್ಯಕ್ಷೆ ಕವನಾ ಕಲ್ಲನಗೌಡ್ರ, ಎಸ್ಡಿಎಂಸಿ ಅಧ್ಯಕ್ಷ ಶಂಕ್ರಣ್ಣ ತಾವರಗೇರಿ, ಬಿಇಒ ವಿ.ವಿ.ಸಾಲಿಮಠ, ಮುಖಂಡರಾದ ಉಮೇಶ ದಾನಪ್ಪನವರ, ಮರಿಗೌಡ ಪಾಟೀಲ, ಶಿವಣ್ಣ ಗೊಲ್ಲರ, ಅಶೋಕ ಜಾಧವ್, ಬಸವಣ್ಣೆಪ್ಪ ವಾಲಿಕಾರ, ಸಿದ್ದನಗೌಡ ಪಾಟೀಲ, ಶ್ರೀಕಾಂತ ಅರಳೇಶ್ವರ, ತಿಮ್ಮಣ್ಣ, ಮೌಲಾಸಾಬ ಯಳವಟ್ಟಿ, ನಾಗರಾಜ ಶೇಷಪ್ಪನವರ, ಸಿಆರ್ಪಿ ಸಿದ್ದಲಿಂಗೇಶ ಕಾಯಕದ, ಪಿಡಿಒ ಸುಮಂಗಲಾ ಸೇರಿದಂತೆ ಗ್ರಾಪಂ ಮತ್ತು ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.