ಬಂಟ್ವಾಳ: ಕಳೆದ ನಾಲ್ಕೈದು ವರ್ಷಗಳಿಂದ ೮೧ ವರ್ಷ ಪ್ರಾಯದ ಗಣೇಶ ಪ್ರಭುಗಳು ಕರುಣಾಜನಕ ಸ್ಥಿತಿಯಲ್ಲಿ ಮಾಸ್ತವ್ಯವಿದ್ದ ಮಾಣಿಯ ಪಾಳು ಡೇರೆಯಲ್ಲಿ ಶುಕ್ರವಾರ ಮಾಣಿ ಗ್ರಾಮ ಪಂಚಾಯಿತಿ ಆಡಳಿತ ತೆರವುಗೊಳಿಸಿದೆ. ಒಂದು ಕಾಲದಲ್ಲಿ ವೆರೈಟಿ ಸಾರಿ ಸದನ್ ಮಳಿಗೆ ಮಾಲಕರಾಗಿದ್ದ ಗಣೇಶ ಪ್ರಭುಗಳ ಅತಂತ್ರ ಸ್ಥಿತಿಯ ಬಗ್ಗೆ ಕನ್ನಡಪ್ರಭದಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ತಾಲೂಕು ಆಡಳಿತ ಅವರನ್ನು ಮಂಜೇಶ್ವರ ದೈಗೋಳಿಯ ಸಾಯಿನಿಕೇತನ ಆಶ್ರಮಕ್ಕೆ ಸೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿತ್ತು. ಆಶ್ರಮದ ಡಾ. ಉದಯ ಕುಮಾರ್ ಅವರು ಗಣೇಶ್ ಪ್ರಭು ಅವರನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದರು.
34 ನೆಕ್ಕಿಲಾಡಿ ಗ್ರಾಪಂ: ವಿರೋಧದ ನಡುವೆಯೇ ಸರ್ಕಾರಿ ಜಾಗ ತೆರವು ಕಾರ್ಯ
ಉಪ್ಪಿನಂಗಡಿ: ೩೪ ನೆಕ್ಕಿಲಾಡಿ ಗ್ರಾ.ಪಂ.ನ ಬೀತಲಪ್ಪು ಎಂಬಲ್ಲಿ ಸರ್ಕಾರಿ ಜಾಗವನ್ನು ಕೆಲವರು ಅತಿಕ್ರಮಿಸಿ ಶೆಡ್ ನಿರ್ಮಿಸಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಸಲಾಯಿತು. ತೆರವು ಕಾರ್ಯಕ್ಕೆ ವಿರೋಧ ವ್ಯಕ್ತವಾದರೂ ಉಪ್ಪಿನಂಗಡಿ ಕಂದಾಯ ಹೋಬಳಿಯ ಕಂದಾಯ ನಿರೀಕ್ಷಕರಾದ ಚಂದ್ರ ನಾಯ್ಕ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.ತೆರವಿಗೆ ವಿರೋಧ: ಬೀತಲಪ್ಪು ಬಳಿಯ ಸ.ನಂ.೮೪/೩ಎ ಯಲ್ಲಿರುವ ೦.೪೦ ಎಕರೆ ಸರ್ಕಾರಿ ಜಾಗದಲ್ಲಿ ಐದು ಮಂದಿ ಶೆಡ್ಗಳನ್ನು ನಿರ್ಮಿಸಿ ಭೂ ಒತ್ತುವರಿಗೆ ಯತ್ನಿಸಿದ ಬಗ್ಗೆ ಕಂದಾಯ ಇಲಾಖಾಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದಾಗ ಸ್ಥಳೀಯ ಕೆಲ ಸಂಘಟನೆಗಳ ಮುಖಂಡರಾದ ರೂಪೇಶ್ ರೈ, ಅನಿ ಮಿನೇಜಸ್ ಮತ್ತಿತರರು ಸ್ಥಳಕ್ಕಾಗಮಿಸಿ ತೆರವು ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸ್ಪಷ್ಟನೆ ನೀಡಿದ ಕಂದಾಯ ನಿರೀಕ್ಷಕರು ಕಾನೂನು ಉಲ್ಲಂಘಿಸಿ ಭೂಮಿ ಒತ್ತುವರಿಗೆ ಅವಕಾಶ ನೀಡಲಾಗದು ಎಂದರು.