ಕನ್ನಡಪ್ರಭವಾರ್ತೆ ಚಿತ್ರದುರ್ಗನವೆಂಬರ್ 11 ರಂದು ಚಿತ್ರದುರ್ಗದಲ್ಲಿ ನಡೆಯುವ ವೀರವನಿತೆ ಒನಕೆ ಓಬವ್ವ ಜಯಂತಿಗೆ ಸಂಭ್ರಮದ ಸ್ಪರ್ಶ ನೀಡಲು ಎಲ್ಲರೂ ಶ್ರಮಿಸಬೇಕೆಂದು ಛಲವಾದಿ ಸಮಾಜದ ಮುಖಂಡ ಎಚ್.ಸಿ. ನಿರಂಜಮೂರ್ತಿ ಹೇಳಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಂಯುಕ್ತಾಶ್ರಯದಲ್ಲಿ ನಡೆಯುವ ಒನಕೆ ಓಬವ್ವ ಜಯಂತಿಗೆ ಛಲವಾದಿ ಜನಾಂಗದವರೆಲ್ಲಾ ಸೇರಿ ಕೈಜೋಡಿಸಿ ಊರಿನ ಹಬ್ಬದ ರೀತಿಯಲ್ಲಿ ಆಚರಿಸಬೇಕು. ಒನಕೆ ಓಬವ್ವಳ ಸಾಹಸ, ದಿಟ್ಟತನವನ್ನು ಮುಂದಿನ ಪೀಳಿಗೆಗೆ ಪರಿಚಯಿಸೋಣ ಎಂದರು. ಅಂದು ಬೆಳಿಗ್ಗೆ 8-30 ಕ್ಕೆ ಹೊಳಲ್ಕೆರೆ ರಸ್ತೆಯಲ್ಲಿರುವ ಒನಕೆ ಓಬವ್ವ ದೇವಸ್ಥಾನದಿಂದ ಪುಷ್ಪಾಲಂಕೃತ ಸಾರೋಟಿನಲ್ಲಿ ಓಬವ್ವಳ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳ ಸಮ್ಮುಖದಲ್ಲಿ ಮೆರವಣಿಗೆ ಹೊರಟು ರಂಗಮಂದಿರ ತಲುಪಲಿದೆ. ಹನ್ನೊಂದು ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಛಲವಾದಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಯಂತಿಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಮಾತನಾಡಿ, ಓಬವ್ವಳ ಜಯಂತಿ ಮೂಲಕ ಛಲವಾದಿ ಜನಾಂಗದವರು ಒಂದೆಡೆ ಸೇರಿ ಸಂಘಟನೆಯಾಗೋಣ. ಇದರಿಂದ ಮುಂದಿನ ಪೀಳಿಗೆಗೆ ಪರಂಪರೆಯನ್ನು ಉಳಿಸಿದಂತಾಗುತ್ತದೆಂದು ಸಲಹೆ ನೀಡಿದರು.ಕೃಷಿ ಇಲಾಖೆ ನಿವೃತ್ತ ಉಪ ನಿರ್ದೇಶಕ ವೆಂಕಟೇಶ್ ಮಾತನಾಡಿ, ಒನಕೆ ಓಬವ್ವ ಜಯಂತಿಯಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರುಗಳನ್ನು ಗುರುತಿಸಿ ಸನ್ಮಾನಿಸೋಣ ಎಂದು ಹೇಳಿದರು.
ಪಿವಿಎಸ್ ಆಸ್ಪತ್ರೆಯ ಡಾ. ಪಿ.ವಿ. ಶ್ರೀಧರಮೂರ್ತಿ, ನ್ಯಾಯವಾದಿಗಳಾದ ಎಚ್. ಅಣ್ಣಪ್ಪಸ್ವಾಮಿ, ಎನ್. ಶಶಾಂಕ್, ಛಲವಾದಿ ಸಮಾಜದ ಮುಖಂಡರುಗಳಾದ ಬಾಳೆಕಾಯಿ ಶ್ರೀನಿವಾಸ್, ಎಸ್.ಎನ್. ರವಿಕುಮಾರ್, ನವೀನ್, ಶಿಕ್ಷಣ ಇಲಾಖೆಯ ನಾಗರಾಜ್, ಜಯರಾಂ ಕೆ. ಪರಮೇಶ್ವರಪ್ಪ ಪೂಜಾರ್, ಪ್ರದೀಪ್, ಸೋಮಣ್ಣ, ಹನುಮಂತಪ್ಪ, ಈರಜ್ಜನಹಟ್ಟಿ ತಿಪ್ಪೇಸ್ವಾಮಿ, ಜಗ್ಗಣ್ಣ, ರಂಗಸ್ವಾಮಿ ಸೇರಿದಂತೆ ಇನ್ನು ಅನೇಕರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.