ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದಲ್ಲಿ ಶುಕ್ರವಾರ ಶ್ರಾವಣ ಮಾಸದಂಗವಾಗಿ ಶ್ರೀಮಠದ ಸಿದ್ದಲಿಂಗ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶರಣವೃತ ಸ್ವೀಕರಿಸಿದರು. ಬೆಳಗ್ಗೆ 6 ಗಂಟೆಗೆ ವಿವಿಧ ಶರಣ-ಶರಣೆಯರು ಶ್ರೀಗಳ ಸಾನಿಧ್ಯದಲ್ಲಿ ಲಿಂಗಪೂಜೆ, ವಚನಗಾಯನ, ಅನುಭಾವದೊಂದಿಗೆ ಶರಣ ವೃತ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಪವಿತ್ರ ಶ್ರಾವಣ ಮಾಸದಲ್ಲಿ ಸದ್ವಿಚಾರಗಳನ್ನು ಆಲಿಸುವ ಜೊತೆಗೆ ದೇಹ, ಮನಸ್ಸು ಪ್ರಸನ್ನವಾಗಿಟ್ಟುಕೊಳ್ಳುವ ಮೂಲಕ ಜೀವನವನ್ನು ಪಾವನ ಮಾಡಿಕೊಳ್ಳಬೇಕು. ಶ್ರಾವಣ ಮಾಸದಲ್ಲಿ ಶರಣ ವೃತ ಸ್ವೀಕರಿಸುವ ಮೂಲಕ ಬಸವಾದಿ ಪ್ರಥಮರ ವಚನ ಸಾಹಿತ್ಯದ ಓದು, ವಚನ ಗಾಯನ, ವಚನ ಸಾಹಿತ್ಯದ ಅನುಭಾವ ಮಾಡಿಕೊಂಡರೆ ಬದುಕಿಗೆ ದಾರಿ ದೀಪವಾಗುತ್ತದೆ ಎಂದರು.ಸೆ.1ರಂದು ಬಸವನಬಾಗೇವಾಡಿಯಲ್ಲಿ ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆ ಚಾಲನೆಯಾಗಿ ರಾಜ್ಯಾದ್ಯಂತ ಸಂಚರಿಸಲಿದೆ. ಅಂದು 1100 ತಾಯಂದಿರು ವಚನಗ್ರಂಥಗಳನ್ನು ಮತ್ತು 770 ಶರಣರು ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಬೇಕು. ನಗರದ 22 ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ಜಾಗೃತಗೊಳಿಸಿ ಉದ್ದೇಶ ತಿಳಿಸಿ ಕರೆಯಬೇಕು. ಹಿಂದಿನ ದಿನ ಸುಮಾರು 50 ಕ್ಕೂ ಹೆಚ್ಚು ಜನ ಸ್ವಾಮೀಜಿಗಳು, ಸಾಹಿತಿಗಳು ಬಸವ ಭಕ್ತರು ಬರುವ ಸಾಧ್ಯತೆ ಇದೆ. ಅವರಿಗೆ ಸರ್ವ ವ್ಯವಸ್ಥೆ ಆಗಬೇಕು. ಮುಂದಿನ ಸೋಮವಾರದಿಂದ ಬೆಳಿಗ್ಗೆ 7 ಗಂಟೆಗೆ ಒಂದೊಂದು ವಾರ್ಡಿನಲ್ಲಿ ಪಾದಯಾತ್ರೆ ನಡೆಸಲಾಗುವುದು. ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಭಕ್ತಿ ಸೇವೆ ಸಲ್ಲಿಸಲಿ ಎಂದರು.
ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಡಾ.ಮಹಾಂತೇಶ ಮಡಿಕೇಶ್ವರ, ಸಂಗನಗೌಡ ಚಿಕ್ಕೊಂಡ, ಎಂ.ಜಿ.ಆದಿಗೊಂಡ, ರವಿಗೌಡ ಚಿಕ್ಕೊಂಡ ಎಚ್.ಬಿ.ಬಾರಿಕಾಯಿ, ಶಿವಪುತ್ರಪ್ಪ ಕೆಂಭಾವಿ, ಪ್ರಭಾಕರ ಖೇಡದ, ಶರಣಪ್ಪ ಮಾದರ, ಎಸ್.ಜೆ.ಹೆಗಡ್ಯಾಳ, ಎಸ್.ಬಿ.ಮುತ್ತಗಿ, ಶಿವು ಮಡಿಕೇಶ್ವರ, ಕೊಟ್ರೇಶ ಹೆಗ್ಡಾಳ, ಹಣಮಂತ ಹತ್ತಿ, ಬಸವರಾಜ ಹೆಗಡ್ಯಾಳ, ಸುಭಾಸ ಹಡಪದ, ಬಿ.ಎಸ್.ಧನಶೆಟ್ಟಿ, ಮಹಾದೇವಿ ಬಿರಾದಾರ, ಶಾರದಾ ತೋಟದ, ಬಸಮ್ಮ ಹಂಜಗಿ, ಇತರರು ಇದ್ದರು.