ಕನ್ನಡಪ್ರಭ ವಾರ್ತೆ ಕೋಲಾರಎಲ್ಲಾ ಕಡೆ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವ ಮಾಡಿ ಮರೆತುಬಿಡುತ್ತಾರೆ. ಆದರೆ ಬಂಗಾರಪೇಟೆ ಕನ್ನಡ ಸಂಘ ಪ್ರತಿ ತಿಂಗಳು ಕನ್ನಡ ಕಾರ್ಯಕ್ರಮವನ್ನು ತಪ್ಪದೇ ನಡೆಸುವ ಮೂಲಕ ಕನ್ನಡ ನಾಡು,ನುಡಿಯ ರಕ್ಷಣೆಗೆ ಪಣತೊಟ್ಟು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದು, ಇಲ್ಲಿ ಆಯ್ಕೆ ಮಾಡಿರುವ ಸಾಧಕರು ಸಮಾಜದ ಆಸ್ತಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೇಶವಮೂರ್ತಿ ಶ್ಲಾಘಿಸಿದರು.ಜಿಲ್ಲೆಯ ಬಂಗಾರಪೇಟೆ ಕನ್ನಡ ಸಂಘದಿಂದ ಪಟ್ಟಣದ ಕುವೆಂಪು ವೃತ್ತದಲ್ಲಿ ಶನಿವಾರ ರಾತ್ರಿ ನಡೆಸಿದ ೧೨೧ನೇ ತಿಂಗಳ ಕನ್ನಡ ಸಾಂಸ್ಕೃತಿಕ ಸಮಾರಂಭದಲ್ಲಿ, ಕನ್ನಡ ಎಂಎ ಪದವಿಯಲ್ಲಿ ೯ ಚಿನ್ನದ ಪದಕ ಗಳಿಸಿದ ಸಾಧಕಿ ತೇಜಸ್ವಿನಿ, ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕ ಗಳಿಸಿದ ಜಿಲ್ಲೆಯ ೧೦ ಸಾಧಕರು ಹಾಗೂ ಬಂಗಾರಪೇಟೆ ತಾಲ್ಲೂಕಿನಲ್ಲಿ ಹೆಚ್ಚು ಅಂಕ ಗಳಿಸಿದ ಐವರು ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.ಸಾಧಕರಿಗೆ ಸನ್ಮಾನ:
ಕನ್ನಡ ಎಂಎದಲ್ಲಿ ೧೦ ಚಿನ್ನದ ಪದಕ ವಿಜೇತೆ,ರಾಜ್ಯಪಾಲರಿಂದ ಅಭಿನಂದನೆಗೆ ಪಾತ್ರರಾದ ಸಾಧಕಿ ತೇಜಸ್ವಿನಿ ಮಾತನಾಡಿ, ಓದುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು, ಖಂಡಿತಾ ಬಡತನ ಅಡ್ಡಿಯಾಗದು. ತಾನು ತಂದೆ,ತಾಯಿ ಇಬ್ಬರನ್ನೂ ಕಳೆದುಕೊಂಡು ಮಾಡಿದ ಸಾಧನೆಗೆ ತನ್ನ ಸಹೋದರ ಮಾದೇಶ ಗಾರೆಕೆಲಸ ಮಾಡಿ ಓದಿಸಿದ್ದೇ ಕಾರಣ ಎಂದು ಹೇಳಿದಾಗ ಸಭಿಕರು ಭಾವುಕರಾದರು. ಅಣ್ಣ-ತಂಗಿ ಸಾಧನೆಗೆ ಶ್ಲಾಘನೆ
ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಮಾತನಾಡಿ, ತೇಜಸ್ವಿನಿ ಅವರ ಸಹೋದರ ಮಾದೇಶ್ ಗಾರೆ ಕೆಲಸ ಮಾಡಿಕೊಂಡು ಅಕ್ಕನ ಓದಿಗೆ ನೆರವಾಗಿದ್ದು ಮಾತ್ರವಲ್ಲ ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೫೮೬ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಈ ಮಕ್ಕಳು ನಿಜಕ್ಕೂ ಇತರೆ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಭಾರಕ್ ಹೋಟೆಲ್ ಮಾಲೀಕ ಅಪ್ಸರ್ ಪಾಷಾ, ಬಂಗಾರಪೇಟೆ ಕನ್ನಡ ಸಂಘದ ಕಾರ್ಯದರ್ಶಿ ಹೇಮಂತ್ ಕುಮಾರ್, ಉಪಾಧ್ಯಕ್ಷ ಬಿ.ಜಿ.ನಂಜಪ್ಪ, ಪದಾಧಿಕಾರಿಗಳು ಇದ್ದರು.