ದೊಡ್ಡಬಳ್ಳಾಪುರ: ಕೃಷಿಕರು ದೇಶದ ಬೆನ್ನೆಲುಬು. ಇಂದು ದೇಶ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಕೃಷಿ ಇಲಾಖೆಯ ಹಲವು ಯೋಜನೆಗಳು ರೈತ ಸ್ನೇಹಿಯಾಗಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದರು.
ಮಧುರೆ ಹೋಬಳಿಯ ಮದಗೊಂಡನಹಳ್ಳಿ ಗ್ರಾಮದಲ್ಲಿ ತಾಲೂಕು ಕೃಷಿ ಇಲಾಖೆ ಆತ್ಮಯೋಜನೆ ಮತ್ತು ತಾಲೂಕು ಕೃಷಿಕ ಸಮಾಜದ ಸಹಯೋಗದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಮತ್ತು ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ರಾಶಿ ಪೂಜೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಮಾತನಾಡಿ, ಪ್ರತಿವರ್ಷ ಡಿ.23ರಂದು ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಜನ್ಮದಿನದಂದು ರೈತರ ದಿನವಾಗಿ ಆಚರಿಸುವ ಮೂಲಕ ಅವರು ಕೃಷಿ ಕ್ಷೇತ್ರಕ್ಕೆ ನೀಡಿರುವ ಅಪಾರ ಸೇವೆಯನ್ನು ಸ್ಮರಿಸಲಾಗುತ್ತದೆ. 2001 ರಿಂದ ಈ ಆಚರಣೆ ಜಾರಿಯಲ್ಲಿದೆ. ರೈತ ನಮ್ಮ ದೇಶದ ಬೆನ್ನಲುಬಾಗಿದ್ದು ಪ್ರತಿದಿನ ರೈತರನ್ನು ಸ್ಮರಿಸಬೇಕು ಎಂದು ತಿಳಿಸಿದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್, ಭಾರತೀಯ ಬೀಜ ಸಂಸ್ಥೆ, ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಡಾ. ಶಾಂತಕುಮಾರ್ ಮಾತನಾಡಿ, ರೈತರು ಬೀಜೋತ್ಪಾದನೆಯ ಮುಖಾಂತರ ಕೃಷಿಯಲ್ಲಿ ಹೆಚ್ಚು ಲಾಭ ಗಳಿಸುವುದರ ಜೊತೆಗೆ ತಮಗೆ ಬೇಕಾಗುವ ಬಿತ್ತನೆ ಬೀಜಗಳನ್ನು ತಮ್ಮ ಜಮೀನಿನಲ್ಲೇ ಬೆಳೆದುಕೊಳ್ಳಬಹುದು, ಆಸಕ್ತಿಯುಳ್ಳ ರೈತರು ನಮ್ಮ ಪ್ರಾದೇಶಿಕ ಸಂಸ್ಥೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.ಇದೇ ವೇಳೆ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ, ಮರೆತುಹೋದ ಖಾದ್ಯ ಸ್ಪರ್ಧೆಯಲ್ಲಿ ವಿಜೇತರಾದ ರೈತ ಮಹಿಳೆಯರಿಗೆ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು.
ತುಂತುರು ನೀರಾವರಿ ಘಟಕ, ಹನಿ ನೀರಾವರಿ ಘಟಕ, ಕೃಷಿ ಯಾಂತ್ರೀಕರಣ ಯೋಜನೆಯಡಿ ಪವರ್ ವೀಡರ್ ಮತ್ತು ರೋಟೋವೇಟರ್ ಗಳನ್ನು ಫಲಾನುಭವಿ ರೈತರಿಗೆ ವಿತರಿಸಲಾಯಿತು. ರೈತ ಸಂಘದ ಮುಖಂಡ ಹನುಮೇಗೌಡ, ಕಾಡನೂರು ಗ್ರಾಪಂ ಅಧ್ಯಕ್ಷ ಮನು, ಪಂಚಾಯಿತಿ ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಕೃಷಿ ಸಂಬಂಧಿತ ಇಲಾಖೆಯ ಅಧಿಕಾರಿಗಳು, ಪ್ರಗತಿ ಪರ ರೈತರು ಭಾಗವಹಿಸಿದ್ದರು.28ಕೆಡಿಬಿಪಿ6-
ದೊಡ್ಡಬಳ್ಳಾಪುರ ತಾಲೂಕಿನ ಮದಗೊಂಡನಹಳ್ಳಿ ಗ್ರಾಮದಲ್ಲಿ ಕಿಸಾನ್ ಗೋಷ್ಠಿಯನ್ನು ಶಾಸಕ ಧೀರಜ್ ಮುನಿರಾಜ್ ಉದ್ಘಾಟಿಸಿದರು.