ಕನ್ಡಪ್ರಭ ವಾರ್ತೆ ಶನಿವಾರಸಂತೆ
ರೋಟರಿ ಸಂಸ್ಥೆಯ ಸದಸ್ಯರು ಹೃದಯವಂತರಾಗಿದ್ದು, ಈ ಮೂಲಕ ನಿಸ್ವಾರ್ಥವಾಗಿ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ರೋಟರಿ ಸಂಸ್ಥೆಯ ಮೇಜರ್ ಡೋನರ್ ಮತ್ತು ರೋಟರಿ ಪದಗ್ರಹಣ ಅಧಿಕಾರಿ ಪ್ರಕಾಶ್ ಕಾರಂತ್ ಹೇಳಿದರು.ಅವರು ಸಮಿಪದ ಆಲೂರುಸಿದ್ದಾಪುರದ ವೈಭವ್ ಕನ್ವೇಶನ್ ಸಭಾಂಗಣದಲ್ಲಿ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆಯ 2025-26ನೇ ಸಾಲಿನ ನೂತನ ಪದಾಧಿಕಾರಿ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ರೋಟರಿ ಸಂಸ್ಥೆಗೆ ಸಮಾಜದಲ್ಲಿ ಜಾತಿ, ಜನಾಂಗ, ಮೇಲು, ಕೀಳುಗಳೆಂಬ ಭೇದ ಭಾವಗಳಿಲ್ಲದೆ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಧ್ಯೇಯೋದ್ದೇಶದಿಂದ ಕಾರ್ಯನಿರ್ವಹಿಸುತ್ತದೆ. ರೋಟರಿ ಸಂಸ್ಥೆಯು ಸಮಾಜದಲ್ಲಿ ಬದಲಾವಣೆ ತರುವ ಕಾರ್ಯವನ್ನು ಮಾಡುತ್ತಿದೆ ಎಂದರು.ರೋಟರಿ ಕ್ಲಬ್ ಜಿಲ್ಲಾ ರಾಜ್ಯಪಾಲ ಉಲ್ಲಾಸ್ ಕೃಷ್ಣ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವ ವಿಶ್ವದ ಏಕೈಕ ಸಮಾಜ ಸೇವಾ ಸಂಸ್ಥೆಯಾಗಿದೆ. ರೋಟರಿ ಸಂಸ್ಥೆಯಡಿಯಲ್ಲಿ ಹಲವು ಯೋಜನೆಗಳಿದ್ದು, ಈ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಸಂಧ್ಯಾ ಸುರಕ್ಷೆ ಯೋಜನೆ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ವಿವಿಧ ಯೋಜನೆಗಳು ರೋಟರಿ ಸಂಸ್ಥೆ ಅಡಿಯಲ್ಲಿ ನಡೆಯುವ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಕಾರ್ಯದಲ್ಲಿ ನರೆವಾಗುತ್ತಿದೆ ಎಂದರು.ರೋಟರಿ ಸಂಸ್ಥೆಯ ವಲಯ ಸೇನಾನಿ ಎ.ಎಸ್.ರಾಮಣ್ಣ ಮಾತನಾಡಿದರು.ರೋಟರಿ ಸಂಸ್ಥೆಯ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಎಚ್.ನಾರಾಯಣ ಸ್ವಾಮಿ, ನಮ್ಮ ರೋಟರಿ ಸಂಸ್ಥೆ ಈಗಾಗಲೇ ಉದ್ದೇಶಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ನಮ್ಮ ರೋಟರಿ ವ್ಯಾಪ್ತಿಯಲ್ಲಿ ಸಮಾಜ ಸೇವೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯ ಸದಸ್ಯರು ಸಹಕಾರ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು. ಸಮಾರಂಭದಲ್ಲಿ ರೋಟರಿ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಟಿ.ವಿ.ದಯಾನಂದ್ ಅಧ್ಯಕ್ಷತೆ ವಹಿಸಿದ್ದರು. ನೂತನ ಕಾರ್ಯದರ್ಶಿ ಎಚ್.ಕೆ.ಕಿರಣ್ ಮಾತನಾಡಿದರು.
ಈ ಸಂದರ್ಭ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಮಲ್ಲೇಶ್ವರ ಸಂಸ್ಥೆಯ ಸದಸ್ಯರು, ಜಿಲ್ಲೆ ಹೊರ ಜಿಲ್ಲೆಗಳ ರೋಟರಿ ಪ್ರಮುಖರು, ಮಹಿಳಾ ರೋಟರಿ ಸದಸ್ಯರು ಮತ್ತು ರೋಟರಿ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.