ದೀಪಕ್ ಆಲೂರು ಬಣ್ಣನೆ । ಕನ್ನಡ ರಾಜ್ಯೋತ್ಸವದ 29ನೇ ದನದ ಕಾರ್ಯಕ್ರಮ
ಆಲೂರು ವೆಂಕಟರಾಯರು ತಮ್ಮ ಜೀವನದಲ್ಲಿ ಮೊದಲಿನಿಂದ ಹೋರಾಟ ಭಾವನೆಯಿಟ್ಟುಕೊಂಡು ಕನ್ನಡಕ್ಕೆ ಮಿಡಿದ ಜೀವ ಎಂದು ದೀಪಕ್ ಆಲೂರು ಬಣ್ಣಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 29ನೇ ದಿನದ ಕಾರ್ಯಕ್ರಮದಲ್ಲಿ ಕರ್ನಾಟಕದ ಕುಲಪುರೋಹಿತ ಆಲೂರು ವೆಂಕಟರಾಯರ ಕುರಿತು ಮಾತನಾಡಿದರುಆಲೂರು ವೆಂಕಟರಾಯರು ಎಂದೂ ಕೂಡ ನಾನೊಬ್ಬ ಉತ್ತಮ ಪಂಡಿತ, ರಾಜಕಾರಣಿ, ಸಾಹಿತಿ, ವಿದ್ವಾಂಸ ಎಂದು ಎಂದಿಗೂ ಹೇಳಲಿಲ್ಲ. ಅವರ ಏಕೈಕ ಗುರಿ, ಕರ್ನಾಟಕ ಒಂದಾಗಬೇಕು. ಕನ್ನಡಿಗರು ಸಂಘಟಿತರಾಗಬೇಕು. ಕನ್ನಡ ಮಾತನಾಡುವವರು ಸಾಮರಸ್ಯ ಮೂಡಿಸಿ ಕನ್ನಡವನ್ನು ಒಗ್ಗೂಡಿಸಬೇಕು ಎಂದು ನಿರಂತರವಾಗಿ ಹೋರಾಟ ಮಾಡಿದರು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಕನ್ನಡ ದಿವ್ಯ ಕ್ಷೇತ್ರ ಧಾರವಾಡ, ಜಾಗೃತ ನೆಲ ಜಾನಪದ ಚಾಮರಾಜನಗರ, ಆಲೂರು ವೆಂಕಟರಾಯರ ಜೀವನ, ಸಾಧನೆಗಳನ್ನು ಕನ್ನಡಿಗರು ಎಂದಿಗೂ ಮರೆಯಲಾರರು. ಅವರು ಇತಿಹಾಸದಲ್ಲಿ ಅಮರರು. ಅವರು ಏಕಕಾಲದಲ್ಲಿ 6 ಪತ್ರಿಕೆಗಳ ಸಂಪಾದಕರೂ ಆಗಿದ್ದರು. ಅವರು ಬರೆದಿರುವ ಕರ್ನಾಟಕ ಗತವೈಭವ ನಾಡಿನ ಪ್ರತಿಯೊಬ್ಬರ ಮನೆಯಲ್ಲಿ ಭಗವದ್ಗೀತೆಯಾಗಿ ಇದ್ದರೆ ಕನ್ನಡ ಮನಸು ಹೃದಯ ವಿಶಾಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಬಿ.ಕೆ.ದಾನೇಶ್ವರಿ, ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿದರು. ಬಿ.ಕೆ.ರವಿಕುಮಾರ್, ಪದ್ಮಪುರುಷೋತ್ತಮ್, ಬರಹಗಾರ ಲಕ್ಷ್ಮೀನರಸಿಂಹ, ಯೋಗಾನಂದ, ಚಾ.ವೆಂ.ರಾಜ್ ಗೋಪಾಲ್, ಡಾ.ಪರಮೇಶ್ವರಪ್ಪ, ನಂಜುಂಡಶೆಟ್ಟಿ, ಮಹೇಶ್ ಗೌಡ, ರವಿಚಂದ್ರ ಪ್ರಸಾದ್ ಕಹಳೆ, ಲಿಂಗರಾಜು, ರಾಚಪ್ಪ ಇತರರು ಹಾಜರಿದ್ದರು.