ಕಲಬುರಗಿ ಪಾಲಿಕೆ ಅಧಿಕಾರಿಗಳಿಂದ ಅಂಬೇಡ್ಕರ್‌ಗೆ ಅಪಮಾನ

KannadaprabhaNewsNetwork |  
Published : Feb 22, 2024, 01:45 AM IST
ಕಲಬುರಗಿ: ಮೊಬೈಲ್ ಸಂಭಾಷಣೆಯೊಂದರಲ್ಲಿ ಮಹಾನಗರ ಪಾಲಿಕೆಯ ಇಬ್ಬರು ಅಧಿಕಾರಿಗಳು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ  ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ಮಾಡಿದರು. | Kannada Prabha

ಸಾರಾಂಶ

ಬೇಜವಾಬ್ದಾರಿ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿ ಕಾನೂನಿನ ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರವು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಮೊಬೈಲ್ ಸಂಭಾಷಣೆಯೊಂದರಲ್ಲಿ ಮಹಾನಗರ ಪಾಲಿಕೆಯ ಇಬ್ಬರು ಅಧಿಕಾರಿಗಳು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತನ್ನಾಡಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಕಳೆದ 19ರಂದು ಮಹಾನಗರ ಪಾಲಿಕೆಯ ಇಬ್ಬರು ಅಧಿಕಾರಿಗಳಾದ ಅಂಬಾದಾಸ್ ಖತಲ್ ಮತ್ತು ಸಾವಿತ್ರಿಬಾಯಿ ಗಂಡ ಶರಣು ಸಲಗರ್ ಅವರ ಸಂಭಾಷಣೆಯಲ್ಲಿ ಅಂವ ಅಂಬೇಡ್ಕರ್ ಅಷ್ಟು ವಿಚಾರ ಮಾಡ್ಯಾನೋ ಇಲ್ಲೊ, ಇಲ್ಲಾ ಅಂವಾ ಸಂವಿಧಾನ ಬರಿಲಾಕಲ್ನು ಅಷ್ಟು ವಿಚಾರ ಮಾಡ್ಯಾನೋ ಇಲ್ಲೋ ಅಂವಾ, ನಾವು ಅಷ್ಟು ವಿಚಾರ ಮಾಡತಿವಿ ಪಿಕೆ (ಪೌರ ಕಾರ್ಮಿಕರು)ದು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿದರು.

ಇಡೀ ಜಗತ್ತೇ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ವಿಶ್ವರತ್ನ ಎಂದು ಕೊಂಡಾಡಿ ಗೌರವ ಕೊಡುವಾಗ ಇಂತಹ ಹಗುರವಾದ ಮಾತುಗಳು ಪ್ರಜ್ಞಾವಂತ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಕಳೆದ ಜ.22ರಂದು ಕೋಟನೂರ್(ಡಿ) ಬಡಾವಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಘಟನೆ ಇನ್ನೂ ಜೀವಂತ ಇರುವಾಗಲೇ ಇಂತಹ ಘಟನೆ ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟು ಮಾಡಿದೆ. ಕೂಡಲೇ ಬೇಜವಾಬ್ದಾರಿ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿ ಕಾನೂನಿನ ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರವು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಶರಣು ಅತನೂರ್, ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಭೋವಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಣಮಂತ್ ಯಳಸಂಗಿ, ಅರುಣಕುಮಾರ್ ಸುತಾರ್, ಪ್ರದೀಪ್ ಬೋರಾಳಕರ್, ಅನಿಲಕುಮಾರ್ ಚಕ್ರ, ಅರುಣಕುಮಾರ್ ಕೋಟೆ, ಲೋಕೇಶ್ ಹಾದಿಮನಿ, ಕಮಲ್ ಕುಸನೂರ್, ದೇವೆಂದ್ರ ಯಳಸಂಗಿ, ಅಜಯಸಿಂಗ್, ರವಿಕುಮಾರ್ ಸಿಂಧೆ, ಅಶೋಕ್ ಡಾಂಗೆ, ಪ್ರೇಮ್ ಸೀಲ್ಡ್, ಡೆಕ್ಕನ್, ಶ್ರಾವಣ್ ದರ್ಗಿ, ತಿಮ್ಮಣ್ಣ, ಶರಣಗೌಡ ಚಿದಂಬರಂ, ಪ್ರಸನ್ನ, ರವಿಕುಮಾರ್, ವಿಶ್ವರಾಧ್ಯ, ಆನಂದ್, ಶಿವಯೋಗೆಪ್ಪ ಕಿವಡೆ, ಅನಿಲಕುಮಾರ್ ಚಾಂಬಳ್, ಮುಕ್ರಮ್ ಜಾನ್, ಮಹೇಶ್, ರವಿ ಚಲವಾದಿ ಮುಂತಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ