ಕನ್ನಡಪ್ರಭ ವಾರ್ತೆ ಧಾರವಾಡ
ಕನ್ನಡದ ಸಮನ್ವಯ ಕವಿ ಎಂದು ಖ್ಯಾತಿ ಪಡೆದ ನಾಡೋಜ ಡಾ. ಚೆನ್ನವೀರ ಕಣವಿ ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳೊಲ್ಲಬ್ಬರು. ಅವರು ಕಾವ್ಯವೇ ಜೀವನ ಎಂದು ಬದುಕಿದ ಅಗ್ರಗಣ್ಯರು ಎಂದು ವಿಮರ್ಶಕ ಎಸ್.ಆರ್. ವಿಜಯಶಂಕರ್ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘ ನಾಡೋಜ ಡಾ. ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಆಯೋಜಿಸಿದ್ದ ಕನ್ನಡದ ಯುವ ಲೇಖಕರಿಗೆ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ವಿಶೇಷ ಉಪನ್ಯಾಸದಲ್ಲಿ ‘ಚೆನ್ನವೀರ ಕಣವಿಯವರ ಕಾವ್ಯಚಿತ್ರಗಳಲ್ಲಿ ತಾತ್ವಿಕ ನೆಲೆಗಳು’ ವಿಷಯ ಕುರಿತು ಮಾತನಾಡಿದರು.
ಡಾ. ಚೆನ್ನವೀರ ಕಣವಿ ಅವರ ಕಾವ್ಯದ ಶಕ್ತಿ ಭಾವನಾ ಪ್ರಧಾನ. ಅವರ ಕಾವ್ಯಗಳಲ್ಲಿ ವ್ಯಕ್ತಿತ್ವ ನಿರ್ಮಾಣ ನಿಸರ್ಗದ ರಮ್ಯತೆಯೇ ಪ್ರಧಾನ ಹಂಬಲಗಳಾಗಿವೆ. ಮಾನವೀಯತೆ, ಆದರ್ಶ ಹಾಗೂ ಸೌಜನ್ಯದ ತಾತ್ವಿಕ ಸಿದ್ಧಾಂತಗಳಿವೆ. ಪ್ರಕೃತಿಯ ವರ್ಣನೆ ಜೊತೆ ನವ್ಯ ವಿಷಯಗಳು ಅವರ ಕಾವ್ಯದಲ್ಲಿವೆ. ಬೆಳಕು ಅವರ ಕಾವ್ಯದ ಮೂಲವಾಗಿದೆ. ಅವರ ಕವನ ಸಂಕಲನ ‘ಕಾವ್ಯಾಕ್ಷಿ’ ಹಾಗೂ ‘ಭಾವಜೀವಿ’ಗಳು ತಾತ್ವಿಕ ನೆಲೆಗಟ್ಟಿನ ಮೇಲೆ ರಚನೆಯಾಗಿವೆ ಎಂದು ಹೇಳಿದರು.ಚಿಂತಕ ಡಾ. ಲೋಹಿತ ನಾಯ್ಕರ ಬಹುಮಾನ ಪ್ರದಾನ ಮಾಡಿ ಮಾತನಾಡಿ, ಕನ್ನಡದ ಯುವ ಲೇಖಕರಿಂದ ಆಹ್ವಾನಿತ ಎಲ್ಲ ಕಥೆಗಳನ್ನು ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸಿ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವುದು ಅಗತ್ಯವಿದೆ ಎಂದರು.
ಕಥಾ ವಿಭಾಗದ ನಿರ್ಣಾಯಕರಾದ ಶ್ರೀಧರ ಗಸ್ತಿ ಮಾತನಾಡಿ, ಕಥೆಗಳಲ್ಲಿ ಹುಟ್ಟುವಿಕೆ ಹಾಗೂ ಕಟ್ಟುವಿಕೆ ಮುಖ್ಯ. ಇಲ್ಲಿ ಕಥೆಗಾರ ಕೆಲವೊಮ್ಮೆ ಪಾತ್ರಧಾರಿಯಾಗಿ ಭಾವನೆ ಅಭಿವ್ಯಕ್ತಗೊಳಿಸಬೇಕಾಗುತ್ತದೆ. 32 ಕಥೆಗಳಲ್ಲಿ ಸಂಸ ಕಥೆ ಮನೋಜ್ಞವಾಗಿದ್ದು ಎಲ್ಲರೂ ಓದಲೇಬೇಕಾದುದಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿದರು. ದತ್ತಿದಾನಿ ಶಿವಾನಂದ ಕಣವಿ ಇದ್ದರು.ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ಚಾಮರಾಜ ನಗರದ ಆರ್. ದಿಲೀಪ್ ಕುಮಾರ ಅವರ ‘ಅಮೃತವರ್ಷಿಣಿ’ ಕಾವ್ಯ ಪ್ರಥಮ ಬಹುಮಾನ, ಯಾದಗಿರಿಯ ಮಹೇಶ್ವರಿ ಅಲ್ಕೂರ ಅವರ ‘ಮೌನ ಅಳು’ ಕಾವ್ಯ ದ್ವಿತೀಯ ಹಾಗೂ ಧಾರವಾಡದ ಕವಿತಾ ವೀರನಗೌಡ ಪಾಟೀಲ ಅವರ ‘ಉರ್ಮಿಳೆ’ ಕಾವ್ಯ ತೃತೀಯ ಬಹುಮಾನ ಪಡೆದವು. ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ರೋಣದ ಡಾ. ಅಂದಯ್ಯ ಅರವಟಗಿಮಠ ಅವರ ‘ದೈವ ದೈವಗಳಾಚೆ’ ಕಥೆ ಪ್ರಥಮ, ಅನಂತ ಕುಣಿಗಲ್ ಅವರ ‘ಸಂಸ’ಕಥೆ ದ್ವಿತೀಯ ಹಾಗೂ ಸಂಜೀವ ಜಗ್ಲಿ, ಮಾನವಿ‘ಸಾಲಿ’ಕಥೆ ತೃತೀಯ ಬಹುಮಾನ ಪಡೆದವು. ಕಾವ್ಯ ಮತ್ತು ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಯುವ ಲೇಖಕರನ್ನು ಗೌರವಿಸಿ ಸನ್ಮಾನಿಸಲಾಯಿತು.