ಮುಡಾ ಹಗರಣ ಮನ್ನಲೆಗೆ ಬಂದ ಬಳಿಕ ಮೂಲೆ ಸೇರಿದ ವಾಲ್ಮೀಕಿ ನಿಗಮದ ಹಗರಣದ ತನಿಖೆ : ಪ್ರಸನ್ನಾನಂದ ಪುರಿ ಸ್ವಾಮೀಜಿ

KannadaprabhaNewsNetwork | Updated : Dec 07 2024, 11:37 AM IST

ಮೊಳಕಾಲ್ಮುರು: ಮುಡಾ ಹಗರಣ ಮನ್ನಲೆಗೆ ಬಂದ ಬಳಿಕ ವಾಲ್ಮೀಕಿ ನಿಗಮದ ಹಗರಣದ ತನಿಖೆ ಮೂಲೇ ಸೇರಿದೆ. ಇದರಿಂದ ಸಮುದಾಯಕ್ಕೆ ಸೇರಬೇಕಾದ ಅನುದಾನಗಳು ನಿರೀಕ್ಷಿತ ಮಟ್ಟದಲ್ಲಿ ತಲುಪಲು ಸಾಧ್ಯವಾಗಿಲ್ಲ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಮೊಳಕಾಲ್ಮುರು: ಮುಡಾ ಹಗರಣ ಮನ್ನಲೆಗೆ ಬಂದ ಬಳಿಕ ವಾಲ್ಮೀಕಿ ನಿಗಮದ ಹಗರಣದ ತನಿಖೆ ಮೂಲೇ ಸೇರಿದೆ. ಇದರಿಂದ ಸಮುದಾಯಕ್ಕೆ ಸೇರಬೇಕಾದ ಅನುದಾನಗಳು ನಿರೀಕ್ಷಿತ ಮಟ್ಟದಲ್ಲಿ ತಲುಪಲು ಸಾಧ್ಯವಾಗಿಲ್ಲ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಶುಕ್ರವಾರ ನಡೆದ ವಾಲ್ಮೀಕಿ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ನಾಲ್ಕನೇ ಅತಿ ದೊಡ್ಡ ವಾಲ್ಮೀಕಿ ಸಮುದಾಯವನ್ನು ಆಳಿದ ಸರ್ಕಾರಗಳು ಕೇವಲ ಮತ ಬ್ಯಾಂಕನ್ನಾಗಿಸಿಕೊಂಡು ವಂಚನೆ ಮಾಡುತ್ತಿವೆ. ಸಮುದಾಯ ಸಂಘಟಿತರಾಗಬೇಕು. ಸಂವಿಧಾನಿಕ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗಿದೆ ಎಂದರು.

ರಾಜ್ಯದಲ್ಲಿ ಮುಡಾ ಹಗರಣ ಮನ್ನಲೆಗೆ ಬಂದ ನಂತರ ವಾಲ್ಮೀಕಿ ಹಗರಣ ಮೂಲೆ ಸೇರಿತ್ತು. ಇದರಿಂದಾಗಿ ಸಮುದಾಯದ ಸಚಿವರು ಮತ್ತು ಶಾಸಕರೊಂದಿಗೆ ಮುಖ್ಯಮಂತ್ರಿಗಳಿಗೆ ನಿಯೋಗ ತೆರಳಿ 2024-25 ನೇ ಸಾಲಿನ ಕ್ರಿಯಾ ಯೋಜನೆಗಳನ್ನು ಬದಲಾವಣೆ ಮಾಡದಂತೆ ಒತ್ತಾಯಿಸಿದ್ದ ಪರಿಣಾಮವಾಗಿ ಯಾವುದೇ ಅನುದಾನಗಳನ್ನು ಕಡಿತ ಮಾಡುವುದಿಲ್ಲ ಎನ್ನುವ ಭರವಸೆ ಮುಖ್ಯಮಂತ್ರಿಗಳು ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ತಳವಾರ ಹೆಸರಲ್ಲಿ ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಅದನ್ನು ತಡೆಯಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಸಮುದಾಯ ಒಗ್ಗಟ್ಟಾಗಿ ಜಾಗೃತವಾಗಬೇಕು. ಮುಂಬರುವ ಫೆಬ್ರವರಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಸಮುದಾಯದ ಶಕ್ತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತೋರಿಸಬೇಕು ಎಂದು ಕರೆ ನೀಡಿದರು.

ಈ ವೇಳೆ ಸಮುದಾಯದ ಹಿರಿಯ ಮುಖಂಡ ಕೆ.ಜಗಳೂರಯ್ಯ, ವಿ.ಮಾರನಾಯಕ, ವಕೀಲ ರಾಜಶೇಖರ ನಾಯಕ, ಎಸ್.ಟೀ.ಪಾಲಯ್ಯ, ರಾಮಕೃಷ್ಣ, ಬಿ.ಜಿ.ಕೆರೆಅಜ್ಜಪ್ಪ, ಎಂ.ಪಿ.ನಾಗರಾಜ, ಆನಂದ್, ನಿವೃತ್ತ ಅರಣ್ಯಾಧಿಕಾರಿ ರಾಮುಲು, ವೆಂಕಟೇಶ್, ನೇರ್ಲ ಹಳ್ಳಿ ಓಬಯ್ಯ, ಜಯಣ್ಣ, ವೈ.ಡಿ.ಕುಮಾರ ಸ್ವಾಮಿ ಇದ್ದರು.