ಮುಂಡರಗಿ: ಅನುಭಾವ ಎನ್ನುವುದು ಸಾಮಾನ್ಯವಾಗಿರುವಂಥದ್ದಲ್ಲ. ಪರಶಿವನ ಇರುವಿಕೆಯನ್ನು ನಮ್ಮ ಅನುಭವಕ್ಕೆ ತಂದು ಕೊಡುವುದೇ ಅನುಭಾವ ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಪೀಠಾಧಿಪತಿ ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.
ಕೊಪ್ಪಳದ ಗವಿಸಿದ್ದಪ್ಪ ಕೊಪ್ಪಳ ಮಾತನಾಡಿ, ಲಿಂಗಾಯತರಿಗೆ ಎಲ್ಲ ಕಾಲಕ್ಕೂ ಬಸವಣ್ಣನೇ ಧರ್ಮ ಗುರು. ಬಸವಣ್ಣನೇ ನಮ್ಮ ಸಾಂಸ್ಕೃತಿ ನಾಯಕ. ಲಿಂಗಾಯತ ಸ್ವತಂತ್ರ ಧರ್ಮ, ಲಿಂಗಾಯತರ ಲಾಂಛನ ಇಷ್ಟಲಿಂಗ. ನಮ್ಮ ಧರ್ಮಗ್ರಂಥ ವಚನ ಸಾಹಿತ್ಯ ಎನ್ನುವುದನ್ನು ಲಿಂಗಾಯತರಾದ ನಾವು ಎಂದೆಂದಿಗೂ ಮರೆಯಬಾರದು. ನಮಗೆಲ್ಲ ಬಸವತತ್ವದ ಮಾರ್ಗ ತೋರಿಸಿದವರು ಗದುಗಿನ ಲಿಂ. ತೋಂಟದ ಸಿದ್ದಲಿಂಗ ಸ್ವಾಮೀಜಿಯವರು. ಆನಂತರದಲ್ಲಿ ಇಂದಿನ ಮುಂಡರಗಿ ತೋಂಟದಾರ್ಯ ಮಠದ ಶ್ರೀಗಳಾದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ. ಇವರೀರ್ವರೂ ನಮ್ಮ ಕಣ್ಣು ತೆರೆಸುವ ಮೂಲಕ ಬದುಕನ್ನೇ ಬದಲಾಯಿಸಿದರು ಎಂದರು.
ನೇತೃತ್ವ ವಹಿಸಿದ್ದ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದುದ ಒಂದು ಸಮಯ ಮತ್ತೊಂದು ಆರೋಗ್ಯ. ಸಮಯವನ್ನು ಸರಿಯಾಗಿ ಸಬ್ಧಳಕೆ ಮಾಡಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮನುಷ್ಯ ತನ್ನ ಜೀವನದ ಅಂತ್ಯದ ವರೆಗೆ ಹಣದಿಂದ ಸುಖಿಯಾಗಿದ್ದಾನೆ ಎಂದು ಹೇಳಿದರೆ ಅದು ಬೌದ್ಧಿಕವಾದ. ಮನುಷ್ಯ ಸಾಯುವಾಗ ಬಹಳ ಸಂತೋಷದಿಂದ ಇರಬೇಕು. ಸಂತೋಷದಿಂದ ಯಾವ ಮನುಷ್ಯ ಸಾವನ್ನಪ್ಪುತ್ತಾನೆಯೋ ಅವನು ಜೀವನದಲ್ಲಿ ನೆಮ್ಮದಿ ಪಡೆದಿರುತ್ತಾನೆ ಎಂದರು.ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ತನು, ಮನ, ಧನದಿಂದ ಸಹಾಯ-ಸಹಕಾರ ಮಾಡಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.