ಹುಬ್ಬಳ್ಳಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗವು ಸೋಮವಾರ ಸಚಿವ ವಿ. ಸೋಮಣ್ಣ ಅವರಿಗೆ ನಗರದಲ್ಲಿ ಮನವಿ ಸಲ್ಲಿಸಿದರು.
ಹುಬ್ಬಳ್ಳಿ-ಜೋಧಪುರ ವಿಶೇಷ ರೈಲು ಸಂಚಾರ ಪ್ರಾರಂಭಿಸಿದ್ದರಿಂದ ಕರ್ನಾಟಕ ಹಾಗೂ ರಾಜ್ಯಸ್ತಾನ ರಾಜ್ಯಗಳ ಮಧ್ಯೆ ಪ್ರವಾಸೋದ್ಯಮ, ವ್ಯಾಪಾರ ಹೆಚ್ಚಳದ ಜತೆಗೆ ಕುಟುಂಬ ಸಂಬಂಧಗಳು ಸಹ ಬಲಗೊಂಡಿವೆ. ಈ ರೈಲು ವಾರಕ್ಕೆ ಎರಡು ಬಾರಿ ಸಂಚರಿಸುವಂತೆ ಮನವಿ ಮಾಡಿದರು.ಹುಬ್ಬಳ್ಳಿ-ದಾದರ ಎಕ್ಸ್ ಪ್ರೆಸ್ ರೈಲಿನ ನವೀಕರಣ ಮತ್ತು ಎಲ್ಎಚ್ಬಿ ಬೋಗಿಗಳಾಗಿ ಪರಿವರ್ತನೆ ಮಾಡಲು ಮನವಿ ಮಾಡಿದ ನಿಯೋಗವು, ಈ ರೈಲು ಉತ್ತರ ಕರ್ನಾಟಕ-ಮುಂಬೈ ಸಂಪರ್ಕದ ಜೀವನಾಡಿಯಾಗಿದೆ. ಐಸಿಎಫ್ ಹಳೇ ಬೋಗಿಗಳೊಂದಿಗೆ ಸಂಚರಿಸುತ್ತಿದೆ. ಈ ಬೋಗಿಗಳಲ್ಲಿ ಸುರಕ್ಷತೆಯ ಕೊರತೆಯಿದ್ದು, ಆರಾಮ ಹಾಗೂ ಸುಧೀರ್ಘ ಅವಧಿಯ ದೃಷ್ಟಿಯಿಂದ ಎಲ್ಎಚ್ಬಿ ಬೋಗಿಗಳನ್ನಾಗಿ ಪರಿವರ್ತಿಸಬೇಕು. ಸದ್ಯ ದಾದರವರೆಗೆ ಸಂಚರಿಸುವ ಈ ರೈಲಿನ ಸಂಚಾರವನ್ನು ಮುಂಬೈನ ಸಿಎಸ್ಎಂಟಿ ನಿಲ್ದಾಣದ ವರೆಗೆ ವಿಸ್ತರಿಸಬೇಕು ಎಂದು ಕೋರಿದರು.
ಹುಬ್ಬಳ್ಳಿ- ಅಂಕೋಲಾ ಹೊಸ ರೈಲು ಮಾರ್ಗವನ್ನು ತ್ವರಿತಗೊಳಿಸುವುದು, ಗದಗ-ಲಕ್ಷ್ಮೇಶ್ವರ -ಯಳವಗಿ-ಹಾವೇರಿ ಹೊಸ ರೈಲು ಮಾರ್ಗಕ್ಕೆ ಅನುಮೋದನೆ ನೀಡುವುದು, ಹುಬ್ಬಳ್ಳಿ -ಮಂತ್ರಾಲಯ ರೈಲು ಸೌಲಭ್ಯ ಪ್ರಾರಂಭಿಸಬೇಕು. ಹುಬ್ಬಳ್ಳಿ-ಚೆನೈ ಸೆಂಟ್ರಲ್ ಎಕ್ಸ್ಪ್ರೆಸ್ ರೈಲು ನಿತ್ಯ ಸಂಚರಿಸುವಂತಾಗಬೇಕು. ಹುಬ್ಬಳ್ಳಿ-ಹೈದ್ರಾಬಾದ್ ನೇರ ರೈಲು ಸೇವೆ ಪ್ರಾರಂಭಿಸಬೇಕು. ಹುಬ್ಬಳ್ಳಿ -ಮುಂಬೈ ಹಾಗೂ ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಭಾರತ್ ಸ್ಟೀಪರ್ ರೈಲು ಸಂಚಾರ ಪ್ರಾರಂಭಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ, ವಲಯ ರೇಲ್ವೆ ಬಳಕೆದಾರರ ಸಲಹಾ ಸಮಿತಿ ಮಾಜಿ ಸದಸ್ಯ ಗೌತಮ ಗುಲೇಚ್ಚ, ಸುಭಾಷ ಡಂಕ ಸೇರಿದಂತೆ ಹಲವರಿದ್ದರು.