ಸಾಧಕರನ್ನು ಗೌರವಿಸುವುದರಿಂದ ಇತರರಿಗೂ ಪ್ರೇರಣೆ: ಪಿ.ಎಸ್.ಹಾಲಸ್ವಾಮಿ

KannadaprabhaNewsNetwork | Published : Jul 8, 2024 12:39 AM

ಸಾರಾಂಶ

ಶಿವಮೊಗ್ಗ ಎಪಿಎಂಸಿ ಯಾರ್ಡ್‌ನಲ್ಲಿ ದಿನಸಿ ವರ್ತಕರ ಸಂಘದಿಂದ ಏರ್ಪಡಿಸಿದ್ದ ಕುಟುಂಬ ಸ್ನೇಹ ಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕಲಾವಿದರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಮಾಜದಲ್ಲಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಇತರರಿಗೂ ಪ್ರೇರಣೆ ದೊರೆಯುತ್ತದೆ. ಸಂಘ ಸಂಸ್ಥೆಗಳು ನಮ್ಮ ಸುತ್ತಮುತ್ತ ಇರುವ ಮಹನೀಯರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ದಿನಸಿ ವರ್ತಕರ ಸಂಘದ ಅಧ್ಯಕ್ಷ ಪಿ.ಎಸ್.ಹಾಲಸ್ವಾಮಿ ಹೇಳಿದರು.

ನಗರದ ಎಪಿಎಂಸಿ ಯಾರ್ಡ್‌ನಲ್ಲಿ ದಿನಸಿ ವರ್ತಕರ ಸಂಘದಿಂದ ಏರ್ಪಡಿಸಿದ್ದ ಕುಟುಂಬ ಸ್ನೇಹ ಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ವರ್ತಕರ ಸಂಘದಿಂದ ಪ್ರತಿಭಾವಂತ ಸಾಧಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅಭಿನಂದಿಸಲಾಗುತ್ತಿದೆ ಎಂದರು.

ಸಂಘದಿಂದ ನಿರಂತರವಾಗಿ ಸಮಾಜಮುಖಿ ಕಾರ್ಯ ಮಾಡುತ್ತಿದ್ದು, ಪ್ರತಿಭಾ ಪುರಸ್ಕಾರ ಹಾಗೂ ಕುಟುಂಬ ಮಿಲನದಿಂದ ಪರಸ್ಪರರಲ್ಲಿ ಅವಿನಾಭಾವ ಸಂಬಂಧ ಪರಿಚಯವಾಗಿ ಪ್ರೀತಿ ವಿಶ್ವಾಸ ವೃದ್ಧಿಸುತ್ತದೆ ಎಂದರು.

ಹಳೆಯ ಗೀತೆಗಳು ನಮಗೆ ಖಿನ್ನತೆಯಿಂದ ದೂರ ಮಾಡುವುದರ ಜತೆಗೆ ನಮ್ಮ ಮನಸ್ಸನ್ನು ಅರಳಿಸುತ್ತವೆ. ಹಳೆಯ ಚಿತ್ರಗೀತೆಗಳು ಇಂದಿಗೂ ಸಹ ಪ್ರಸ್ತುತ. ನಮ್ಮ ಬದುಕಿಗೆ ತುಂಬಾ ಹತ್ತಿರವಾಗಿವೆ. ಸಾಹಿತ್ಯ ಸಂಗೀತವೂ ಕೂಡ ತುಂಬಾ ಅರ್ಥಪೂರ್ಣವಾಗಿರುತ್ತದೆ ಎಂದು ನುಡಿದರು.

ಇದೇ ವೇಳೆ ಕನ್ನಿಕಾ ಟ್ರೇಡರ್ಸ್ ಅವರು ಎಲ್ಲಾ ವರ್ತಕರಿಗೆ ವಿಶೇಷವಾದ ಫುಡ್ ಕೀಟ್ ವಿತರಿಸಿದರು. ಹೊಸನಗರದ ಸುಗಮ ಸಂಗೀತ ಆಕಾಶವಾಣಿ ಕಲಾವಿದರಾದ ಆದ್ಯಾ, ರಮೇಶ್ ಹಾಗೂ ಜಿ.ವಿಜಯಕುಮಾರ್, ಬಿಂದು ವಿಜಯಕುಮಾರ್, ಶಾರುಖ್ ಖಾನ್ ಅವರಿಂದ ಮಧುರ ಮಧುರವಿ ಮಂಜುಳಗಾನ, ಹಳೆಯ ಚಿತ್ರಗೀತೆಗಳ ಕಾರ್ಯಕ್ರಮ ನಡೆಯಿತು. ಸಂಘದ ಪದಾಧಿಕಾರಿಗಳು ಕಲಾವಿದರನ್ನು ಗೌರವಿಸಿದರು. ಎಸ್ಎಸ್ಎಲ್‌ಸಿ ಹಾಗೂ ಪಿಯುನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ಪಾರಿತೋಷಕ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಆರ್.ಬಿ.ಕಡದಕಟ್ಟೆ, ಎಂ.ಪಿ.ನಾಗರಾಜ್, ಎಚ್.ಜೆ.ದೇವರಾಜ್, ರಘುಪ್ರಸಾದ್, ಲಕ್ಷ್ಮಿಕಾಂತ್, ಆನಂದ್, ಉಮೇಶ್, ನಂದಕುಮಾರ್, ಸಂತೋಷ್, ಪ್ರಸನ್ನ, ಪ್ರಕಾಶ್, ಸಿದ್ದಪ್ಪ, ಶ್ರೀಕಾಂತ್, ಶಿವಪ್ರಕಾಶ್ ಮತ್ತು ಅಶೋಕ್ ಕುಮಾರ್ ಉಪಸ್ಥಿತರಿದ್ದರು.

Share this article