- ಕೆಮಿಕಲ್ ಕಂಪನಿಗಳ ವಿರುದ್ಧ ನಕಾರಾತ್ಮಕ ವರದಿ ನೀಡದಂತೆ ರಾಜಕೀಯ ಪ್ರಭಾವ ?
- ಜನವಿರೋಧ ಬಂದರೆ ಎದುರಿಸಲು ರಾಜಕಾರಣಿಗಳ ಪಾರ್ಟನರ್ಶಿಪ್: ಕಂಪನಿಗಳ ತಂತ್ರ !- ಕನ್ನಡಪ್ರಭ ಸರಣಿ ವರದಿ ಭಾಗ: 58
ಆನಂದ್ ಎಂ. ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ವಿಷಾನಿಲ ಹೊರಸೂಸುವಿಕೆ ಹಾಗೂ ತ್ಯಾಜ್ಯ ದುರ್ನಾತದ ಬಗ್ಗೆ ನಾವುಗಳು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮವರ ಮೃತದೇಹಗಳ ನೋಡುವುದು ಖಚಿತ ಎಂಬ ಆತಂಕದ ಮಾತುಗಳು ಈ ಭಾಗದ ಯುವ ಸಮುದಾಯದಲ್ಲಿ ಜಾಗೃತಿ ಕರೆಗೆ ಮುಂದಾಗಿದೆ.ಈ ಮಧ್ಯೆ, ವಿಷಕಾರಿ ಕೆಮಿಕಲ್ ಕಂಪನಿಗಳ ವಿರುದ್ಧ ಯಾವುದೇ ತರಹದ ನಕಾರಾತ್ಮಕ ವರದಿ ನೀಡದಂತೆ ಸರ್ಕಾರದ ಭಾಗವಾಗಿರುವ ಕೆಲವು ರಾಜಕೀಯ ಪ್ರಮುಖರು ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಅನುಮಾನಗಳೂ ಮೂಡುತ್ತಿವೆ. ಮುಂದೆ ಜನವಿರೋಧ ಸಂದರ್ಭಗಳು ಎದುರಾದರೆ, ರಾಜಕೀಯ ನಾಯಕರು ತಮ್ಮ ರಕ್ಷಣೆಗೆ ಬರಬಹುದು ಎಂಬ ಕಾರಣಕ್ಕೆ, ಅಥವಾ ಸಂಬಂಧಿಕರ ಸಹಭಾಗಿತ್ವದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿರುವ ಮಾಲೀಕರು, ಅಂತಹವರ ಮೂಲಕ ಅಧಿಕಾರಿಗಳಿಗೆ ಒತ್ತಡ ಹಾಕಿಸುತ್ತಿದ್ದಾರೆ. ವಿಷಕಾರಿ ಪರಿಸ್ಥಿತಿ-ಜನ-ಜಲ-ಜೀವನದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವಿದ್ದು, ತಡೆಯಲು ಸರ್ಕಾರದ ಮೇಲ್ಮಟ್ಟದಲ್ಲಿ ವರದಿ ನೀಡಲು ಅಧಿಕಾರಿಗಳು ಮುಂದಾಗಿದ್ದಾರಾದರೂ, ರಾಜಕೀಯ ಪ್ರಭಾವಿಗಳ ಪರೋಕ್ಷ ಸೂಚನೆಗಳ ಮೇರೆಗೆ ಕ್ರಮ ಕೈಗೊಳ್ಳದೆ ಕೈಕಟ್ಟಿಕೊಂಡು ಮೌನಕ್ಕೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
-ಕೋಟ್- 1: ಕಡೇಚೂರು-ಬಾಡಿಯಾಳ ಪ್ರದೇಶದಲ್ಲಿ ಸ್ಥಾಪಿತವಾದ ರಾಸಾಯನಿಕ ಕಂಪನಿಗಳು ಬಿಡುಗಡೆ ಮಾಡುವ ವಿಷಯುಕ್ತ ಅನಿಲದಿಂದ ಇದರ ಸುತ್ತಲಿನ 10ರಿಂದ 15ಕಿ.ಮೀ ವ್ಯಾಪ್ತಿಯಲ್ಲಿ ಗಾಳಿ ಗುಣಮಟ್ಟದ ಸೂಚ್ಯಂಕ ಗಮನಿಸಿದಾಗ ಈ ಪ್ರದೇಶದಲ್ಲಿ ಜನರು ವಾಸಿಸಲು ಪೂರಕವಾಗಿರುವುದಿಲ್ಲ. ಜತೆಗೆ ನೀರು ಮತ್ತು ಮಣ್ಣು ಬಹಳಷ್ಟು ಕಲಷಿತಗೊಳ್ಳುತ್ತಿದೆ. ಇದೇ ರೀತಿ ಮುಂದುವರೆದರೆ ಅನಾರೋಗ್ಯದಿಂದ ಸಾಯುವ ಆತಂಕ ಹೆಚ್ಚಾಗಿದೆ. ನಾವುಗಳು ತಕ್ಷಣವೇ ಎಚ್ಚತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮವರ ಮೃತದೇಹ ನೋಡುವುದು ಖಚಿತ. ಈ ಭಾಗದ ಪ್ರತಿಯೊಬ್ಬರು ಹೋರಾಟ ಮಾಡುವುದು ಅವಶ್ಯಕತೆವಾಗಿದೆ.
-ಯಲ್ಲಾಲಿಂಗ, ಗೂಡೂರು. (4ವೈಡಿಆರ್17)---
ಕೋಟ್- 2: ಈ ಪ್ರದೇಶದಲ್ಲಿ ಸ್ಥಾಪಿತವಾದ ರಾಸಾಯನಿಕ ಕಂಪನಿಗಳು ಮಳೆಗಾಲದಲ್ಲಿ ಮಳೆಯ ನೀರಿನ ಜತೆಗೆ ದ್ರವರೂಪದ ತ್ಯಾಜ್ಯವನ್ನು ನೇರವಾಗಿ ಹಳ್ಳ-ಕೊಳ್ಳಗಳಿಗೆ ಬಿಡುತ್ತಾರೆ. ಇದರಿಂದ ಮಳೆಗಾಲದಲ್ಲಿ ಹರಿವ ಹಳ್ಳಗಳಲ್ಲಿ ಮೀನುಗಳ ಮಾರಣಹೋಮವೇ ಜರುಗುತ್ತಿದೆ. ಆ ನೀರು ಭೀಮ ಮತ್ತು ಕೃಷ್ಣ ನದಿಗೆ ಸೇರ್ಪಡೆಯಾಗುತ್ತದೆ. ಇಂತಹ ನೀರನ್ನು ಸೇವನೆಯಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುವುದು ಖಂಡಿತ, ಪರಿಸರ ಮಾಲಿನ್ಯ ಇಲಾಖೆಯಾಗಲಿ ಮತ್ತು ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಗಮನಿಸಿದರೆ. ಅಧಿಕಾರಿಗಳು ಜನರ ಆರೋಗ್ಯಕ್ಕಿಂತ ಮುಖ್ಯವಾಗಿ ಉದ್ಯಮಿದಾರರ ಹಿತಶಕ್ತಿ ಕಾಯುವ ಸೇವಕರಾಗಿದ್ದಾರೆ ಎಂದೆನಿಸುತ್ತದೆ.- ದೇವು ಸೈದಣ್ಣನೋರ್, ಸೈದಾಪುರ. (4ವೈಡಿಆರ್18)
---ಕೋಟ್- 3 : ನಮ್ಮೂರು ಈ ಕೈಗಾರಿಕೆ ಪ್ರದೇಶದಿಂದ ಸುಮಾರು 5 ರಿಂದ 6 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಸ್ಥಾಪಿಸಿರುವ ರಾಸಾಯನಿಕ ಕಂಪನಿಗಳು ಮತ್ತು ತ್ಯಾಜ್ಯ ವಿಲೇವಾರಿ ಘಟಕದಿಂದ ಹೊರ ಬರುವ ದುರ್ನಾತವು ಮೂಗಿಗೆ ಬಟ್ಟೆ ಕಟ್ಟಿಕೊಂಡು ತಿರುಗಾಡುವ ಅನಿವಾರ್ಯತೆ ಎದುರಾಗಿದೆ. ಇದು ನಮ್ಮ ಚಿಕ್ಕ ಮಕ್ಕಳಿಗೆ ಮತ್ತು ಮನೆಯಲ್ಲಿರುವ ವೃದ್ಧರಿಗೆ ಉಸಿರಾಟದ ತೊಂದರೆಯಾಗುತ್ತಿದೆ. ಹಾಗೂ ಕೇಲವರಿಗೆ ಅಸ್ತಮಾ ಮತ್ತು ಕ್ಷಯರೋಗ ಬರುವ ಲಕ್ಷಣವು ಹೆಚ್ಚಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿರುವ ಗ್ರಾಮಗಳು ಸಂಪೂರ್ಣವಾಗಿ ನಶಿಸಿ ಹೋಗುವುದರಲ್ಲಿ ಅನುಮಾನವಿಲ್ಲ. ದಯವಿಟ್ಟು ಸರಕಾರವು ಇಲ್ಲಿನ ಜನರ ಆರೋಗ್ಯದ ದೃಷ್ಠಿಯಿಂದ ಈ ಕಂಪನಿಗಳ ಅನುಮತಿಯನ್ನು ರದ್ದು ಮಾಡಬೇಕು.
- ಮಹಿಪಾಲರೆಡ್ಡಿ, ಮುನಗಾಲ. (4ವೈಡಿಆರ್19)-
ಕೋಟ್-4 : ಜನರ ಜೀವಕ್ಕೆ ಹಾನಿಯುಂಟು ಮಾಡುತ್ತಿರುವ ಈ ರಾಸಾಯನಿಕ ಕಂಪನಿಗಳಿಗೆ ರಾಜ್ಯದ ಪ್ರಭಾವಿ ನಾಯಕರ ಕೃಪಕಟಾಕ್ಷವಿದೆ ಎಂದೆನಿಸುತ್ತಿದೆ. ಇವುಗಳಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯದ ತೊಂದರೆ ಯಾಗುತ್ತಿದೆ ಎಂದು ಶಾಸಕರಿಗೆ ಮಾಹಿತಿ ನೀಡಿದ ಜೆಟಿಟಿಸಿ ಕಾಲೇಜು ಮುಖ್ಯಸ್ಥರಿಗೆ ಸರಕಾರ ವರ್ಗಾವಣೆಯ ಭಾಗ್ಯ ನೀಡಿದೆ, ಅದರ ಜತೆಗೆ ಕೆಲ ಪರಿಸರ ಮಾಲಿನ್ಯ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಮಾಹಿತಿ ಜನಸಾಮಾನ್ಯರು ಮಾತಾಡಿಕೊಳ್ಳುತ್ತಿದ್ದಾರೆ.- ಮಲ್ಲಿಕಾರ್ಜುನ ಬಾಡದ್, ಮುನಗಾಲ್. (4ವೈಡಿಆರ್20)
-4ವೈಡಿಆರ್21 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಹೊರನೋಟ.