ಡಿಸೆಂಬರ್‌ ಹೊತ್ತಿಗೆ ಅರ್ಜುನ ಆನೆಯ ಸ್ಮಾರಕ ಸಿದ್ಧ: ಈಶ್ವರ್ ಖಂಡ್ರೆ

KannadaprabhaNewsNetwork | Published : Jul 7, 2024 1:21 AM

ಮಾನವ- ಪ್ರಾಣಿ ಸಂಘರ್ಷ ಅನಾದಿ ಕಾಲದಿಂದಲೂ ನಡೆಯುತ್ತಿದ್ದು, ವನ್ಯಜೀವಿಗಳೊಂದಿಗೆ ಹೊಂದಾಣಿಕೆ ಬದುಕು ನಡೆಸುವುದನ್ನು ಕಲಿಯಬೇಕಿದೆ. ಇಂದು ವನ್ಯಜೀವಿಗಳು ಕಾಡುಬಿಟ್ಟು ನಾಡಿಗೆ ಬರಲು ಕಾರಣವನ್ನು ಹುಡುಕುವ ಕೆಲಸವಾಗುತ್ತಿದ್ದು, ಆಗಸ್ಟ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಜ್ಞರ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಇಲ್ಲಿ ವ್ಯಕ್ತವಾಗುವ ಅಭಿಪ್ರಾಯದಂತೆ ಮುಂದಿನ ಯೋಜನೆ ರೂಪಿಸಲಾಗುವುದು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಯಸಳೂರು ಹೋಬಳಿಯ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಬರುವ ಡಿಸೆಂಬರ್ ತಿಂಗಳಿನಲ್ಲಿ ಅರ್ಜುನ ಆನೆಯ ಸ್ಮಾರಕ ಉದ್ಘಾಟನೆಗೊಳ್ಳಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಶನಿವಾರ ತಾಲೂಕಿನ ಅರ್ಜುನ ಆನೆ ಮೃತಪಟ್ಟ ದಬ್ಬಳಿಕಟ್ಟೆ ಅರಣ್ಯಪ್ರದೇಶಕ್ಕೆ ಭೇಟಿ ನೀಡಿ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಅರ್ಜುನ ಆನೆ ಮೃತಪಟ್ಟು ಬರುವ ಡಿಸೆಂಬರ್ ತಿಂಗಳಿಗೆ ಒಂದು ವರ್ಷವಾಗಲಿದ್ದು, ಸರ್ಕಾರ ಅರ್ಜುನ ಆನೆ ಮೃತಪಟ್ಟ ಒಂದು ವರ್ಷದ ಪುಣ್ಯಸ್ಮಾರಣೆಯನ್ನು ದಬ್ಬಳ್ಳಿಕಟ್ಟೆಯಲ್ಲಿ ಹಮ್ಮಿಕೊಳ್ಳಲಿದೆ. ಈ ವೇಳೆಗೆ ೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸ್ಮಾರಕವನ್ನು ಉದ್ಘಾಟಿಸಲಾಗುವುದು. ಇದಲ್ಲದೇ ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲೂ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದರು.

ಮಾನವ- ಪ್ರಾಣಿ ಸಂಘರ್ಷ ಅನಾದಿ ಕಾಲದಿಂದಲೂ ನಡೆಯುತ್ತಿದ್ದು, ವನ್ಯಜೀವಿಗಳೊಂದಿಗೆ ಹೊಂದಾಣಿಕೆ ಬದುಕು ನಡೆಸುವುದನ್ನು ಕಲಿಯಬೇಕಿದೆ. ಇಂದು ವನ್ಯಜೀವಿಗಳು ಕಾಡುಬಿಟ್ಟು ನಾಡಿಗೆ ಬರಲು ಕಾರಣವನ್ನು ಹುಡುಕುವ ಕೆಲಸವಾಗುತ್ತಿದ್ದು, ಆಗಸ್ಟ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಜ್ಞರ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಇಲ್ಲಿ ವ್ಯಕ್ತವಾಗುವ ಅಭಿಪ್ರಾಯದಂತೆ ಮುಂದಿನ ಯೋಜನೆ ರೂಪಿಸಲಾಗುವುದು ಎಂದರು. ಕಾಡಾನೆಯಿಂದ ಮೃತಪಟ್ಟವರಿಗೆ ಹಾಗೂ ಗಾಯಗೊಂಡವರಿಗೆ ನಿಗದಿತ ಪರಿಹಾರವನ್ನು ನಿಶ್ಚಿತವಾಗಿ ನೀಡಿದ್ದೇವೆ. ಗಾಯಾಳುಗಳಿಗೆ ಪರಿಹಾರ ದೊರೆತಿಲ್ಲ ಎಂದರೆ ನಮಗೆ ದೂರು ನೀಡಬಹುದು. ಕಾಡಾನೆ ದಾಳಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿ ನಿರ್ಮಾಣ, ಕಂದಕ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ೧೩೦ ಕಿಮೀ ಸೋಲಾರ್ ಬೇಲಿಯನ್ನು ಪ್ರತಿ ಕಿಮೀಗೆ ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇನ್ನೂ ೧೦೧ ಕಿಮೀ ಸೋಲಾರ್ ಬೇಲಿಯನ್ನು ಒಂದು ವರ್ಷದಲ್ಲೇ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ಆಗಸ್ಟ್ ತಿಂಗಳ ಒಳಗಾಗಿ ಬೇಡಿಕೆ ಇರುವ ಎಲ್ಲ ಸೋಲಾರ್ ಬೇಲಿ ಪ್ರಸ್ತಾವನೆಗಳಿಗೆ ಮಂಜೂರಾತಿ ನೀಡುವ ಮೂಲಕ ಕಾಮಗಾರಿ ಆರಂಭಿಸಲಾಗುವುದು. ಕಾಡಾನೆ ಸಮಸ್ಯೆ ನಿವಾರಣೆಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.

ಉಸ್ತುವರಿ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಅರ್ಜುನ ಆನೆ ಮೃತಪಟ್ಟ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣದ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು. ಮುಖ್ಯಮಂತ್ರಿಗಳ ನಿರ್ದೇಶನದಂತೆ ಇಂದು ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿದರು.

ಕಣ್ಣಿರು ಹಾಕಿದ ಡಿಎಫ್‌ಒ: ಸಭೆಯ ಬಳಿಕ ಯಸಳೂರು ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ,ಅಧಿಕಾರಿಗಳಿಗೆ ವ್ಯವಸ್ಥಿತವಾಗಿ ಊಟದ ವ್ಯವಸ್ಥೆ ಮಾಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮಾಧ್ಯಮದವರಿಗೆ ಅಡುಗೆ ಸಿದ್ಧಪಡಿಸಿದ್ದ ವಾಹನದ ಶೆಡ್‌ನಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಮಾಧ್ಯಮದವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು, ಊಟ ಮಾಡದೇ ಹೊರಟರು. ಈ ವೇಳೆ ಮಾಧ್ಯಮದ ವಾಹನ ತಡೆದ ಉಪಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ಕುಮಾರ್ ಇದೊಂದು ಬಾರಿ ತಪ್ಪಾಗಿದೆ ಕ್ಷಮಿಸಿ ಎಂದು ಪರಿಪರಿಯಾಗಿ ವಿನಂತಿಸಿದರೂ ಮಾಧ್ಯಮದವರು ಅಧಿಕಾರಿಯ ಮಾತಿಗೆ ಕಿಮ್ಮತ್ತು ನೀಡದಿದ್ದರಿಂದ ಒಂದು ಹಂತದಲ್ಲಿ ಕಣ್ಣೀರು ಹಾಕಿದರು.

ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ರಾಜ್ಯ ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್, ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಸುಭಾಷ್ ಮಲ್ಪಡೆ, ವನ್ಯಜೀವಿ ಪಡೆ ಮುಖ್ಯಸ್ಥ ಪುಷ್ಕರ್, ಆನೆ ಯೋಜನೆ ಮುಖ್ಯಸ್ಥ ಮನೋಜ್, ಸಿಸಿಎಫ್ ಶಿವಶಂಕರ್, ಡಿಎಫ್‌ಒ ಸೌರಭ್ ಕುಮಾರ್ ಸೇರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.