ಹಳಿಯಾಳ ತಾಲೂಕಿನ ಹವಗಿ ಗ್ರಾಮದಲ್ಲಿ ಜೈನ ಮುನಿಗಳ ಪುರಪ್ರವೇಶ

KannadaprabhaNewsNetwork | Published : Dec 19, 2024 12:34 AM

ಸಾರಾಂಶ

ಮಂಡ್ಯ ಜಿಲ್ಲೆಯ ಜೈನರಗುತ್ತಿಯಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಂಡ ಜೈನಮುನಿಗಳು ಹಾಗೂ ಭಕ್ತವೃಂದದವರು ಕೊಲ್ಲಾಪುರದ ನಂದಿನಿಮಠದವರೆಗೆ ತೆರಳಲು ಆರಂಭಿಸಿದ ಪಾದಯಾತ್ರೆಯು ಹವಗಿ ಗ್ರಾಮಕ್ಕೆ ಆಗಮಿಸಿತು.

ಹಳಿಯಾಳ: ತಾಲೂಕಿನ ಹವಗಿ ಗ್ರಾಮದಲ್ಲಿ ಬುಧವಾರ ವಿಶುದ್ಧಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಜೈನ ಮುನಿಗಳೊಂದಿಗೆ ಆಗಮಿಸಿದ ಅಸಂಖ್ಯಾತ ಭಕ್ತವೃಂದದವರನ್ನು ಹವಗಿ ಸೇರಿದಂತೆ ತಾಲೂಕಿನ ಜೈನ ಸಮಾಜದವರು ಭವ್ಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.

ಮಂಡ್ಯ ಜಿಲ್ಲೆಯ ಜೈನರಗುತ್ತಿಯಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಂಡ ಜೈನಮುನಿಗಳು ಹಾಗೂ ಭಕ್ತವೃಂದದವರು ಕೊಲ್ಲಾಪುರದ ನಂದಿನಿಮಠದವರೆಗೆ ತೆರಳಲು ಆರಂಭಿಸಿದ ಪಾದಯಾತ್ರೆಯು ಹವಗಿ ಗ್ರಾಮಕ್ಕೆ ಆಗಮಿಸಿತು.ಬೆಳಗ್ಗೆ ಹವಗಿ ಗ್ರಾಮ ಪುರ ಪ್ರವೇಶಿಸಿದ ಜೈನಮುನಿಗಳು ಹಾಗೂ ಭಕ್ತಸಮೂಹಗಳು ಭವ್ಯ ಮೆರವಣಿಗೆ ಮೂಲಕ ಶಾಸ್ತ್ರೋಕ್ತವಾಗಿ ಗ್ರಾಮದಲ್ಲಿ ಪಾರ್ಶ್ವನಾಥ ದಿಗಂಬರ ಜೈನ್ ಬಸದಿಯವರೆಗೆ ನಡೆಯಿತು. ನಂತರ ನಡೆದ ಧರ್ಮಸಭೆಯನ್ನು ಉದ್ದೇಶಿಸಿ ಕೊಲ್ಲಾಪುರದ ನಂದಿನಿಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮಿಗಳು, ಶಿರಸಿಯ ಸೋಂದಾಮಠದ ಭಟ್ಟಾಕಲಂಕ ಪಟ್ಟಾಚಾರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದ ವಿಶುದ್ಧಸಾಗರ ಮಹಾರಾಜರ ಜನ್ಮದಿನನವನ್ನು ಆಚರಿಸಿ ಶುಭ ಕೋರಲಾಯಿತು.ಧರ್ಮಸಭೆಯಲ್ಲಿ ಪಾದಯಾತ್ರೆಯೊಂದಿಗೆ ಹೆಜ್ಜೆಯಿಟ್ಟ ಉತ್ತರಪ್ರದೇಶ, ಇಂದೋರ, ಆಗ್ರಾ, ಹೈದರಾಬಾದ್, ಕೊಲ್ಲಾಪುರ, ಸಾಂಗ್ಲಿ ಮತ್ತು ಬಳ್ಳಾರಿಯಿಂದ ಆಗಮಿಸಿದ 150ಕ್ಕೂ ಹೆಚ್ಚು ಭಕ್ತರು, ಹವಗಿ, ತೇರಗಾಂವ, ಹಳಿಯಾಳ ಹಾಗೂ ಅಳ್ನಾವರದಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜೈನರು ಇದ್ದರು.ನಾಳೆಯಿಂದ ಸಿದ್ದಾಪುರದಲ್ಲಿ ನಾಟಕ ಪ್ರದರ್ಶನ

ಸಿದ್ದಾಪುರ: ಶೃಂಗೇರಿ ಶಂಕರ ಮಠದ ಸಂಸ್ಕೃತಿ ಸಂಪದ ಹಾಗೂ ಒಡ್ಡೋಲಗ ಹಿತ್ತಲಕೈ ಸಹಯೋಗದಲ್ಲಿ ಸಿದ್ದಾಪುರದ ಶಂಕರಮಠದಲ್ಲಿ ನೀನಾಸಂ ತಿರುಗಾಟದ ಎರಡು ನಾಟಕಗಳು ಡಿ. ೨೦ ಮತ್ತು ೨೧ರಂದು ಸಂಜೆ ೬.೩೦ಕ್ಕೆ ಪ್ರದರ್ಶನಗೊಳ್ಳಲಿವೆ.

ಡಿ. ೨೦ರಂದು ಭವಭೂತಿ ರಚನೆಯ, ವಿದ್ಯಾ ಹೆಗಡೆ, ಭಾರ್ಗವ ಕೆ.ಎನ್. ಮತ್ತು ಎಂ.ಎಚ್. ಗಣೇಶ ಅವರ ಸಂಗೀತ ವಿನ್ಯಾಸದ ಅಕ್ಷರ ಕೆ.ವಿ. ಕನ್ನಡ ರೂಪ, ನಿರ್ದೇಶನದ ಮಾಲತಿ ಮಾಧವ, ಡಿ. ೨೧ರಂದು ಅಭಿರಾಮ ಭಡ್ಕಮಕರ್ ಅವರ ಮರಾಠಿ ಮೂಲ, ಕನ್ನಡಕ್ಕೆ ಜಯಂತ ಕಾಯ್ಕಿಣಿ ಅನುವಾದಿಸಿದ, ವಿದ್ಯಾವಾರಿಧಿ ವನಾರಸೆ(ಪ್ರಸಾದ್) ನಿರ್ದೇಶನದ ಅಂಕದ ಪರದೆ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರದರ್ಶನದ ಶುಭಾರಂಭದಲ್ಲಿ ರಂಗನಿರ್ದೇಶಕ ಅಕ್ಷರ ಕೆ.ವಿ., ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ನಾಟಕ ಕೃತಿಕಾರ ಎಸ್.ವಿ. ಹೆಗಡೆ ಮಘೇಗಾರ ಉಪಸ್ಥಿತರಿರುವರು. ಪ್ರೇಕ್ಷಕರು ೧೫ ನಿಮಿಷ ಮುಂಚಿತವಾಗಿ ಬಂದು ಆಸೀನರಾಗಲು ಒಡ್ಡೋಲಗ ಸಂಸ್ಥೆಯ ಗಣಪತಿ ಬಿ. ಹಿತ್ತಲಕೈ ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

Share this article