ದೇಶದ ಐಕ್ಯತೆ, ಸಾರ್ವಭೌಮತ್ವ ಎತ್ತಿಹಿಡಿಯಿರಿ

KannadaprabhaNewsNetwork | Published : Jan 28, 2024 1:20 AM

ಸಾರಾಂಶ

ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಾಕಷ್ಟು ಅವ್ಯವಸ್ಥೆಯ ಸಮಾಜವನ್ನು ಕಾಣುವ ಸಾಧ್ಯತೆ ಇದೆ. ಜೊತೆಗೆ ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳಿವೆ. ಹೀಗಾಗಿ, ಶ್ರದ್ಧೆಯ ಓದು ನಿಮ್ಮದಾಗಬೇಕು. ವಿದ್ಯಾರ್ಥಿಗಳು ಈಗಿನಿಂದಲೇ ಸಮಯಪ್ರಜ್ಞೆ, ಅರ್ಪಣಾ ಮನೋಭಾವ, ಪ್ರಾಮಾಣಿಕತೆ, ಬದ್ಧತೆ, ಕರ್ತವ್ಯ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡಬೇಕು

- ಯುವ ಜನಾಂಗಕ್ಕೆ ನಿವೃತ್ತ ಎಸಿಪಿ ಜಿ.ಎನ್. ಮೋಹನ್ ಸಲಹೆ---

ಕನ್ನಡಪ್ರಭ ವಾರ್ತೆ ಮೈಸೂರು

ಯುವ ಜನಾಂಗ ದೇಶದ ಐಕ್ಯತೆ ಹಾಗೂ ಸಾರ್ವಭೌಮತ್ವವನ್ನು ಎತ್ತಿಹಿಡಿಯಬೇಕಾಗಿದೆ ಎಂದು ನಿವೃತ್ತ ಎಸಿಪಿ ಜಿ.ಎನ್. ಮೋಹನ್ ತಿಳಿಸಿದರು.

ನಗರದ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರನ್ನು ಸ್ಮರಿಸಬೇಕು. ಭಾರತ ದೇಶದ ಸುಭದ್ರತೆಗೆ ಸಂವಿಧಾನವೇ ಕಾರಣ. ನಮ್ಮ ಸಂವಿಧಾನ ಎಲ್ಲಾ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಜೊತೆಗೆ ಅದರಂತೆ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ಜನ ಹೋರಾಡಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ದೇಶ ಎಷ್ಟು ತ್ವರಿತಗತಿಯಲ್ಲಿ ಬೆಳೆಯುತ್ತಿದೆಯೋ ಅಷ್ಟೇ ಅನ್ಯಾಯದ, ಅಕ್ರಮಗಳೂ ನಡೆಯುತ್ತಿವೆ. ಈ ಅವ್ಯವಸ್ಥೆಯನ್ನು ಸರಿಪಡಿಸಬೇಕಾದವರು ವಿದ್ಯಾರ್ಥಿಗಳೇ. ವಿದ್ಯಾರ್ಥಿಗಳೇ ದೇಶದ ಆಸ್ತಿ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಾಕಷ್ಟು ಅವ್ಯವಸ್ಥೆಯ ಸಮಾಜವನ್ನು ಕಾಣುವ ಸಾಧ್ಯತೆ ಇದೆ. ಜೊತೆಗೆ ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳಿವೆ. ಹೀಗಾಗಿ, ಶ್ರದ್ಧೆಯ ಓದು ನಿಮ್ಮದಾಗಬೇಕು. ವಿದ್ಯಾರ್ಥಿಗಳು ಈಗಿನಿಂದಲೇ ಸಮಯಪ್ರಜ್ಞೆ, ಅರ್ಪಣಾ ಮನೋಭಾವ, ಪ್ರಾಮಾಣಿಕತೆ, ಬದ್ಧತೆ, ಕರ್ತವ್ಯ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಯಾವುದೇ ಅನ್ಯಾಯವಾದಾಗ ಅದನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಾಗ್ವಾದ ನಡೆದಾಗ ಸಂಘರ್ಷ ತಡೆಯಲು ಮೌನವಾಗಿರುವುದು ಒಳಿತು. ಆದರೆ, ಕೆಲವು ಸಂದರ್ಭಗಳಲ್ಲಿ ಮೌನ ಸಹ ಅನ್ಯಾಯಕ್ಕೆ ಕಾರಣವಾಗುತ್ತದೆ. ಸಮಾಜಕ್ಕೆ ಅನ್ಯಾಯವಾಗುತ್ತಿದ್ದರೂ ಮೌನವಾಗಿರುವುದು ಸರಿಯಲ್ಲ ಎಂದರು.

ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ. ವಿಜಯಲಕ್ಷ್ಮೀ ಮುರಳೀಧರ್‌, ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆರ್. ರಮೇಶ್, ಎನ್.ಸಿ.ಸಿ. ಅಧಿಕಾರಿಗಳಾದ ಬಿ.ಆರ್. ನಿಖಿಲ್, ಡಾ.ಎಂ.ಆರ್. ಇಂದ್ರಾಣಿ, ಫ್ಲೈಯಿಂಗ್‌ ಆಫೀಸರ್‌ ಡಾ.ಪಿ.ಜಿ. ಪುಷ್ಪರಾಣಿ, ಅಂಗ ಸಂಸ್ಥೆಗಳ ಮುಖ್ಯಸ್ಥರು ಇದ್ದರು. ಡಾ.ಎಚ್.ಆರ್. ತಿಮ್ಮೇಗೌಡ ವಂದಿಸಿದರು. ಎನ್. ಸುನೀಲ್‌ ನಿರೂಪಿಸಿದರು.

Share this article