ಕನ್ನಡಪ್ರಭ ವಾರ್ತೆ ಹಾವೇರಿ
ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣ ಖಂಡಿಸಿ ಇಲ್ಲಿಯ ಎಸ್ಪಿ ಕಚೇರಿ ಎದುರು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಂತ್ರಸ್ತೆಗೆ ಸರಿಯಾದ ಚಿಕಿತ್ಸೆ ಕೊಟ್ಟಿಲ್ಲ, ಚಿಕಿತ್ಸೆ ಕೊಡಿಸಲು ಶಾಸಕರಿಗೆ ಹೇಳುತ್ತೇನೆ ಎಂದಿರುವ ಸಿಎಂ ಹೇಳಿಕೆ ಆಶ್ಚರ್ಯವನ್ನುಂಟು ಮಾಡಿದೆ. ಗೂಂಡಾ ಶಕ್ತಿಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಮರಿ ಗೂಂಡಾಗಳು ಮೆರೆಯುತ್ತಿದ್ದಾರೆ. ಅವರಿಗೆ ಪೊಲೀಸರು, ಕಾನೂನಿನ ಭಯವಿಲ್ಲವಾಗಿದೆ. ತಮ್ಮ ರಕ್ಷಣೆಗೆ ಸರ್ಕಾರ, ಪೊಲೀಸರು ಇದ್ದಾರೆ ಎಂಬ ಕಾರಣಕ್ಕೆ ದುಷ್ಟ ಶಕ್ತಿಗಳು ಮೆರೆಯುತ್ತಿವೆ. ಹಾನಗಲ್ಲ ಪಿಎಸ್ಐ ಎಲ್ಲಾ ವ್ಯವಹಾರ ಮಾಡಿದ್ದು. ಆದರೆ, ಅವರನ್ನು ಅಮಾನತು ಮಾಡಿಲ್ಲ, ಇಬ್ಬರು ಅಮಾಯಕರನ್ನು ಬಂಧಿಸಿದ್ದಾರೆ. ಹೀಗಾಗಿ ಎಸ್ಐಟಿ ರಚಿಸಿ ಹೊರಗಿನ ಹಿರಿಯ ಪೊಲೀಸರನ್ನು ಕಳುಹಿಸಿ ತನಿಖೆಗೆ ವಹಿಸಲೇಬೇಕು ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, ಈ ಸರ್ಕಾರ ಎಲ್ಲವನ್ನೂ ಮುಚ್ಚಿಹಾಕಲು ಯತ್ನಿಸುತ್ತಿದೆ. ಸಂತ್ರಸ್ತೆಗೆ ₹೫೦ಲಕ್ಷ ಕೊಟ್ಟು ಈ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರು. ಪೊಲೀಸ್ ಠಾಣೆ, ಮಹಿಳಾ ಸಾಂತ್ವನ ಕೇಂದ್ರಗಳನ್ನೆಲ್ಲಾ ಮುಚ್ಚಿ ಬಿಟ್ಟು ಎಲ್ಲಾ ಅಧಿಕಾರವನ್ನೂ ನಿಮ್ಮ ಶಾಸಕರಿಗೆ ಕೊಟ್ಟು ಬಿಡಿ. ಗೃಹಸಚಿವರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ, ಈ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಪೊಲೀಸರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಎಲ್ಲಾ ಪೋಸ್ಟಿಂಗ್ಗಳಿಗೂ ರೇಟ್ ಫಿಕ್ಸ್ ಆಗಿದೆ. ನಿಷ್ಠಾವಂತ ಪೊಲೀಸರಿಗೆ ಕೆಲಸ ಮಾಡಲು ಆಗದ ಪರಿಸ್ಥಿತಿಯಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುತ್ತಿದೆ. ಇಂಥ ಹೊತ್ತಿನಲ್ಲಿ ರಾವಣರಿಗೆ ಅವಕಾಶ ಕೊಡಬೇಡಿ. ಈ ಘಟನೆಯನ್ನು ಸಮಗ್ರವಾಗಿ ತನಿಖೆ ನಡೆಸಲು ಎಸ್ಐಟಿ ರಚಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಶಶಿಧರ ಹೊಸಳ್ಳಿ, ರುದ್ರೇಶ ಚೆನ್ನಣ್ಣನವರ, ಜಗದೀಶ ಬಸೇಗಣ್ಣಿ, ಭೋಜರಾಜ ಕರೂದಿ, ಶೋಭಾ ನಿಸ್ಸೀಮಗೌಡ್ರ, ಮಂಜುನಾಥ ಮಡಿವಾಳರ, ಸುರೇಶ ಹೊಸಮನಿ, ಪವನಕುಮಾರ ಮಲ್ಲಾಡದ, ಸಂತೋಷ ಆಲದಕಟ್ಟಿ, ಕಿರಣ ಕೋಣನವರ ಇತರರು ಇದ್ದರು.