ಧಾರವಾಡ: ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಒಕ್ಕೂಟದ ಕಲ್ಪನೆಯನ್ನು ನಾಶ ಮಾಡುವ ಪ್ರಯತ್ನಗಳು ರಾಜಕೀಯವಾಗಿ ನಡೆಯುತ್ತಿವೆ. ಸಂವಿಧಾನದ ಜೀವಾಳವಾಗಿರುವ ಒಕ್ಕೂಟ ಉಳಿಯಬಾರದು ಎನ್ನುವವರ ಮಧ್ಯೆ ನಿರ್ದಿಗಂತದಂತಹ ಉತ್ಸವಗಳು ಒಕ್ಕೂಟದ ಕಲ್ಪನ್ನೆಯನ್ನು ಎತ್ತಿ ಹಿಡಿಯಬೇಕು ಎಂದು ಹಿರಿಯ ಸಾಹಿತಿ, ಚಿಂತಕ ರಾಜೇಂದ್ರ ಚೆನ್ನಿ ಪ್ರತಿಪಾದಿಸಿದರು.
ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ನಿರ್ದಿಗಂತ ಉತ್ಸವದಲ್ಲಿ ಆಶಯ ಭಾಷಣ ಮಾಡಿದ ಅವರು, ಹಲವು ಭಾಷೆಗಳನ್ನು ಮಾತನಾಡುವ, ಪಂಗಡಗಳನ್ನು ಹೊಂದಿರುವ. ಹಲವು ಸಾಂಸ್ಕೃತಿಕ ಜೀವನಗಳು ನಮ್ಮ ಸಮಾಜದಲ್ಲಿವೆ. ಇಂತಹ ಸಂದರ್ಭದಲ್ಲಿ ಅವುಗಳಿಗೆ ಏಕರೂಪತೆ ನೀಡುವುದನ್ನು ಒಪ್ಪದೇ ನಾವು ಧಿಕ್ಕರಿಸಬೇಕು. ಒಂದೊಂದು ನೆಲ ಸಂಸ್ಕೃತಿಯು ಸ್ವತಂತ್ರವಾಗಿದ್ದು, ಸೌಹಾರ್ದಯುತವಾಗಿ ತಾವೇ ಒಂದು ಒಕ್ಕೂಟ ಮಾಡಿಕೊಳ್ಳಬೇಕು. ಅದಕ್ಕಾಗಿ ಈ ಉತ್ಸವ ಒಳ್ಳೆಯ ದಾರಿ ಮಾಡಿಕೊಡಬೇಕು ಎಂದು ಆಶಿಸಿದರು.ಒಕ್ಕೂಟದ ಕಲ್ಪನೆಯನ್ನು ಉತ್ತರ ಕರ್ನಾಟಕದ ಮೂಲಕ ಪ್ರತಿಪಾದಿಸಬೇಕಿದೆ. ಇದು ನಮ್ಮ ಚರಿತ್ರೆಯೂ ಹೌದು. ಇದು ವಾಸ್ತವ ಸಂಗತಿ ಎಂದೂ ಚೆನ್ನಿ ಹೇಳಿದರು.
ಒಂದೊಂದು ಸಂಸ್ಕೃತಿ ಎಲ್ಲ ಅನುಭವಗಳನ್ನು ಹಲವು ರೀತಿಯಲ್ಲಿ ಅಂದರೆ, ಬರಹ, ನಾಟಕ, ಪ್ರಯೋಗ, ಮಾತು, ಭಾಷೆ ಮೂಲಕ ಸಂಚಯ ಮಾಡಿ ಇಟ್ಟಿರುತ್ತದೆ. ಅದಕ್ಕೆ ಸಂಸ್ಕೃತಿ ಎನ್ನುತ್ತಿದ್ದು, ಅದು ನಿರಂತರವಾಗಿರುತ್ತದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ನಾವು ನಮ್ಮ ನೆನಪು ಹಾಗೂ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಬೇಸರ ಉಂಟಾಗುತ್ತಿದೆ. ದುರ್ದೈವದಿಂದ ನೆನಪುಗಳಿಂದ ದೂರ ಉಳಿಯುವಂತಾಗಿದೆ. ಸಾಂಸ್ಕೃತಿಕವಾಗಿ ಅನಾಥರಾಗುತ್ತಿದ್ದೇವೆ ಎಂಬ ಭಾವ ಉಂಟಾಗುತ್ತಿದೆ ಎಂದ ಚೆನ್ನಿ ಅವರು ಉತ್ತರ ಕರ್ನಾಟಕ ಭಾಗ ಅದರಲ್ಲೂ ಧಾರವಾಡದ ನೂರು ವರ್ಷಗಳ ಹಿಂದಿನ ಭಾಷೆ, ರಂಗಭೂಮಿ ಹಾಗೂ ಸಂಸ್ಕೃತಿ ಬಗ್ಗೆ ಪ್ರಸ್ತಾಪಿಸಿದರು.ಮತ್ತೆ ಮತ್ತೆ ಕಲೆ ಸ್ಮರಿಸಿ
ಪ್ರಸ್ತುತ ಸಮಾಜದಲ್ಲಿರುವ ಸವಾಲುಗಳನ್ನು ಎದುರಿಸಿ ನಾವು ಉಳಿದು ಬೆಳೆಯಲು ಪ್ರಯೋಗಶೀಲತೆ ಇರುವ ರಂಗಭೂಮಿ, ಜಾನಪದ ಹಾಗೂ ಕಲೆಗಳನ್ನು ನಾವು ಮತ್ತೆ ಮತ್ತೆ ಸ್ಮರಿಸಬೇಕು. ನಮ್ಮ ಕವಚಗಳಾಗಿ ಕಲೆ, ಭಾಷೆ, ಸಂಸ್ಕೃತಿಯಾಗಿದ್ದು, ಅದರ ಉತ್ಸವ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಚೆನ್ನಿ ಹೇಳಿದರು. ಜೊತೆಗೆ ವೃತ್ತಿ ರಂಗಭೂಮಿ ಮತ್ತೆ ಸರಿಯಾದ ಉದ್ದೇಶಕ್ಕಾಗಿ ನಾವು ಬೆಳೆಸಿಕೊಳ್ಳಬೇಕಾಗಿದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು. ನಾಟಕಗಳ ಸರಣಿನಿರ್ದಿಗಂತ ಉತ್ಸವದ ಉದ್ಘಾಟನೆ ನಂತರ ಶಕೀಲ್ ಅಹಮ್ಮದ ನಿರ್ದೇಶನದ ಅನಾಮಿಕನ ಸಾವು, ದಾದನಟ್ಟಿಯ ಬಯಲಾಟ ಸಂಘದಿಂದ ಶ್ರೀಕೃಷ್ಣಪಾರಿಜಾತ, ಅಮಿತ ರೆಡ್ಡಿ ನಿರ್ದೇಶನದ ಮೈ ಮನಗಳ ಸುಳಿಯಲ್ಲಿ ನಾಟಕಗಳ ಪ್ರದರ್ಶನ ಹಾಗೂ ಕೃಪಾಕರ ಸೇನಾನಿ ಅವರಿಂದ ನೆಲ-ಜಲ-ಬದುಕು ಕುರಿತು ಉಪನ್ಯಾಸ ಹಾಗೂ ಧಾರವಾಡದ ರಾಘವ ಕಮ್ಮಾರ ಮತ್ತು ತಂಡದಿಂದ ರಂಗಸಂಗೀತ ಪ್ರಸ್ತುತಗೊಂಡಿತು.