-ಅಧಿಕೃತ ಆಟೋ ಸ್ಟ್ಯಾಂಡಗಳಲ್ಲಿಯೇ ಆಟೋ ನಿಲ್ಲಿಸಲು ಚಾಲಕರಿಗೆ ಎಸ್ಪಿ ಪ್ರದೀಪ ಗುಂಟಿ ಸೂಚನೆ
ಕನ್ನಡಪ್ರಭ ವಾರ್ತೆ ಬೀದರ.
ಆಟೋ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸಿ ಶಿಸ್ತನ್ನು ಕಾಪಾಡಿಕೊಂಡು ಆಟೋ ಹತ್ತುವ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸೂಚಿಸಿದರು.ಅವರು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬೀದರ್ ನಗರದ ಆಟೋ ಚಾಲಕರ ಸಮಸ್ಯೆಗಳನ್ನು ಆಲಿಸಿ ಸಂಚಾರಿ ನಿಯಮಗಳ ಹಾಗೂ ಸುರಕ್ಷತೆ ಬಗ್ಗೆ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ಆಟೋಗಳು ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡದೇ ಪಾರ್ಕಿಂಗ್ ಸ್ಥಳದಲ್ಲಿ ಮಾತ್ರ ಆಟೋ ನಿಲ್ಲಿಸಿ ಮತ್ತು ನಗರದ ಸಂಚಾರ ಶಿಸ್ತು ಕಾಪಾಡುವುದು ಜವಾಬ್ದಾರಿಯಾಗಿರುತ್ತದೆ.
ಬೀದರ್ ನಗರದಲ್ಲಿ 10 ಅಧಿಕೃತ ಆಟೋ ಸ್ಟಾಂಡ್ಗಳಿವೆ. ಬೀದರ್ ನಗರದಲ್ಲಿ ಪೊಲೀಸ್ ಇಲಾಖೆ ಈಗಾಗಲೇ 10 ಅಧಿಕೃತ ಆಟೋ ಸ್ಟಾಂಡ್ಗಳು ಗುರ್ತಿಸಿದ್ದು, ಅದನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದು, ಇನ್ನೂ 6 ಹೊಸ ಸ್ಟಾಂಡ್ ಗಳನ್ನು ಗುರತಿಸಲಾಗುವುದು. ಆಟೋ ಚಾಲಕರು ತಮ್ಮ ಆಟೋ ಅಧಿಕೃತ ಸ್ಟಾಂಡ್ನಲ್ಲಿ ಸಾಲಾಗಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕು.
ಅವಶ್ಯಕ ದಾಖಲಾತಿ ಆರ್ ಸಿ ಮತ್ತು ವಿಮೆ ಪ್ರಮಾಣ ಪತ್ರ ಮತ್ತು ಮಾಲಿನ್ಯ ಪ್ರಮಾಣ ಪತ್ರ, ಪರ್ಮಿಟ್ ಹೊಂದಿರಬೇಕು. ಶಾಲೆ ಮಕ್ಕಳಿದ್ದರೆ 6 ಮಕ್ಕಳಿಗೆ ಮಾತ್ರ ಆಟೋದಲ್ಲಿ ಕೂಡಿಸಿಕೊಂಡು ಹೋಗುವುದು. ಗೂಡ್ಸ್ ಆಟೋದಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣಿಕರನ್ನು ಕೂಡಿಸಿಕೊಂಡು ಹೋಗಬಾರದು.
ಆಟೋ ಚಾಲಕರು ಸಂಚಾರ ನಿಯಮ ಪಾಲನೆ ಮಾಡಿ ಅಪಘಾತ ತಪ್ಪಿಸುವುದು, ತಮ್ಮ ಪ್ರಾಣದ ಜೊತೆ ಪ್ರಯಾಣಿಕರ ಪ್ರಾಣ ಕಾಪಾಡುವುದು ಮತ್ತು ಕಾನೂನು ಪಾಲನೆ ಮಾಡುವುದು ಚಾಲಕರ ಕರ್ತವ್ಯ.ಸಾರ್ವಜನಿಕರು ವಾಹನ ಚಲಾಯಿಸುವಾಗ ಕಡ್ಡಾಯ ಹೆಲ್ಮೆಟ್ ಧರಿಸುವುದು/ಸೀಟ್ ಬೇಲ್ಟ್ ಹಾಕುವುದರೊಂದಿಗೆ ಸಂಚಾರಿ ನಿಯಮಗಳನ್ನು ಪಾಲಿಸಿ, ಅಪಘಾತ ಆಗುವುದನ್ನು ತಪ್ಪಿಸಿ ತಮ್ಮ/ಪರರ ಪ್ರಾಣ ಉಳಿಸಿಕೋಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
-------
ಫೋಟೊ: ಚಿತ್ರ 14ಬಿಡಿಆರ್56ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬೀದರ್ ನಗರದ ಆಟೋ ಚಾಲಕರ ಸಮಸ್ಯೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಲಿಸಿ ಕೆಲ ಸೂಚನೆಗಳನ್ನು ನೀಡಿದರು.