ಅಸಮಾನತೆ ತೊಡೆದು ಹಾಕಲು ಕಾಯ್ದೆಯ ಬಗ್ಗೆ ಅರಿವು ಅಗತ್ಯ: ಸುಕನ್ಯಾ

KannadaprabhaNewsNetwork | Published : Dec 26, 2024 1:01 AM

ಸಾರಾಂಶ

ಭಾರತೀಯ ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆಯನ್ನು ಶಿಕ್ಷಾರ್ಹ ಕಾಯಿದೆ ಎಂದು ಘೋಷಿಸಿದೆ. ಇದರ ಪ್ರಕಾರ ಸಮಾಜದ ಎಲ್ಲಾ ವರ್ಗದ ಜನರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತ ಅವಕಾಶವಿದೆ. ಸಾರ್ವಜನಿಕ ಸೇವೆಗಳನ್ನು ಗೌರವ ಮತ್ತು ಘನತೆಯಿಂದ ಬಳಸಬಹುದಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ದೇಶದ ಸಂವಿಧಾನವು ಎಲ್ಲಾ ವರ್ಗದ ಜನರಿಗೂ ಸಮಾನ ಹಕ್ಕು ಅವಕಾಶಗಳನ್ನು ಒದಗಿಸಿಕೊಟ್ಟಿದೆ. ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಲು ಕಾಯ್ದೆಯ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷೆ ಸುಕನ್ಯಾ ಸೋಮಸುಂದರ್ ಕರೆ ನೀಡಿದರು.

ಲಿಂಗಪಟ್ಟಣ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಮಳವಳ್ಳಿ, ಗ್ರಾಪಂ ಮತ್ತು ಮಹಾನಾಯಕ ಡಾ.ಭೀಮರಾವ್ ಸೋಷಿಯಲ್‌, ಎಜುಕೇಷನ್ ಅಂಡ್ ಕಲ್ಚರಲ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಅಸ್ಪೃಶ್ಯತೆ ಆಚರಣೆ ಕಾಯ್ದೆ ಬಗ್ಗೆ ಕಾನೂನು ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.

ಪಿಎಸ್ಐ ಬಿ.ಮಹೇಂದ್ರ ಮಾತನಾಡಿ, ಭಾರತೀಯ ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆಯನ್ನು ಶಿಕ್ಷಾರ್ಹ ಕಾಯಿದೆ ಎಂದು ಘೋಷಿಸಿದೆ. ಇದರ ಪ್ರಕಾರ ಸಮಾಜದ ಎಲ್ಲಾ ವರ್ಗದ ಜನರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತ ಅವಕಾಶವಿದೆ. ಸಾರ್ವಜನಿಕ ಸೇವೆಗಳನ್ನು ಗೌರವ ಮತ್ತು ಘನತೆಯಿಂದ ಬಳಸಬಹುದಾಗಿದೆ ಎಂದರು.

ಕನಕಪುರ ಮೂಲದ ಜಂಗಮ ಚಿಗುರು ಸಾಂಸ್ಕೃತಿಕ ಕಲಾ ತಂಡದ ಸದಸ್ಯರ ತಂಡದಿಂದ ಜಾಗೃತಿ ಗೀತೆಗಳ ಗಾಯನ ಮತ್ತು ಅರಿವಿನ ಅಂಗಳ ನಾಟಕ ಪ್ರದರ್ಶನ ನಡೆಯಿತು. ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ವೆಂಕಟೇಗೌಡ, ಲಿಂಗರಾಜು, ಪಾಪಣ್ಣ, ಚೇತನ್ ಕುಮಾರ್, ಪಿಡಿಒ ಲತಾ, ಮುಖ್ಯ ಶಿಕ್ಷಕ ಸಿದ್ದರಾಜು, ಮುಖಂಡರಾದ ಕಾಳಯ್ಯ, ಲಕ್ಷ್ಮೀ, ಟ್ರಸ್ಟ್ ಅಧ್ಯಕ್ಷ ಜಿ.ಕುಮಾರ್, ಶಿವಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮಂಜುನಾಥ್ ನಾಪತ್ತೆ

ಮದ್ದೂರು: ತಾಲೂಕಿನ ಗೆಜ್ಜಲಗೆರೆ ಕಾಲೋನಿ ನಿವಾಸಿ ಮಂಜುನಾಥ್ ಕಾಣೆಯಾಗಿದ್ದಾನೆ ಎಂದು ಪತ್ನಿ ಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಡಿಗೆ ಭಟ್ಟರಾಗಿ ಮದ್ದೂರಿನ ಹಂದಿ ಮಾಂಸದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಕೆಲಸಕ್ಕೆ ಹೋದವರು ಕಳೆದ 2024ರ ನ.23 ರಿಂದ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುಮಾರು 55 ವರ್ಷ ವಯಸ್ಸಿನ ಮಂಜುನಾಥ 5.5 ಅಡಿ ಎತ್ತರ, ದೃಢ ಕಾಯ ಶರೀರ, ಎಣ್ಣೆಗೆಂಪು ಬಣ್ಣದ ಕೂದಲು ಇದ್ದು, ಮನೆಯಿಂದ ಹೊರಡುವಾಗ ತಿಳಿ ಹಸಿರು ಬಣ್ಣದ ತುಂಬಾ ತೋಳಿನ ಷರ್ಟ್, ಕಾಫಿ ಕಲರ್ ಲುಂಗಿ ಧರಿಸಿದ್ದಾನೆ. ಕತ್ತಿನ ಹಿಂಭಾಗ ಕಪ್ಪು ಮಚ್ಚೆ ಇದ್ದು, ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Share this article