ಅನ್ಯ ದೇಶಗಳಲ್ಲಿ ಪೋಲಿಯೋ ಹಿನ್ನೆಲೆ ಭಾರತ ಕಟ್ಟೆಚ್ಚರ

KannadaprabhaNewsNetwork | Updated : Mar 04 2024, 03:49 PM IST

ಸಾರಾಂಶ

ಇಂದು ಪೋಲೀಯೋ ಸಮಸ್ಯೆ ದೇಶದಲ್ಲಿ ಸಂಪೂರ್ಣ ನಿರ್ಮೂಲನವಾಗಿದೆ. ಈ ಕಾಯಿಲೆ ನೆರೆ ದೇಶಗಳಲ್ಲಿ ಕಾಣಿಸುತ್ತಿದ್ದು, ಭಾರತದಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ ಎಂದು ಶಿರಾಳಕೊಪ್ಪ ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹಾಲಿಂಗ ಕೊಳ್ಳೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ

ಇಂದು ಪೋಲೀಯೋ ದೇಶದಲ್ಲಿ ಸಂಪೂರ್ಣ ನಿರ್ಮೂಲನವಾಗಿದೆ. ಈ ಕಾಯಿಲೆ ನೆರೆ ದೇಶಗಳಲ್ಲಿ ಕಾಣಿಸುತ್ತಿದ್ದು, ಭಾರತದಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ ಎಂದು ಶಿರಾಳಕೊಪ್ಪ ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹಾಲಿಂಗ ಕೊಳ್ಳೆ ಹೇಳಿದರು.

ಇಲ್ಲಿಯ ಪುರಸಭೆಯಲ್ಲಿ ಭಾನುವಾರ ಮಕ್ಕಳಿಗೆ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ೫ ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ಪೋಷಕರು ತಪ್ಪದೇ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಆ ಮೂಲಕ ಶಾಶ್ವತವಾಗಿ ಪೋಲಿಯೋ ಸಮಸ್ಯೆ ದೇಶದಿಂದ ದೂರ ಮಾಡಲು ಸಹಕರಿಸಬೇಕು ಎಂದರು.

ಇಂದಿನಿಂದ ಮೂರು ದಿನ ಪಟ್ಟಣದ ೧೩ ಕಡೆ ಲಸಿಕೆ ಹಾಕಲಾಗುತ್ತಿದೆ. ಪ್ರತಿಯೊಬ್ಬರೂ ಮಕ್ಕಳಿಗೆ ಲಸಿಕೆ ಹಾಕಿಸುವ ಮುಖಾಂತರ ಶೇ.೧೦೦ಕ್ಕೂ ಹೆಚ್ಚಿನ ಮಟ್ಟದಲ್ಲಿ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದರು.

ಹಿರಿಯ ಆರೋಗ್ಯ ಸಹಾಯಕ ರೇವಣಪ್ಪ ಮಾತನಾಡಿ ಪಟ್ಟಣದ ಪುರಸಭೆ, ಬಸ್‌ ನಿಲ್ದಾಣ ಸೇರಿದಂತೆ ಲಸಿಕೆಗೆ ಹಾಕಲು ವ್ಯವಸ್ಥೆ ಮಾಡಿದ್ದೇವೆ. ಬಸ್‌ ನಿಲ್ದಾಣದಲ್ಲಿ ಮಕ್ಕಳನ್ನು ಗುರುತಿಸಿ ಅವರ ಪೋಷಕರ ಸಮ್ಮುಖ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲಾಗುತ್ತಿದೆ. 

ಗುರಿಯು ಮೂರು ದಿನ ಇದೇ ಎಂದು ನಾವು ಕಾಯದೇ, ಇಂದೇ ಗುರಿ ತಲುಪಲು ಪ್ರಯತ್ನಿಸೋಣ ಎಂದು ಇಲಾಖೆ ಸಿಬ್ಬಂದಿಗೆ ತಿಳಿಸಿರುವುದಾಗಿ ಹೇಳಿದರು.

ಪುರಸಭೆ ಸದಸ್ಯ ರಾಜಣ್ಣ ತಡಗಣಿ ಮಾತನಾಡಿ, ಪಲ್ಸ್‌ ಪೋಲಿಯೋ ಕಾರ್ಯಕ್ರಮ ಭಾರತ ಸರ್ಕಾರದ ಮುನ್ನೆಚರಿಕೆ ಕ್ರಮವಾಗಿದೆ. ಸದಸ್ಯರಾದ ನಾವು ನಮ್ಮ ವಾಡಿರ್ನಲ್ಲಿ ಸಾಮಾನ್ಯ ಜನರಿಗೆ ಪಲ್ಸ್ ಪೋಲಿಯೋ ಲಸಿಕೆ ಮಹತ್ವ ತಿಳಿಸಿ, ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ಸಮುದಾಯ ಆಸ್ಪತ್ರೆ ಹಿರಿಯ ಆರೋಗ್ಯ ಸಹಾಯಕಿ ಸೌಭಾಗ್ಯ ಮಾತನಾಡಿ, ಲಸಿಕೆ ಕಾರ್ಯಕ್ರಮ ಮೂರು ದಿನ ನಡೆಯುತ್ತಿದ್ದರೂ, ಇದು ಯಶಸ್ವಿಯಾಗಲು ದೇಶಾದ್ಯಂತ ಇಲಾಖೆಯ ಸಾವಿರಾರು ಸಿಬ್ಬಂದಿ ೧ ತಿಂಗಳಿಂದ ಶ್ರಮ ವಹಿಸುತ್ತಿದ್ದಾರೆ. ಅವರೆಲ್ಲರ ಶ್ರಮ ಪ್ರಶಂಸನೀಯ ಎಂದರು.

ಡಾ.ಸಂತೋಷ, ಡಾ.ಸಂಜೀವ ಪವಾರ್, ಪುರಸಭೆ ಸದಸ್ಯ ಮಹಾಬಲೇಶ್, ಪುರಸಭೆ ಹೆಲ್ತ್‌ ಇನ್‌ಸ್ಪೆಕ್ಟರ್‌ ಉಮೇಶ ಸೇರಿದಂತೆ ಆರೋಗ್ಯ ಇಲಾಖೆ, ಪುರಸಭೆ ಸಿಬ್ಬಂದಿ ಹಾಜರಿದ್ದರು.

Share this article