ಹಾವೇರಿ: ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಮರು ಶನಿವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ನಗರದ ಅಂಜುಮನ್ ಏ ಇಸ್ಲಾಂ ಕಮಿಟಿಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಹಾವೇರಿಯ ನಾಗೇಂದ್ರನಮಟ್ಟಿ, ಮೆಹಬೂಬ್ ಸುಬಾನಿ ದರ್ಗಾ, ಶಿವಾಜಿನಗರ, ವಿದ್ಯಾನಗರ, ಲಕಮಾಪುರ, ಸುಭಾಷ್ ಸರ್ಕಲ್, ಶಿವಯೋಗೀಶ್ವರ ನಗರ, ಹೊಸನಗರ, ತಾಜ್ ನಗರ, ಮಕಾನಗಲ್ಲಿ, ಸೂಲಮಟ್ಟಿ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜದವರು ಹೊಸಬಟ್ಟೆ ತೊಟ್ಟು, ಸುಗಂಧ ದ್ರವ್ಯಗಳನ್ನು ಲೇಪಿಸಿಕೊಂಡು ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರು ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಪ್ರಾರ್ಥನೆಯಲ್ಲಿ ಪಾಲ್ಗೊಂಡ್ದಿದ ಮುಸ್ಲಿಂ ಧರ್ಮ ಗುರುಗಳು ಧರ್ಮ ಸಂದೇಶ ನೀಡಿ ಮಾತನಾಡಿ, ಮುಸ್ಲಿಂ ಧರ್ಮದಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ನಮಾಜ್, ಹಜ್, ರೋಜಾ, ಜಕಾತ, ಸಿತ್ರಾ ಈ ಪಂಚ ಸೂತ್ರಗಳನ್ನು ಪಾಲಿಸಿದಾಗ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗಿ ಮೋಕ್ಷ ಪಡೆಯಲು ಸಾಧ್ಯ. ಅನಿವಾರ್ಯ ಸಂದರ್ಭದಲ್ಲಿ ದೇಶ, ಧರ್ಮ ಹಾಗೂ ಮಾನವ ಕುಲಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸನ್ನದ್ಧಗೊಳಿಸುವುದು ಈ ಹಬ್ಬದ ಆಚರಣೆಯ ಉದ್ದೇಶವಾಗಿದೆ ಎಂದರು.
ಈ ವರ್ಷ ಮುಂಗಾರು ಆರಂಭಗೊಂಡಿದ್ದು, ಎಲ್ಲೆಡೆ ಬಿತ್ತನೆ ಕಾರ್ಯ ಚೆನ್ನಾಗಿ ನಡೆಯುತ್ತಿದೆ. ಅನ್ನದಾತ ಸುಖದಿಂದ ಇದ್ದರೆ ಎಲ್ಲರೂ ಚೆನ್ನಾಗಿರುತ್ತಾರೆ. ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆಗಾಗಿ ದೇವರಲ್ಲಿ ಪ್ರಾರ್ಥಿಸೋಣ. ಜತೆಗೆ ಜಿಲ್ಲೆಯ ಬಡಜನರು ಹಾಗೂ ಜನಸಮಾನ್ಯರಿಗೆ ಯಾವುದೇ ರೀತಿ ಸಂಕಷ್ಟಗಳು, ಕಷ್ಟ-ಕಾರ್ಪಣ್ಯಗಳು ಬಾರದ ಹಾಗೆ ಅಲ್ಲಾಹ ದೇವರು ಕರುಣಿಸಲೆಂದು ಸಾಮೂಹಿಕವಾಗಿ ಬೋಧನೆ ಮಾಡುವ ಮೂಲಕ ವಿಶೇಷವಾಗಿ ಪ್ರಾರ್ಥಿಸಿದರು.ಅಂಜುಮನ್ ಏ ಇಸ್ಲಾಂ ಕಮಿಟಿಯ ಅಧ್ಯಕ್ಷ ಇರ್ಫಾನಖಾನ್ ಪಠಾಣ್, ಉಪಾಧ್ಯಕ್ಷ ಚಮನ ಶರೀಫ್ ಮುಲ್ಲಾ, ಅನ್ವರ್ ಕಡೇಮನಿ, ಕಾರ್ಯದರ್ಶಿ ಸೈಯದ ಮುಜಫರ್ ಕೊಟ್ಟಿಗೇರಿ, ಹುಡಾ ನಾಮನಿದೇರ್ಶಿತ ಸದಸ್ಯ ಜಮೀರ್ ಅಹ್ಮದ ಜಿಗರಿ, ಇಸ್ಮಾಯಿಲ್ಸಾಬ್ ಲಬ್ಬೇರ, ಇಸಾಕ್ ಸವಣೂರ, ಶಫಿಸಾಬ್ ಗೋಲಿಬಾರ, ಕಮರ್ಅಲಿ ಕಲ್ಯಾಣಿ, ಮೆಹಬೂಬ್ಅಲಿ ಅತ್ತಾರ, ಬಾಬುಲಾಲ್ ಬಾಲೇಬಾಯಿ, ಸಮಾಜದ ಮುಂಡರಾದ ಪೀರಸಾಬ ಚೋಪದಾರ್, ಬಾಬುಸಾಬ್ ಮೊಮಿನಗಾರ, ದಾದಾಪೀರ ಚೂಡಿಗಾರ, ವಕ್ ಬೋರ್ಡ್ ಮಾಜಿ ಅಧ್ಯಕ್ಷ ನಜೀರ ನದಾಫ್, ಅಲ್ಲಾಭಕ್ಷ ತಿಮ್ಮಾಪುರ, ಸುಭಾನಿ ಚೂಡಿಗಾರ, ಗುಲಾಂ ಬಂಕಾಪುರ, ಅಮೀರ್ಜಾನ್ ಬೇಪಾರಿ, ಗೌಸ್ ಹತ್ತಿಕಾಳ ಹಾಗೂ ನಗರದ ಎಲ್ಲ ಮಸೀದಿಗಳ ಮೌಲಾನಾಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಣೆ: ತ್ಯಾಗ, ಬಲಿದಾನದ ಪ್ರತೀಕವಾದ ಹಾಗೂ ಸಮಾನತೆಯ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ಮುಸಲ್ಮಾನರು ಶನಿವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ರಾಣಿಬೆನ್ನೂರಿನ ಮಾರುತಿ ನಗರದ ಈದ್ಗಾ ಮೈದಾನದಲ್ಲಿ ಬೆಳಗ್ಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಸಮಾಜ ಬಾಂಧವರು ಮೌಲ್ವಿಗಳ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಅಬಾಲ ವೃದ್ಧರಾಗಿ ಎಲ್ಲರೂ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮೌಲ್ವಿಗಳು ಸಮಾಜ ಬಾಂಧವರಿಗೆ ಹಬ್ಬದ ಮಹತ್ವ ಹಾಗೂ ಇಸ್ಲಾಂ ಧರ್ಮದ ತತ್ವಗಳ ಕುರಿತು ಉಪದೇಶ ನೀಡಿದರು. ಆನಂತರ ಒಬ್ಬರಿಗೊಬ್ಬರು ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ಕೋರಿದರು.ಶಾಸಕ ಪ್ರಕಾಶ ಕೋಳಿವಾಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ ಮುಸಲ್ಮಾನರ ಜತೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಅವರಿಗೆ ಹಬ್ಬದ ಶುಭಾಶಯ ಕೋರಿದರು.ಅಂಜುಮನ್ ಸಂಸ್ಥೆ ಅಧ್ಯಕ್ಷ ಎಚ್.ಎಫ್. ಬಿದರಿ, ಉಪಾಧ್ಯಕ್ಷ ಜಬೀವುಲ್ಲಾ ದಾವಣಗೆರೆ, ಕಾರ್ಯದರ್ಶಿ ರಫೀಕ್ ಮೆಣಸಿನಕಾಯಿ, ಖಜಾಂಚಿ ಆರ್.ಬಿ. ಕುಪ್ಪೇಲೂರ, ಸದಸ್ಯರಾದ ಶೇರುಖಾನ ಕಾಬೂಲಿ, ಬಾಷಾಸಾಬ ಹಾವನೂರ, ಅತಾವುಲ್ಲಾ ಉದಗಟ್ಟಿ, ಅಬ್ದುಲ್ ವಹಾಬ್ ಶಾಫಿ, ನೂರುಲ್ಲಾ ಖಾಜಿ, ಮುನವ್ವರ್ ಬಾಗವಾಲೆ, ಸೈಯದ್ ಅಹ್ಮದ್ ಕಿಲ್ಲೇದಾರ, ಇಲಿಯಾಸ್ ಬಳ್ಳಾರಿ, ಜಮ್ಮಣ್ಣಿಸಾಬ್ ಅತ್ತಾರ, ನಗರಸಭಾ ನಾಮಕರಣ ಸದಸ್ಯ ಇರ್ಫಾನ ದಿಡಗೂರ ಮತ್ತಿತರರು ಇದ್ದರು.
ಹಿರೇಕೆರೂರಲ್ಲಿ ಶ್ರದ್ಧಾ-ಭಕ್ತಿಯಿಂದ ಬಕ್ರೀದ್ ಆಚರಣೆ: ತ್ಯಾಗ-ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಶ್ರದ್ಧಾ-ಭಕ್ತಿಯಿಂದ ಶನಿವಾರ ಆಚರಿಸಿದರು. ಪಟ್ಟಣದ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಭಕ್ತಿ-ಭಾವ ಮೆರೆದರು. ಆನಂತರ ಪರಸ್ಪರ ಆಲಿಂಗಿಸಿ ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಅಂಗವಾಗಿ ಮುಸ್ಲಿಮರು ಹೊಸ ಬಟ್ಟೆ ಹಾಗೂ ಟೋಪಿಗಳನ್ನು ತೊಟ್ಟು ಪ್ರಾರ್ಥನೆಗೆ ಆಗಮಿಸಿದ್ದರು. ಸಾಮೂಹಿಕವಾಗಿ ಏಕಕಾಲಕ್ಕೆ ಪ್ರಾರ್ಥನೆ ಮಾಡಿ, ಧರ್ಮಗುರುಗಳ ಉಪದೇಶ ಆಲಿಸಿ ಹಬ್ಬ ಆಚರಿಸಿದರು.