ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗಾಂಧಿ ಭವನದಲ್ಲಿ ರೈತ, ದಲಿತ, ಪ್ರಗತಿಪರ, ಕನ್ನಡ ಪರ ಸಂಘಟನೆಗಳು ಆಯೋಜಿಸಿದ್ದ ಅಮ್ಯೂಸ್ಮೆಂಟ್ ಪಾರ್ಕ್, ಕಾವೇರಿ ಆರತಿ ವಿರುದ್ಧ ಹೋರಾಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾವೇರಿ ನದಿ ಕೈಗಾರಿಕಾ ತ್ಯಾಜ್ಯ, ಚರಂಡಿ ನೀರಿನಿಂದ ಸಂಪೂರ್ಣ ಕಲುಷಿತಗೊಂಡಿವೆ. ಕುಡಿಯುವುದಕ್ಕೂ ಯೋಗ್ಯವಾಗಿಲ್ಲದಷ್ಟು ಕೊಳಕಾಗಿದೆ. ಅದನ್ನು ಸ್ವಚ್ಛಗೊಳಿಸದೆ ಕೊಳಕು ನೀರಿಗೆ ಆರತಿ ಮಾಡುವುದರಿಂದ ಪುಣ್ಯ ಸಿಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಅಮ್ಯೂಸ್ಮೆಂಟ್ ಪಾರ್ಕ್ಗೆ ಖರ್ಚು ಮಾಡುವ ೨೬೬೩ ಕೋಟಿ ರು. ಹಣವನ್ನು ನದಿ ನೀರಿನ ಸ್ವಚ್ಛತೆಗೆ ಬಳಸಿದ್ದರೆ ಜನೋಪಕಾರಿಯಾಗುತ್ತಿತ್ತು. ಆದರೆ, ಸರ್ಕಾರಕ್ಕೆ ಮನರಂಜನಾ ಪಾರ್ಕ್ ಬೇಕು. ರೈತರಿಗೆ ಕೃಷಿ ಬೇಕಿದೆ. ಅದಕ್ಕಾಗಿ ಜಿಲ್ಲೆಯ ಜನರನ್ನು ಮೊದಲು ಜಾಗೃತಿಗೊಳಿಸಬೇಕು. ಅವರೆಲ್ಲರಿಂದಲೂ ಯೋಜನೆಯ ವಿರುದ್ಧ ಸಹಿ ಸಂಗ್ರಹಿಸಬೇಕು. ಕಾವೇರಿ ನೀರಿಗೆ ಎಷ್ಟು ಕಲುಷಿತಗೊಂಡಿದೆ, ಕುಡಿಯಲು ಯೋಗ್ಯವಿಲ್ಲದಿರುವ ಪರಿಸ್ಥಿತಿ, ಕೃಷಿಯ ಮೇಲೆ ಯೋಜನೆಯಿಂದ ಉಂಟಾಗುವ ಪರಿಣಾಮ, ಅಣೆಕಟ್ಟು ಸುರಕ್ಷತೆಗೆ ಆಗುವ ಅಪಾಯ, ಅಣೆಕಟ್ಟೆಗೆ ಆಗಿರುವ ಆಯಸ್ಸು ಸೇರಿದಂತೆ ಹಲವಾರು ಅಂಶಗಳ ಮೂಲಕ ನ್ಯಾಯಾಲಯದ ಗಮನ ಸೆಳೆಯಬೇಕು. ನಮ್ಮ ವಕೀಲರಿಗೆ ಇದೆಲ್ಲದರ ದಾಖಲೆಗಳನ್ನು ನೀಡಿ ನ್ಯಾಯಾಧೀಶರಿಗೆ ಮನವರಿಗೆ ಮಾಡಿಕೊಡಬೇಕು. ಆಗ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ವಿರುದ್ಧದ ಹೋರಾಟ ಯಶಸ್ಸು ಕಾಣಲು ಸಾಧ್ಯ ಎಂದರು.ಮೈಸೂರಿನ ಪುರಾತತ್ವ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಎನ್.ಎಸ್.ರಂಗರಾಜು ಮಾತನಾಡಿ, ಕೃಷ್ಣರಾಜಸಾಗರ ಜಲಾಶಯ ಪಾರಂಪರಿಕ ಪ್ರದೇಶದಲ್ಲಿದೆ, ಅಣೆಕಟ್ಟೆಯನ್ನು ಚುರುಕಿಗಾರೆಯಿಂದ ನಿರ್ಮಿಸಲಾಗಿದೆಯೇ ವಿನಃ ಕಬ್ಬಿಣ, ಸಿಮೆಂಟ್, ಇಟ್ಟಿಗೆಯನ್ನು ಬಳಸಿಲ್ಲ. ಭೂಮಿಯಿಂದ ೮೦ ರಿಂದ ೧೦೦ ಅಡಿ ಆಳದ ಶಿಲಾಪದರದ ಮೇಲೆ ೫೦ ಅಡಿ ಅಗಲ, ೧೨೫ ಅಡಿ ಎತ್ತರಕ್ಕೆ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಯಾವುದೇ ಒಂದು ಕಟ್ಟಡ, ಅಣೆಕಟ್ಟೆಗೆ ೬೦ ರಿಂದ ೭೦ ವರ್ಷವಾದರೆ ಅದು ತನ್ನಿಂತಾನೇ ಪಾರಂಪರಿಕ ಪ್ರದೇಶವಾಗಿ ಘೋಷಣೆಯಾಗುತ್ತದೆ ಎಂದರು.
ಪಾರಂಪರಿಕ ಸಂರಕ್ಷಣಾ ಸಮಿತಿ ಪ್ರತಿ ಜಿಲ್ಲೆಯಲ್ಲೂ ಇದ್ದು ಅದಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಅವರೇ ಇಂತಹವುಗಳನ್ನು ಗುರುತಿಸಿ ಪಾರಂಪರಿಕ ಪ್ರದೇಶ, ಕಟ್ಟಡಗಳೆಂದು ಘೋಷಿಸಬೇಕು. ಈ ಪಾರಂಪರಿಕ ಪ್ರದೇಶದ ೩೫೦ ಸುತ್ತಳತೆಯಲ್ಲಿ ಏನೂ ಇರಬಾರದು ಎಂದು ಕಾನೂನೇ ಇದೆ. ಮೈಸೂರು, ಬಿಜಾಪುರ, ಬೆಂಗಳೂರಿನಲ್ಲಿ ಮಾತ್ರ ಈ ಸಮಿತಿ ಸಕ್ರಿಯವಾಗಿದ್ದು, ಉಳಿದ ಜಿಲ್ಲೆಗಳಲ್ಲಿ ನಾಮಕಾವಸ್ಥೆಯಾಗಿ ಉಳಿದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಾವೇರಿ ವಿಚಾರವಾಗಿ ಸಂಶೋಧನಾ ವರದಿಯೊಂದನ್ನು ತಯಾರಿಸಿದ್ದು, ಕಾವೇರಿ ಹರಿಯುವ ಹಾದಿಯಲ್ಲಿ ೧೩೦ ಸ್ಥಳಗಳನ್ನು ಗುರುತಿಸಲಾಗಿದೆ.ಕೆರೆತೊಣ್ಣೂರು, ಭೂವರಾಹನಾಥ, ಶಿವನಸಸಮುದ್ರ ಸೇರಿದಂತೆ ಇತರೆ ಕಡೆಗಳಲ್ಲಿ ಕಾವೇರಿ ಆರತಿ ಮಾಡಲಿ. ಆದರೆ, ಕೆಆರ್ಎಸ್ನಲ್ಲಿ ಮಾಡುವುದು ಮಾತ್ರ ಬೇಡ. ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಧಾರ್ಮಿಕವಾಗಿ ಸೆಳೆಯುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ಸಭೆಗೆ ತಿಳಿಸಿದರು.
ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಬೆಂಗಳೂರಿಗೆ ಕುಡಿಯುವ ನೀರನ್ನು ಕೆಳಭಾಗದಿಂದ ತೆಗೆದುಕೊಂಡು ಹೋಗುತ್ತಿದ್ದಾರೆ. ಆರನೇ ಹಂತದಲ್ಲಿ ಮೇಲ್ಭಾಗದಿಂದಲೇ ೧೦ ಟಿಎಂಸಿ ನೀರನ್ನು ಕೊಂಡೊಯ್ಯಲು ನಿರ್ಧರಿಸಿದ್ದರು. ಆನಂತರ ಅದು ೬ ಟಿಎಂಸಿಗೆ ಇಳಿದು ೪ ಟಿಎಂಸಿ ಬೆಂಗಳೂರಿಗೆ ಮತ್ತೆರಡು ಟಿಎಂಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಯಿತು. ಇದರಿಂದ ಮದ್ದೂರು, ಮಳವಳ್ಳಿ, ಟಿ.ನರಸೀಪುರ ತಾಲೂಕಿನ ಕೃಷಿ ಪ್ರದೇಶ ಬರಡಾಗುವ ಆತಂಕವಿದೆ. ಜೊತೆಗೆ ವಿಶ್ವದಲ್ಲಿ ಯಾವ ಕಾನೂನಿನಲ್ಲೂ ಕುಡಿಯುವ ನೀರಿಗೆ ಇಂತಿಷ್ಟೇ ಪ್ರಮಾಣವನ್ನು ನಿಗದಿಪಡಿಸಿಲ್ಲ. ಆದರೆ, ಕಾವೇರಿ ನ್ಯಾಯಮಂಡಳಿ ಕುಡಿಯುವ ನೀರಿನ ಪ್ರಮಾಣವನ್ನು ನಿಗದಿಪಡಿಸಿ ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡಿದೆ ಎಂದರು.ಸಭೆಯಲ್ಲಿ ರೈತನಾಯಕಿ ಸುನಂದಾ ಜಯರಾಂ, ರೈತ ಮುಖಂಡರಾದ ಕೆ.ಬೋರಯ್ಯ, ಕೆಂಪೂಗೌಡ, ಇಂಡುವಾಳು ಚಂದ್ರಶೇಖರ್, ಕನ್ನಡಸೇನೆ ಎಚ್.ಸಿ.ಮಂಜುನಾಥ್, ಮೈಸೂರಿನ ಕುಸುಮಾ, ದಸಂಸದ ಎಂ.ವಿ.ಕೃಷ್ಣ, ಕೆ.ವಿ.ಯಶೋದಾ ರಾಜಣ್ಣ, ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಅಂಬುಜಮ್ಮ ಮತ್ತಿತರರಿದ್ದರು.ಮೊದಲು ಕಲುಷಿತ ಕಾವೇರಿಯನ್ನು ಶುದ್ಧೀಕರಿಸಿ: ಎ.ಟಿ.ರಾಮಸ್ವಾಮಿ
ಕನ್ನಡಪ್ರಭ ವಾರ್ತೆ ಮಂಡ್ಯಕಲುಷಿತಗೊಂಡಿರುವ ಕಾವೇರಿ ನದಿಯನ್ನು ಮೊದಲು ಶುದ್ಧೀಕರಣ ಮಾಡಿ. ಕುಡಿಯಲು ಯೋಗ್ಯವಲ್ಲದಂತೆ ಮಲಿನಗೊಂಡಿರುವ ಕಾವೇರಿಗೆ ಆರತಿ ಬೆಳಗಲು ಹೊರಟಿರುವ ಕಾಂಗ್ರೆಸ್ನ ನಡೆ ನಾಟಕೀಯವಲ್ಲದೆ ಮತ್ತೇನು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು.
ನಗರದ ಗಾಂಧಿ ಭವನದಲ್ಲಿ ರೈತ, ದಲಿತ, ಪ್ರಗತಿಪರ, ಕನ್ನಡ ಪರ ಸಂಘಟನೆಗಳು ಆಯೋಜಿಸಿದ್ದ ಅಮ್ಯೂಸ್ಮೆಂಟ್ ಪಾರ್ಕ್, ಕಾವೇರಿ ಆರತಿ ವಿರುದ್ಧ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ದೇವಸ್ಥಾನವನ್ನು ಸ್ವಚ್ಛಗೊಳಿಸಿ ತಾನೇ ದೇವರನ್ನು ನಾವು ಪೂಜಿಸುವುದು. ಅದೇ ರೀತಿ ಕಲುಷಿತಗೊಂಡಿರುವ ಕಾವೇರಿಯನ್ನು ಮೊದಲು ಶುದ್ಧೀಕರಣ ಮಾಡಬೇಕು. ಆನಂತರ ಅದಕ್ಕೆ ಪೂಜೆ ಸಲ್ಲಿಸಿದರೆ ಅದಕ್ಕೊಂದು ಮಹತ್ವ ಬರುತ್ತದೆ. ತ್ಯಾಜ್ಯದಿಂದ ತುಂಬಿರುವ ಕೊಳಕು ನೀರಿಗೆ ಪೂಜೆ ಸಲ್ಲಿಸುವುದರಿಂದ ಕಾಂಗ್ರೆಸ್ ನಾಯಕರ ಭಕ್ತಿಯ ಪರಾಕಾಷ್ಠೆಯೋ ಅಥವಾ ಇದರ ಹಿಂದೆ ಹಣ ಮಾಡುವ ಹುನ್ನಾರವಿದೆಯೋ ಎಂದು ಅನುಮಾನ ವ್ಯಕ್ತಪಡಿಸಿದರು.
ಕೆಆರ್ಎಸ್ ಸಂರಕ್ಷಿತ ಪ್ರದೇಶ. ಅಲ್ಲಿ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವ ಮುನ್ನ ಅಣೆಕಟ್ಟು ಸುರಕ್ಷತಾ ಸಮಿತಿಯಿಂದ ವರದಿ ಪಡೆಯಬೇಕು. ಅಣೆಕಟ್ಟು ಸಾಮರ್ಥ್ಯದ ಪ್ರಮಾಣಪತ್ರ ಪಡೆಯಬೇಕು. ಏನೂ ಇಲ್ಲದೆ ಏಕಾಏಕಿ ಅಣೆಕಟ್ಟು ಜಾಗದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ನಂತಹ ಯೋಜನೆಗಳನ್ನು ಕೈಗೊಳ್ಳುವುದು ಅವೈಜ್ಞಾನಿಕ. ಅಪಾಯಕಾರಿ ಎಂದರು.