ಗದಗ: ಸಣ್ಣ ಕೈಗಾರಿಕೆ ಸೇರಿದಂತೆ ವಿವಿಧ ಕೈಗಾರಿಕೋದ್ಯಮಿಗಳಿಗೆ ಬ್ಯಾಂಕ್ನವರು ಸಾಲ ಒದಗಿಸುವಲ್ಲಿ ಸೂಕ್ತ ಕ್ರಮ ವಹಿಸಿ ಮಾರ್ಗದರ್ಶನ ನೀಡಬೇಕು. ಕೈಗಾರಿಕೆ ಕ್ಷೇತ್ರದಲ್ಲಿ ಸಮರ್ಪಕ ಪ್ರಮಾಣದಲ್ಲಿ ಸಾಲ ನೀಡಿಕೆಯಾದರೆ ಇದರಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗಿ ಯುವ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಹ ಲಭಿಸಲಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಲೀಡ್ ಬ್ಯಾಂಕ್ದ (ಡಿಸಿಸಿ ಮತ್ತು ಡಿಎಲ್ಆರ್ಸಿ) ಸಲಹಾ ಸಮಿತಿ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಬ್ಯಾಂಕ್ಗಳು ಪ್ರಮುಖ ಪಾತ್ರ ವಹಿಸುತ್ತವೆ. ಬ್ಯಾಂಕ್ ನವರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿದರೆ ಜಿಲ್ಲೆಯು ಶೀಘ್ರವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಸಣ್ಣ ಕೈಗಾರಿಕೆ ಸೇರಿದಂತೆ ವಿವಿಧ ಕೈಗಾರಿಕೆ ಉದ್ದಿಮೆಗಳಿಗೆ ಬ್ಯಾಂಕ್ನವರು ಸಾಲ ನೀಡುವ ಪ್ರಕ್ರಿಯೆಯಲ್ಲಿ ಏನಾದರೂ ಸಮಸ್ಯೆಗಳು ಎದುರಾದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳೊಂದಿಗೆ ಸೂಕ್ತ ರೀತಿಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದರು.ಸರ್ಕಾರದಿಂದ ಜಾರಿಗೊಂಡಿರುವ ವಿವಿಧ ಜನಪರ ಯೋಜನೆಗಳ ಆರ್ಥಿಕ ಸೌಲಭ್ಯವನ್ನು ಬ್ಯಾಂಕ್ಗಳ ಮುಖಾಂತರ ನಿಗದಿತ ಕಾಲಮಿತಿಯಲ್ಲಿಯೇ ದೊರಕಿಸಿದರೆ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಬಡಜನರು ಹಾಗೂ ರೈತರಿಗೆ ಬ್ಯಾಂಕ್ನವರ ಸರಿಯಾದ ಮಾರ್ಗದರ್ಶನ ಹಾಗೂ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.ಗದಗ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ರೈತರಿಗೆ ಸಾಲ ನೀಡುವಾಗ ವಿನಾಕಾರಣ ವಿಳಂಬ ಮಾಡಬಾರದು. ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ಪ್ರೋತ್ಸಾಹವಿದೆ. ಈ ನಿಟ್ಟಿನಲ್ಲಿ ಆಯಾ ಸಂಬಂಧಿತ ಇಲಾಖೆಯವರೊಂದಿಗೆ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗುವಂತೆ ಸಭೆ ಜರುಗಿಸಿ ಕ್ರಮ ಕೈಗೊಳ್ಳಬೇಕು ಎಂದರು.ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಖಾತೆಗೆ ಡಿಬಿಟಿ ಮುಖಾಂತರ ಹಣ ಜಮೆಯಾಗುತ್ತಿದ್ದರೆ ಅಂತಹ ಹಣವನ್ನು ಯಾವುದೇ ಕಾರಣಕ್ಕೂ ಬ್ಯಾಂಕ್ ನಿಂದ ಸಾಲ ನೀಡಿಕೆಯ ಹಣದೊಂದಿಗೆ ಹೊಂದಾಣಿಕೆ ಮಾಡಬಾರದು. ಬ್ಯಾಂಕ್ ನಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯವ ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬಂದಾಗ ವಿನಾ ಕಾರಣ ಅರ್ಜಿಯನ್ನು ತಿರಸ್ಕರಿಸದೇ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅರ್ಜಿಯನ್ನು ಸ್ವೀಕರಿಸಿ ಜಿಲ್ಲೆಯ ಆರ್ಥಿಕ ಪ್ರಗತಿಗೆ ಬ್ಯಾಂಕ್ ಅಧಿಕಾರಿಗಳು ಕಾರ್ಯನಿರ್ವಹಿಸುವಂತಾಗಲಿ ಎಂದರು.ಜಿಪಂ ಸಿಇಒ ಭರತ್.ಎಸ್ ಮಾತನಾಡಿ, ಬ್ಯಾಂಕ್ ನವರಿಗೆ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಲ ನೀಡಿಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸಿದರೆ ಜಿಲ್ಲಾಡಳಿತ ಮತ್ತು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ.ವಿ. ಮಾತನಾಡಿ, ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್ನ 182 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಜೂನ್ 2025ರ ಅಂತ್ಯಕ್ಕೆ ಸಾಲ ಠೇವಣಿ ಅನುಪಾತ 98.16 % ಆಗಿರುತ್ತದೆ. ಎಲ್ಲ ಬ್ಯಾಂಕಿನ ನಿಯಂತ್ರಣಾಧಿಕಾರಿಗಳು ಸಾಲ ಠೇವಣಿ ಅನುಪಾತವನ್ನು ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಪ್ರಸಕ್ತ ವಾರ್ಷಿಕ ಸಾಲ ಯೋಜನೆಯಡಿ ಜೂ.30ರ ವರೆಗೆ ಕೃಷಿ ವಲಯಕ್ಕೆ 85461.97 ಲಕ್ಷ ಸಾಲ ನೀಡಿಕೆಯಾಗಿದೆ. ಅದರಲ್ಲಿ (ಲಕ್ಷ ರು.ಗಳಲ್ಲಿ) ಗದಗ– 31186.12 ರು, ಗಜೇಂದ್ರಗಡ- 5260.25, ಲಕ್ಷ್ಮೇಶ್ವರ- 5005.72, ಮುಂಡರಗಿ-7612.03, ನರಗುಂದ- 11916.55 ರು, ರೋಣ- 16473.70 ರು, ಶಿರಹಟ್ಟಿ -8007.60 ರು ಸಾಲ ನೀಡಿಕೆಯಾಗಿದೆ ಎಂದರು.ಕೃಷಿ, ಎಂಎಸ್ಎಂಇ, ಶಿಕ್ಷಣ, ಹೌಸಿಂಗ್, ಇತರೆ ಸೇರಿದಂತೆ ಆದ್ಯತಾ ವಲಯಕ್ಕೆ 128065.08 ಲಕ್ಷ ರು. ಸಾಲ ನೀಡಿಕೆಯಾಗಿದೆ. ಅದರಲ್ಲಿ ತಾಲೂಕಾವಾರು (ಲಕ್ಷ ರು.ಗಳಲ್ಲಿ) ಗದಗ–8450.64, ಗಜೇಂದ್ರಗಡ-6786.15, ಲಕ್ಷ್ಮೇಶ್ವರ– 7076.77, ಮುಂಡರಗಿ- 10236.22, ನರಗುಂದ-16310.93, ರೋಣ-19382.60 ಶಿರಹಟ್ಟಿ- 9821.77 ಸಾಲ ನೀಡಿಕೆಯಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಶಿಶು ಯೋಜನೆಯಲ್ಲಿ 38696 ಅರ್ಜಿಗಳು ಸ್ವೀಕರಿಸಿ 8142 ಲಕ್ಷ ರು. ಕಿಶೋರ ಯೋಜನೆಯಡಿ 33748 ಅರ್ಜಿಗಳು ಸ್ವೀಕರಿಸಿ 31742.94 ಲಕ್ಷ ರು ಹಾಗೂ ತರುಣ ಯೋಜನೆಯಡಿ 1796 ಅರ್ಜಿಗಳನ್ನು ಸ್ವೀಕರಿಸಿ 10935.22 ಲಕ್ಷ ರು. ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಉದ್ಯೋಗಿನಿ, ಪಿಎಂಇಜಿಪಿ (ಪ್ರೈಮ್ ಮಿನಿಸ್ಟರ್ ಎಂಪ್ಲಾಯಮೆಂಟ್ ಜನರೇಶನ್ ಪ್ರೋಗ್ರಾಮ್), ಪಿಎಂ ಸ್ವನಿಧಿ, ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶಿಲನೆ ನಡಸಲಾಯಿತು.ಈ ಸಂದರ್ಭದಲ್ಲಿ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ, ಜಿಲ್ಲಾ ಸಾಲ ಯೋಜನೆ (ಎಸಿಪಿ, ಡಿಸಿಪಿ) ಕೈ ಪಿಡಿಯನ್ನು ಬಿಡುಗಡೆ ಮಾಡಲಾಯಿತು.ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಎಸ್.ಬಿ.ಐ ಆರ್ಬಿಓ ಪ್ರಾದೇಶಿಕ ವ್ಯವಸ್ಥಾಪಕ ನಾಗಸುಬ್ಬಾರೆಡ್ಡಿ ಬಿ., ಸೂರಜ್ ಎಸ್., ಮಯೂರ ಕಾಂಬಳೆ, ಬಸನಗೌಡ್ರ ಕೊಟ್ಟೂರ, ತಾರಾಮಣಿ ಜಿ.ಎಚ್., ಜಿ.ಪಂ. ಯೋಜನಾಧಿಕಾರಿ ಚಳಗೇರಿ, ರಾಧಾ ಮಣ್ಣೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕ್ನ ಅಧಿಕಾರಿಗಳು ಇದ್ದರು.