ಭಾಲ್ಕಿ: ವಿಶ್ವಗುರು ಬಸವಣ್ಣನವರ ವಿಚಾರಧಾರೆ ಈ ಜಗದಲ್ಲಿ ಸೂರ್ಯ ಇರುವವರೆಗೂ ಶಾಶ್ವತವಾಗಿ ಉಳಿಯಲಿವೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಮಹಿಳೆಯರಿಗೆ ಸ್ವಾತಂತ್ರ್ಯ ಕಲ್ಪಿಸಿ ಸಮಸಮಾಜದ ಕಲ್ಪನೆ ಬಿತ್ತಿದರು. ಎಲ್ಲ ಸಮುದಾಯದ ಶರಣರನ್ನು ಅನುಭವ ಮಂಟಪದಲ್ಲಿ ಸೇರಿಸಿ ಸಮಾನತೆ ಸಾರಿದರು. ಬಸವಣ್ಣನವರ ಚಿಂತನೆ, ತತ್ವ, ವಿಚಾರಧಾರೆ ಇಂದು-ಮುಂದು ಎಂದೆಂದಿಗೂ ಪ್ರಸ್ತುತವಾಗಿ ಉಳಿಯಲಿವೆ ಎಂದರು.
ಅಂತಹ ಬಸವಣ್ಣನವರ ವಿಚಾರಧಾರೆ ಜಗದಗಲಕ್ಕೂ ಮುಟ್ಟಿಸಲು ಡಾ.ಬಸವಲಿಂಗ ಪಟ್ಟದ್ದೇವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಮನವಿ ಮೇರೆಗೆ ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಘೋಷಣೆ ಮಾಡುವದರ ಜೊತೆಗೆ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಮಾಡುತ್ತಿರುವುದು ಅತ್ಯಂತ ಸಂತಸದ ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲ ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಇದಲ್ಲದೇ ಬಸವಣ್ಣನವರ ತತ್ವಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಾರ ಗೌರವ ಇದೆ. ಬರುವ ದಿನಗಳಲ್ಲಿ ಬಸವ ಜಯಂತಿಯನ್ನು ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಆಚರಿಸಲು ಕ್ರಮ ಜರುಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ನ್ಯಾಯವಾದಿ ಶ್ರೀಕಾಂತ ಭೋರಾಳೆ, ತಾಲೂಕು ಕರವೇ ಅಧ್ಯಕ್ಷ ಗಣೇಶ ಪಾಟೀಲ್ ಜ್ಯಾಂತಿ, ಕಸಾಪ ನಗರ ಅಧ್ಯಕ್ಷ ಸಂತೋಷ ಬಿ.ಜಿ.ಪಾಟೀಲ್, ಅಶೋಕ ಬಾವುಗೆ, ಕಪಿಲ ಕಲ್ಯಾಣೆ, ಮಲ್ಲಿಕಾರ್ಜುನ ಬಿರಾದಾರ, ಪ್ರಶಾಂತ ಕೊಟಗೀರಾ, ರಾಜಕುಮಾರ ಬಾವುಗೆ, ಸುನಿತಾ ಮಮ್ಮಾ ಸೇರಿದಂತೆ ಬಸವಾಭಿಮಾನಿಗಳು, ಅಕ್ಕನ ಬಳಗದ ಶರಣೆಯರು ಹಾಜರಿದ್ದರು. ಬಸವರಾಜ ಮರೆ ಸ್ವಾಗತಿಸಿದರೆ ದೀಪಕ ಠಮಕೆ ನಿರೂಪಿಸಿದರು.