ಬಸವಣ್ಣ ಇಡೀ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಸಾಂಸ್ಕೃತಿಕ ನಾಯಕ: ಗಂಗೂಬಾಯಿ ಮಾನಕರ

KannadaprabhaNewsNetwork | Published : Feb 18, 2024 1:31 AM

ಸಾರಾಂಶ

ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರದ ಅನಾವರಣ ಸಮಾರಂಭ ಕಾರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಬಸವಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಕಾರವಾರ: ಬಸವಣ್ಣ ಅವರು ಸಮಾಜ ಸುಧಾರಣಾ ಕಾರ್ಯಗಳು ಮತ್ತು ತಮ್ಮ ವಚನಗಳ ಮೂಲಕ ಮೂಢನಂಬಿಕೆ, ಅಜ್ಞಾನದಿಂದ ಇಡೀ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಮಹಾನ್ ಸಾಂಸ್ಕೃತಿಕ ನಾಯಕ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರದ ಅನಾವರಣ ಸಮಾರಂಭದಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಅನುಭವ ಮಂಟಪದ ಮೂಲಕ 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವದ ಮೂಲ ಕಲ್ಪನೆಯನ್ನು ಬಿತ್ತಿದ ಅವರು ಸಂವಿಧಾನದ ಸರ್ವರಿಗೂ ಸಮಬಾಳು, ಸರ್ವರಿಗೆ ಸಮಪಾಲು ಆಶಯದಂತೆ ಎಲ್ಲ ವರ್ಗದ ಜನರಿಗೆ ಎಲ್ಲ ಕಾರ್ಯದಲ್ಲಿ ಸಮಾನ ಅವಕಾಶಗಳನ್ನು ನೀಡುವ ಮೂಲಕ ಮಾನವ ಧರ್ಮವೇ ಶ್ರೇಷ್ಠ ಧರ್ಮ ಎಂದು ಸಾರಿದ್ದರು ಎಂದರು.

ಅಂದಿನ ಕಾಲದಲ್ಲಿದ್ದ ಜಾತಿ ಮತ್ತು ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿ ಲಿಂಗಾಯಿತ ಧರ್ಮದ ಮೂಲಕ ಸಮಾನತೆಯ ತತ್ವ ಬೋಧಿಸಿದ್ದರು. ಅವಿದ್ಯಾವಂತರಿಗೂ ಸರಳವಾಗಿ ಅರ್ಥವಾಗುವಂತೆ ವಚನಗಳನ್ನು ರಚಿಸಿ, ಅವುಗಳ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದರು. ಅವರು ವಚನಗಳ ಮೂಲಕ ನೀಡಿರುವ ಸಂದೇಶಗಳನ್ನು ಎಲ್ಲರೂ ತಮ್ಮ ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಜೀವನ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದು ಅಭಿಪ್ರಾಯಿಸಿದರು.

ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರವನ್ನು ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು, ಸ್ಥಳೀಯಾಡಳಿತದ ಕಚೇರಿಗಳು, ಗ್ರಾಪಂಗಳಲ್ಲಿ ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಮಾತನಾಡಿ, ಉತ್ತರ ಭಾರತ ಮೂಲದ ತಮಗೆ ಪಿಯುಸಿಯಲ್ಲಿ ಬಸವಣ್ಣನವರ ಬಗ್ಗೆ ಸ್ವಲ್ಪ ತಿಳಿದಿತ್ತು. ಆದರೆ ತಾವು ಐಎಎಸ್‌ಗೆ ಅಧ್ಯಯನ ಮಾಡುವಾಗ ಬಸವಣ್ಣನವರ ಬಗ್ಗೆ ಸವಿವರವಾಗಿ ತಿಳಿಯಲು ಸಾಧ್ಯವಾಯಿತು. 900ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಬಸವಣ್ಣನವರು ತಮ್ಮ ವಚನಗಳಲ್ಲಿ ಮಹಿಳಾ ಸಮಾನತೆ, ಮಹಿಳಾ ಸಬಲೀಕರಣ, ಜಾತೀಯ ವ್ಯವಸ್ಥೆ, ಅಹಿಂಸೆ ಮತ್ತು ಪ್ರಜಾಪ್ರಭುತ್ವ ತತ್ವಗಳನ್ನು ಅತ್ಯಂತ ಸರಳವಾಗಿ ತಿಳಿಸಿದ್ದಾರೆ. ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದಂತೆ ಅವರ ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ತಿಳಿಸಿದರು.

ಬಸವಣ್ಣ ಅವರ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಡಿ.ಎಸ್. ದೊಡ್ಡಮನಿ ಮಾತನಾಡಿ, ಬಸವಣ್ಣ ಯುವ ಪರಿವರ್ತಕರು, ಅಂಧಶ್ರದ್ಧೆ, ಸಮಾಜದಲ್ಲಿನ ಢಾಂಬಿಕತೆ, ಸಾಮಾಜಿಕ ಕೆಡುಕುಗಳ ಬಗ್ಗೆ ಮತ್ತು ಜಾತೀಯತೆಯಲ್ಲಿನ ಮೇಳು-ಕೀಳುಗಳನ್ನು ತೊಡೆದುಹಾಕು, ಸಮಾನತೆ ತರಲು ಪ್ರಯತ್ನಿಸಿದ್ದರು. ಮಾನವತ್ವ ಸಾರುವ ಅವರ ವಚನಗಳು ಮಾನವ ಕಲ್ಯಾಣಕ್ಕಾಗಿ ಅತಿ ಅಗತ್ಯವಾಗಿದ್ದು, ಸಮಾನತೆಯ ಸಮಾಜ ನಿರ್ಮಾಣ ಕುರಿತು ಬಸವಣ್ಣ ಆರಂಭಿಸಿದ ಪ್ರಯತ್ನವನ್ನು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದಾಖಲಿಸಿದರು ಎಂದರು.

ಸಭಾ ಕಾರ್ಯಕ್ರಮಕ್ಕೂ ಪೂರ್ವ ಬಸವಣ್ಣ ಅವರ ಭಾವಚಿತ್ರದ ಮೆರವಣಿಗೆ ನಗರದಲ್ಲಿ ನಡೆಯಿತು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಹಾಗೂ ಅಧಿಕಾರಿಗಳು ಇದ್ದರು.

Share this article