ತಿಂಗಳಾಂತ್ಯಕ್ಕೆ ಬಿಬಿಎಂಪಿ ಬಜೆಟ್‌ ಸಾಧ್ಯತೆ; ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ಬಿಜೆಟ್‌ ದಿನಾಂಕ ನಿಗದಿ

KannadaprabhaNewsNetwork | Published : Feb 18, 2024 1:30 AM

ಸಾರಾಂಶ

ರಾಜ್ಯ ಸರ್ಕಾರದ ಬಜೆಟ್‌ ಮಂಡನೆ ಆಗುತ್ತಿದ್ದಂತೆ ಬಿಬಿಎಂಪಿಯು ತನ್ನ 2024-25ನೇ ಸಾಲಿನ ಆಯವ್ಯಯ ಮಂಡನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ತಿಂಗಳಾಂತ್ಯಕ್ಕೆ ಬಜೆಟ್‌ ಮಂಡನೆ ಮಾಡುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದ ಬಜೆಟ್‌ ಮಂಡನೆ ಆಗುತ್ತಿದ್ದಂತೆ ಬಿಬಿಎಂಪಿಯು ತನ್ನ 2024-25ನೇ ಸಾಲಿನ ಆಯವ್ಯಯ ಮಂಡನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ತಿಂಗಳಾಂತ್ಯಕ್ಕೆ ಬಜೆಟ್‌ ಮಂಡನೆ ಮಾಡುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿ ಇದೀಗ ಹಲವಾರು ಯೋಜನೆಯನ್ನು ಘೋಷಿಸಿದೆ. ಪ್ರಮುಖವಾಗಿ ಆಯವ್ಯಯದಲ್ಲಿ ₹3,589 ಕೋಟಿ ಅನುದಾನ ನೀಡಿದೆ. ಇದಲ್ಲದೇ, 15ನೇ ಹಣಕಾಸು ಆಯೋಗದಡಿ ಸುಮಾರು ₹500 ಕೋಟಿವರೆಗೆ ಅನುದಾನ ಬಿಬಿಎಂಪಿಗೆ ಲಭ್ಯವಾಗಲಿದೆ. ಈ ಅನುದಾನ ಒಳಗೊಂಡಂತೆ ಬಿಬಿಎಂಪಿಯ ಆಯವ್ಯಯ ಮಂಡನೆಗೆ ಸಿದ್ಧತೆ ಮಾಡುತ್ತಿದೆ.

ಈ ಕುರಿತು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚೆ ನಡೆಸಿ ಪಾಲಿಕೆ ಬಜೆಟ್‌ ಮಂಡನೆ ದಿನಾಂಕ ನಿಗದಿ ಪಡಿಸಲು ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.ವಲಯವಾರು ಬಜೆಟ್‌?

ಬಿಬಿಎಂಪಿಯಲ್ಲಿಬ ಎಂಟು ವಲಯಗಳಿಗೆ ಒಬ್ಬೊಬ್ಬ ಐಎಎಸ್‌ ಅಧಿಕಾರಿಯನ್ನು ವಲಯ ಆಯುಕ್ತರಾಗಿ ನಿಯೋಜನೆ ಮಾಡಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ. ಹೀಗಾಗಿ, ಈ ಬಾರಿ ವಲಯವಾರು ಬಜೆಟ್‌ ಮಂಡನೆ ಮಾಡುವ ಕುರಿತು ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಈ ಬಗ್ಗೆಯೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.ಬಜೆಟ್‌ ಗಾತ್ರ ಹೆಚ್ಚಳ?

ಕಳೆದ ವರ್ಷ (2023-24) ಬಿಬಿಎಂಪಿಯು ₹11,885 ಕೋಟಿ ವೆಚ್ಚದ ಆಯವ್ಯಯ ಮಂಡನೆ ಮಾಡಲಾಗಿತ್ತು. ಈ ಬಾರಿ ಕನಿಷ್ಠ ಶೇ.5ರಷ್ಟು ಗಾತ್ರ ಹೆಚ್ಚಳವಾಗಲಿದೆ. ಹೆಚ್ಚುವರಿ ₹2 ಸಾವಿರ ಕೋಟಿ ಆದಾಯ ಸಂಗ್ರಹದ ನಿರೀಕ್ಷೆ ಇಟ್ಟುಕೊಂಡಿರುವ ಬಿಬಿಎಂಪಿ, ಹೊಸ ಯೋಜನೆಗಳನ್ನು ಘೋಷಣೆ ಮಾಡಿದರೆ ಗಾತ್ರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

- - -

ಬಿಬಿಎಂಪಿ, ಬಿಡಿಎ ಕಚೇರಿಯಲ್ಲಿ ಬಸವಣ್ಣ ಭಾವಚಿತ್ರ ಅನಾವರಣಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯ ಸರ್ಕಾರದ ಸೂಚನೆಯಂತೆ ಬಿಬಿಎಂಪಿ ಹಾಗೂ ಬಿಡಿಎ ಕಚೇರಿಯಲ್ಲಿ ಶನಿವಾರ ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಅವರ ಭಾವಚಿತ್ರ ಅನಾವರಣಗೊಳಿಸಲಾಯಿತು.

ಬಿಬಿಎಂಪಿಯಲ್ಲಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಬಿಡಿಎ ಕಚೇರಿಯಲ್ಲಿ ಆಯುಕ್ತ ಜಯರಾಂ ಅವರು ಭಾವಚಿತ್ರ ಅನಾವರಣಗೊಳಿಸಿದರು.ಈ ವೇಳೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಸರ್ಕಾರ ಸೂಚನೆಯಂತೆ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಲಾಗಿದೆ. ಪಾಲಿಕೆಯ ಎಲ್ಲ ಅಧಿಕಾರಿಗಳ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ವೇಳೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ, ಉಪ ಆಯುಕ್ತ ಮಂಜುನಾಥ ಸ್ವಾಮಿ, ಕಂದಾಯ ವಿಭಾಗದ ಜಂಟಿ ಆಯುಕ್ತೆ ಲಕ್ಷ್ಮಿದೇವಿ ಇದ್ದರು.

Share this article