ಕನ್ನಡಪ್ರಭ ವಾರ್ತೆ ಹೊಸಪೇಟೆ
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ(ಬಿಡಿಸಿಸಿ) ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಗೆ ನ. ೧೮ರಂದು ಮತ್ತೊಮ್ಮೆ ಮುಹೂರ್ತ ನಿಗದಿಯಾಗಿದೆ. ಈ ಬಾರಿಯಾದರೂ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಡೆಯಲಿದೆಯೇ ಎಂಬ ಕುತೂಹಲ ಮೂಡಿದೆ.ನ. ೮ರಂದು ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆಯಾಗಿತ್ತು. ಕಾಂಗ್ರೆಸ್ನ ಎರಡು ಬಣಗಳಿಂದ ನಾಮಪತ್ರ ಸಲ್ಲಿಕೆಯಾಗಿತ್ತು. ಈಗ ಇನ್ನೂ ಒಮ್ಮತ ಮೂಡದ್ದರಿಂದ ಈ ಬಾರಿಯೂ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಡೆಯುವುದು ಅನುಮಾನವಾಗಿದೆ. ಮತ್ತೆ ಕೋರಂ ಕೊರತೆ ಉಂಟಾಗಿ ಸಭೆ ಮುಂದೂಡಿಕೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆಯ್ಕೆ ಹೇಗೆ?:ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನ. ೮ರಂದು ಸಿರುಗುಪ್ಪದ ಚೊಕ್ಕ ಬಸವನಗೌಡ ಮತ್ತು ಕೂಡ್ಲಿಗಿ ಕೆ. ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಕಂಪ್ಲಿಯ ಮೂಕಯ್ಯಸ್ವಾಮಿ ಮತ್ತು ಕೊಟ್ಟೂರಿನ ದ್ವಾರುಕೇಶ್ ನಾಮಪತ್ರ ಸಲ್ಲಿಸಿದ್ದಾರೆ. ಕೋರಂ ಕೊರತೆಯಿಂದ ಆಯ್ಕೆ ಪ್ರಕ್ರಿಯೆ ಸಭೆ ಮುಂದೂಡಿಕೆಯಾಗಿತ್ತು. ಈಗ ಈ ಸಭೆಯನ್ನು ನ.೧೮ರಂದು ಮಧ್ಯಾಹ್ನ ೨ ಗಂಟೆಗೆ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ವಿಶ್ವಜೀತ್ ಮೆಹತಾ ಕರೆದಿದ್ದಾರೆ. ಈ ಸಭೆಗೂ ಕೋರಂ ಕೊರತೆ ಉಂಟಾದರೆ; ಸಭೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ಕೋರಂಗೆ ಬೇಕು ೯ ನಿರ್ದೇಶಕರು:ಬ್ಯಾಂಕ್ನ ೧೪ ಚುನಾಯಿತ ನಿರ್ದೇಶಕರು, ಸಹಕಾರ ಇಲಾಖೆಯ ಉಪನಿಬಂಧಕರು ಮತ್ತು ಅಪೆಕ್ಸ್ ಬ್ಯಾಂಕ್ ನಾಮನಿರ್ದೇಶಿತ ಸದಸ್ಯರೊಬ್ಬರು ಕೂಡ ಚುನಾವಣೆಯಲ್ಲಿ ಮತದಾನ ಮಾಡಬಹುದು. ಇದರೊಂದಿಗೆ ೧೬ ಜನ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಆಯ್ಕೆ ಪ್ರಕ್ರಿಯೆ ಸಭೆ ನಡೆಸಲು ಕೋರಂಗೆ ೯ ಜನ ನಿರ್ದೇಶಕರು ಸಭೆಯಲ್ಲಿ ಇರಬೇಕು. ೯ ಜನ ನಿರ್ದೇಶಕರು ಸಭೆಗೆ ಬಾರದೇ ಹೋದರೆ ಚುನಾವಣಾಧಿಕಾರಿ ಸಭೆ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ.
ಮತದಾನ ಪ್ರಕ್ರಿಯೆ ಹೇಗೆ?:ನ. ೧೮ರಂದು ಮಧ್ಯಾಹ್ನ ೨ ಗಂಟೆಗೆ ಸಭೆ ನಡೆಯಲಿದೆ. ಮಧ್ಯಾಹ್ನ ೨.೩೦ರ ವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸಾತಿಗೂ ಅವಕಾಶ ಇರುತ್ತದೆ. ಕಣದಲ್ಲಿ ಉಭಯ ಬಣದವರು ಉಳಿದುಕೊಂಡರೆ ನಿರ್ದೇಶಕರು ಗೌಪ್ಯವಾಗಿ ತಮ್ಮ ಮತಗಳನ್ನು ಚಲಾಯಿಸಲಿದ್ದಾರೆ.ಸಿದ್ದರಾಮಯ್ಯ ಅಂಗಳದಲ್ಲಿ ಚೆಂಡು:
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಬಿಡಿಸಿಸಿ) ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಎರಡು ಬಾರಿ ನಿರ್ದೇಶಕರ ಜತೆಗೆ ಸಭೆ ನಡೆಸಿದ್ದಾರೆ. ಒಮ್ಮತದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.