ಬೆನ್ನುಹುರಿ ಅಪಘಾತ, ನಿರ್ವಹಣಾ ಶಿಬಿರದಲ್ಲಿ ಡಾ. ಶಂಕರ ನಾಯ್ಕ
ಬೆನ್ನುಹುರಿ ಅಪಘಾತದಿಂದ ನರಗಳಿಗೆ ಆಕಸ್ಮಿಕವಾಗಿ ಆಗುವ ಘಟನೆಗಳ ಮತ್ತು ಬೆನ್ನು ಮೂಳೆ ಕ್ಷಯ ಲಕ್ಷಣಗಳು ಪತ್ತೆಯಾದರೇ ವೈದ್ಯರ ಬಳಿ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಲ್.ಆರ್. ಶಂಕರ್ ನಾಯ್ಕ ಹೇಳಿದರು.
ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೆನ್ನುಹುರಿ ಅಪಘಾತ ಮತ್ತು ನಿರ್ವಹಣಾ ಶಿಬಿರ ಉದ್ಘಾಟಿಸಿ ಬುಧವಾರ ಮಾತನಾಡಿದ ಅವರು, ಮನುಷ್ಯನ ಬೆನ್ನಿನ ಭಾಗದಲ್ಲಿ ಮೆದುಳಿನಿಂದ ಗುದದ್ವಾರರವರೆಗೂ ಒಟ್ಟು 33 ಗಂಟುಗಳನ್ನು ಒಳಗೊಂಡಿರುತ್ತದೆ. ಮಧ್ಯಭಾಗದಲ್ಲಿ ಹಗ್ಗದ ರೀತಿಯಲ್ಲಿ ಹಾದು ಹೋಗುವ ನೋವನ್ನು ಬೆನ್ನುಹುರಿ ಎನ್ನುತ್ತೇವೆ. ಈ ಮೂಳೆಗಳ ಮಧ್ಯಭಾಗದಲ್ಲಿ ಎರಡು ಮುಖ್ಯವಾದ ಜ್ಞಾನವಾಹಿ ಮತ್ತು ಕ್ರಿಯಾವಾಯಿ ನರಗಳಿದ್ದು ಇವು ಮೆದುಳಿನಿಂದ ದೇಹದ ಎಲ್ಲಾ ಭಾಗಗಳಿಗೂ ಸಂದೇಶ ರವಾನಿಸುವ ಮತ್ತು ಸ್ವೀಕರಿಸುವ ಕಾರ್ಯನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ನರಗಳಿಗೆ ಆಕಸ್ಮಿಕವಾಗಿ ಆಗುವ ಘಟನೆಗಳಿಂದ ಮತ್ತು ಬೆನ್ನು ಮೂಳೆ ಕ್ಷಯ ಕಾಯಿಲೆಯಿಂದ ಬೆನ್ನುಹುರಿಗೆ ಆಘಾತವಾದಾಗ ಅಲ್ಲಿನ ಕೆಳಭಾಗದ ಮನುಷ್ಯನ ದೇಹದ ಎಲ್ಲಾ ಕಾರ್ಯಗಳು ಸ್ಥಗಿತವಾಗುತ್ತದೆ ಎಂದರು.ಇದರಿಂದ ಮಾನಸಿಕ ಒತ್ತಡ ಅಥವಾ ಹಾಸಿಗೆ ಗಾಯ ಮೂತ್ರನಾಳದ ಸೋಂಕು ಕಾಯಿಲೆ, ಜಿಗಿತನ ಊತ ಮತ್ತು ಮಲಬದ್ಧತೆ ಸಮಸ್ಯೆಗಳಿಂದ ಬಳಲುತ್ತಾರೆ. ಬೆನ್ನುಹುರಿ ಅಪಘಾತ ವ್ಯಕ್ತಿಗೆ ಕಾಯಿಲೆಯ ಲಕ್ಷಣಗಳು ಮತ್ತು ಅವರಿಗೆ ಅವಶ್ಯವಿರುವ ಆರೈಕೆ ಮತ್ತು ವೈದ್ಯಕೀಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶ ಈ ಶಿಬಿರದಿಂದ ಆಗಲಿದೆ.
ತಾಲೂಕು ಆರೋಗ್ಯ ಅಧಿಕಾರಿ ಡಾ. ಬಸವರಾಜ ಮಾತನಾಡಿ, ಬೆನ್ನುಹುರಿ ಇರುವ ವ್ಯಕ್ತಿಗಳು ಮತ್ತು ಪೋಷಕರು ಜಾಗೃತಿ ವಹಿಸಬೇಕು. ವೈದ್ಯರ ಸಲಹೆಗಳನ್ನು ತಪ್ಪದೇ ಅನುಸರಿಸಬೇಕು ಎಂದರು.
ಈ ವೇಳೆ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ) ಸಂಸ್ಥೆಯ ಮುಖ್ಯಸ್ಥರು, ವೈದ್ಯಾಧಿಕಾರಿಗಳು, ಆಶಾ ಮೇಲ್ವಿಚಾರಕರು ಹಾಗೂ ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ಇದ್ದರು.