ಬೇಂದ್ರೆ ಅವರಿಗೆ ಪ್ರಶಸ್ತಿ, ಸನ್ಮಾನ ದೊರೆಯದಿರುವುದು ದುರಂತ: ಎಚ್‌.ವಿಶ್ವನಾಥ

KannadaprabhaNewsNetwork | Published : Mar 1, 2025 1:00 AM

ಸಾರಾಂಶ

ಬೇಂದ್ರೆ ಅವರಿಗೆ ಪ್ರಶಸ್ತಿ ಸನ್ಮಾನಗಳು ದೊರೆಯದೇ ಇರುವುದಕ್ಕೆ ಸರ್ಕಾರ ಸಾಧಕರಿಗೆ ಪ್ರಶಸ್ತಿ ವಿತರಿಸುವಲ್ಲಿ ತೋರಿದ ಮನೋಭಾವವೇ ಕಾರಣ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ ಅಸಮಾಧಾನ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ದ.ರಾ. ಬೇಂದ್ರೆ ಅವರಂಥ ಮಹಾಕವಿಗಳಿಗೆ, ಅವರ ಸಾಧನೆಗಳಿಗೆ ದೊರೆಯಬೇಕಾಗಿದ್ದ ಪ್ರಶಸ್ತಿ- ಸನ್ಮಾನಗಳು ದೊರೆಯದೇ ಹೋದದ್ದು ಮಹಾದುರಂತ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ ಅಭಿಪ್ರಾಯಪಟ್ಟರು.

ಇಲ್ಲಿನ ಬೇಂದ್ರೆ ಪ್ರತಿಷ್ಠಾನ ಗೋಕುಲ ರಸ್ತೆಯ ವಿಶ್ವಶ್ರಮ ಚೇತನದಲ್ಲಿನ ಶರ್ಮಾ ಸಭಾಂಗಣದಲ್ಲಿ ಏರ್ಪಡಿಸಿದ್ದ ವರಕವಿ ದ.ರಾ. ಬೇಂದ್ರೆ ಅವರ 129ನೆಯ ಜನ್ಮದಿನದ ಸ್ಮರಣಾರ್ಥ ಕೊಡಮಾಡಿದ “ಮಹಾನ್ ರಾಜನೀತಿಜ್ಞ” ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಬೇಂದ್ರೆ ಅವರಿಗೆ ಪ್ರಶಸ್ತಿ ಸನ್ಮಾನಗಳು ದೊರೆಯದೇ ಇರುವುದಕ್ಕೆ ಸರ್ಕಾರ ಸಾಧಕರಿಗೆ ಪ್ರಶಸ್ತಿ ವಿತರಿಸುವಲ್ಲಿ ತೋರಿದ ಮನೋಭಾವವೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅವರ ವಿಚಾರಗಳು ಕಾರ್ಯರೂಪಕ್ಕೆ ಬಂದರೆ, ಹೊಸ ವಿಶ್ವವೇ ನಿರ್ಮಾಣವಾದೀತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಬೇಂದ್ರೆ ಕಾವ್ಯದಲ್ಲಿ ನವ ಮಾನವ ಸಿದ್ಧಾಂತ ಎಂಬ ವಿಷಯ ಕುರಿತು ಮಾತನಾಡಿದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್. ದುರ್ಗಾದಾಸ್, ಬೇಂದ್ರೆಯವರ ಕಾವ್ಯದಲ್ಲಿ ಮಾನವ ಸಮಾಜದ ಪರಿವರ್ತನೆ ಕುರಿತು ಅನೇಕ ಕ್ರಾಂತಿಕಾರಿ ವಿಚಾರಗಳು ಒಳಗೊಂಡಿದ್ದು, ಈ ವಿಚಾರಗಳು ವಿಶ್ವದಲ್ಲಿ ನವ ಮಾನವೀಯತೆಯ ಪ್ರತಿಷ್ಠಾಪನೆ ಕುರಿತಾಗಿ ಇರುವುದು ಇಂದಿಗೂ ಪ್ರಸ್ತುತ ಹಾಗೂ ಅಧ್ಯಯನಾರ್ಹ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಸಂಚಾಲಕ ಡಾ. ಕೆ.ಎಸ್. ಶರ್ಮಾ ಮಾತನಾಡಿ, ಮಹಾಕವಿ ದ.ರಾ. ಬೇಂದ್ರೆ ಅವರ ಸಮಗ್ರ ಸಾಹಿತ್ಯದಲ್ಲಿಯ ಕ್ರಾಂತಿಕಾರಿ ವಿಚಾರಗಳ ಮರು ಅಧ್ಯಯನ ಇಂದಿನ ಸಮಾಜದ ಪುನರ್ ನಿರ್ಮಾಣದ ಹಾಗೂ ಸರಿಸಮಾನತೆಯ ನವಮಾನವೀಯ ಸಮಾಜದ ನಿರ್ಮಾಣಕ್ಕೆ ಅತ್ಯವಶ್ಯ ಎಂದು ಪುನರುಚ್ಚರಿಸಿದರು.

ಇದೇ ಸಂದರ್ಭದಲ್ಲಿ ದ.ರಾ. ಬೇಂದ್ರೆಯವರ "ಗರಿ " ಕವನ ಸಂಕಲನದ ಲೋಕಾರ್ಪಣೆ ಮಾಡಲಾಯಿತು. ಬೇಂದ್ರೆ ಪ್ರತಿಷ್ಠಾನದ ಸಂಚಾಲಕ ಡಾ. ಕೆ.ಎಸ್. ಶರ್ಮಾ, ಪುನರ್ವಸು ಬೇಂದ್ರೆ, ಸುಮಿತ್ರಾ ಪೋತ್ನಿಸ್ ಹಾಗೂ ಸುಲೋಚನಾ ಪೋತ್ನಿಸ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಎಚ್‌. ವಿಶ್ವನಾಥ ಅವರಿಗೆ ಬೇಂದ್ರೆ ಅವರಂತೆ ಉಡುಪು ಹಾಕಿಸಿ ಪ್ರಶಸ್ತಿ ನೀಡಿದ್ದು ವಿಶೇಷ.

ವಿದುಷಿ ಡಾ. ಗಾಯತ್ರಿ ದೇಶಪಾಂಡೆ ಅವರು “ಬೇಂದ್ರೆ ಗೀತೆ”ಗಳನ್ನು ಹಾಡಿದರು. ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಎನ್. ಬಿ. ಕುಲಕರ್ಣಿ ಡಾ. ಸೋಮಶೇಖರ ಹುದ್ದಾರ, ರವೀಂದ್ರ ಶಿರೋಳ್ಕರ್‌, ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ ಮತ್ತಿತರರು ಇದ್ದರು.

ಸುಲೋಚನಾ ಪೋತ್ನಿಸ್ ಕಾರ್ಯಕ್ರಮ ನಿರೂಪಿಸಿದರು. ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಿ.ಸಿ. ಹಿರೇಮಠ ವಂದಿಸಿದರು.

Share this article